ಬೆಂಗಳೂರು : ದ.ಕ. ಜಿಲ್ಲೆ ಮಂಗಳೂರು ತಾಲೂಕಿನ ಮೂಡುಶೆಡ್ಡೆ ಮತ್ತು ತಿರುವೈಲು ಗ್ರಾಮಗಳ ವಿವಿಧ ಸರ್ವೇ ಸಂಖ್ಯೆಗಳಲ್ಲಿರುವ ಪಿಲಿಕುಳ ನಿಸರ್ಗ ಧಾಮಕ್ಕೆ ಗುತ್ತಿಗೆ ಆಧಾರದ ಮೇರೆಗೆ ನೀಡಿರುವ 356.20 ಎಕರೆ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಸರಿಗೆ ಮಂಜೂರು ಮಾಡುವ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿವೆ.

ಸೆ.18ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿಯೇ ಈ ಬಗ್ಗೆ ಚರ್ಚಿಸಿ ಅಂದೇ ಅಧಿಕೃತ ಘೋಷಣೆ ಹೊರಬೀಳಲಿದೆ. ಈ ಸಂಬಂಧ ಕಂದಾಯ ಇಲಾಖೆಯು ಈಗಾಗಲೇ ಕಡತ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಟಿಪ್ಪಣಿಯ ರಹಸ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.

356 ಎಕರೆಯಲ್ಲಿ ಹರಡಿಕೊಂಡಿರುವ ಪಿಲಿಕುಳ ನಿಸರ್ಗಧಾಮವನ್ನು ವಾಣಿಜ್ಯ, ಪರಿಸರ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಕೂಡಲೇ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿ ಸರಕಾರದ ಅನುಮೋದನೆಗೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿಯು ಇತ್ತೀಚೆಗಷ್ಟೇ ನಿರ್ದೇಶನ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಈ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸುವ ಸಂಬಂಧ ಸಚಿವ ಸಂಪುಟಕ್ಕೆ ಮಂಡಿಸಿರುವ ಕಡತವು ಮುನ್ನೆಲೆಗೆ ಬಂದಿದೆ.

ಆದರೆ ಈ ಜಮೀನನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಬೇಕು ಎಂಬ ಬಗ್ಗೆ ಕಂದಾಯ ಇಲಾಖೆಯು ಕಡತದಲ್ಲಿ ಪ್ರಸ್ತಾವಿಸಿಲ್ಲ. ಈ ಬಗ್ಗೆ ಯಾಕೆ ವಿಜ್ಞಾನ ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸಬೇಕು ಅಥವಾ ಮಂಜೂರು ಮಾಡಬೇಕು ಎಂದು ಆರ್ಥಿಕ ಇಲಾಖೆಯು ಪ್ರಶ್ನಿಸಿರುವುದು ಗೊತ್ತಾಗಿದೆ.

ಜಮೀನನ್ನು ಹಸ್ತಾಂತರಿಸುವ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮತ್ತು ಡಾ.ಜಿ.ಪರಮೇಶ್ವರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಶಾಸಕ ಎಸ್.ಆರ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿಯೇ ನಿಸರ್ಗ ಧಾಮ ಪುನರುಜ್ಜೀ

ವನಕ್ಕೆ ಬಜೆಟ್‌ನಲ್ಲಿ ಸೂಕ್ತ ಅನುದಾನಕ್ಕೆ ಒತ್ತಾಯಿಸಲಿದೆ ಮತ್ತು ಮುಂದಿನ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯಲಿದೆ. ಅದಕ್ಕೂ ಮೊದಲೇ ಸಿಎಂಗೆ ವರದಿ ಸಲ್ಲಿಕೆಯಾಗಲಿದೆ ಎಂದು ಹೇಳಿಕೆ ನೀಡಿದ್ದರು. ಆದರೀಗ 356 ಎಕರೆ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸಲು ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಹಸ್ತಾಂತರವಾಗಲಿದೆ ಎನ್ನಲಾಗಿರುವ ಜಮೀನಿನಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆಯು ಐಟಿಬಿಟಿ ಪಾರ್ಕ್ ಸ್ಥಾಪಿಸಲಿದೆ ಎಂದು ತಿಳಿದು ಬಂದಿದೆ.

ಮಂಗಳೂರು ತಾಲೂಕು ಮೂಡುಶೆಡ್ಡೆ ಗ್ರಾಮ ಮತ್ತು ತಿರುವೈಲು ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ವಿವಿಧ ಆದೇಶಗಳ ಮೂಲಕ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಸರಿಗೆ ಮಂಜೂರು ಮಾಡಲು ಪಿಲಿಕುಳ ನಿಸರ್ಗಧಾಮಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. 356 ಎಕರೆ 2 ಗುಂಟೆ ವಿಸ್ತೀರ್ಣದ ಸರಕಾರಿ ಜಮೀನನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಎ 3 ಪ್ರಕಾರ ಹಸ್ತಾಂತರಿಸುವ ಸಂಬಂಧ ಕಡತ ಮಂಡಿಸಲು ಉಪ ಮುಖ್ಯಮಂತ್ರಿಯೂ ಆಗಿರುವ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿರುವುದು ಗೊತ್ತಾಗಿದೆ.

ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಮೂಡುಶೆಡ್ಡೆ ಗ್ರಾಮದ ಸರ್ವೇ ನಂಬರ್ 80ರಲ್ಲಿ 15 ಎಕರೆ ಜಮೀನನ್ನು ಎಕರೆಯೊಂದಕ್ಕೆ ವಾರ್ಷಿಕ 100 ರೂ. ನಂತೆ 30 ವರ್ಷಗಳ ಅವಧಿಗೆ ಪಿಲಿಕುಳ ನಿಸರ್ಗ ಧಾಮಕ್ಕೆ ನೀಡಲಾಗಿತ್ತು. ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಯೋಜನೆಗಳಿಗಾಗಿ ಗುತ್ತಿಗೆ ನೀಡಲು ಸರಕಾರವು ಪೂರ್ವಾನುಮೋದನೆ ನೀಡಿತ್ತು. ಈ ಗುತ್ತಿಗೆ ಅವಧಿಯು 2030ಕ್ಕೆ ಮುಕ್ತಾಯಗೊಳ್ಳಲಿದೆ. ಅದೇ ರೀತಿ ವಿವಿಧ ಸರ್ವೇ ನಂಬರ್‌ಗಳಲ್ಲಿರುವ 341.46 ಎಕರೆ ವಿಸ್ತೀರ್ಣದ ಜಮೀನನ್ನು ಎಕರೆಯೊಂದಕ್ಕೆ 100 ರೂ.ಗಳ ವಾರ್ಷಿಕ ಶುಲ್ಕದಂತೆ 30 ವರ್ಷಗಳ ಅವಧಿಗೆ ಪಿಲಿಕುಳ ನಿಸರ್ಗಧಾಮಕ್ಕೆ ಗುತ್ತಿಗೆ ನೀಡಿದೆ. ಈ ಗುತ್ತಿಗೆ ಅವಧಿಯು 2036ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಕಡತದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಪಿಲಿಕುಳ ನಿಸರ್ಗಧಾಮಕ್ಕೆ ಗೇಣಿಗೆ ನೀಡಿರುವ ಮೂಡುಶೆಡ್ಡೆ ಗ್ರಾಮದ ಸರ್ವೇ ನಂಬರ್ 93ರಲ್ಲಿ 118.83 ಎಕರೆ ಜಮೀನಿನ ಪೈಕಿ 0.25 ಎಕರೆ ವಿಸ್ತೀರ್ಣ ಕಡಿತಗೊಳಿಸಿ ಈ ಸರ್ವೇ ನಂಬರ್‌ನಲ್ಲಿ 118.57 ಎಕರೆ ಜಮೀನನ್ನು ಸೀಮಿತಗೊಳಿಸಿ ಆದೇಶಿಸಿದೆ. ಇದರ ಪ್ರಕಾರ ಪಿಲಿಕುಳ ನಿಸರ್ಗಧಾಮಕ್ಕೆ ಒಟ್ಟು 356.20 ಎಕರೆ ವಿಸ್ತೀರ್ಣದ ಜಮೀನನ್ನು ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಯೋಜನೆಗಳಿಗಾಗಿ ಗೇಣಿ ಆಧಾರದಲ್ಲಿ ನೀಡಲಾಗಿದೆ ಎಂದು ವಿವರಿಸಲಾಗಿದೆ.

ಗುತ್ತಿಗೆ ನೀಡಲಾದ ಮೂಡುಶೆಡ್ಡೆ ಗ್ರಾಮದ ಸರ್ವೇ ನಂಬರ್ 83/2ರಲ್ಲಿ 2.79 ಎಕರೆ ಜಮೀನು ಪ್ರಸಕ್ತ ಸರ್ವೇ ನಂಬರ್ 83/2ರಲ್ಲಿ 1.40 ಎಕರೆ ಹಾಗೂ 83/3ರಲ್ಲಿ 1.43 ಎಕರೆ, 84/4ರಲ್ಲಿ 1.65 ಎಕರೆ ಎಂದು ಗುರುತಿಸಯಾಗಿದೆ. ಸರ್ವೇ ನಂಬರ್ 83/1ರ 1.39 ಎಕರೆ ಜಮೀನು ಪಿಲಿಕುಳ ಆವರಣದ ಗೋಡೆ ಹೊರ ಗಿದೆ. ಈ ಜಮೀನು ನಿಸರ್ಗ ಧಾಮದ ಸ್ವಾಧೀನದಲ್ಲಿಲ್ಲ. ಬದಲಿಗೆ ರಸ್ತೆ ಇದೆ. 13.93 ಎಕರೆ ಜಮೀನು ಸಾರ್ವಜನಿಕ ರಸ್ತೆ (11.01 ಎಕರೆ) ಮತ್ತು ಮನೆ ನಿವೇಶನ (94 ಸಿಸಿ, ಆಶ್ರಯ ಯೋಜನೆಗೆ 2.90 ಎಕರೆ) ಸರ್ವೇ ನಂಬರ್ 76, 97/1, 102/1 ಮತ್ತು 100 ರಲ್ಲಿನ ಜಮೀನು ಸಾರ್ವಜನಿಕ ರಸ್ತೆ ಉದ್ದೇಶಕ್ಕೆ ಊರ್ಜಿತವಾಗಿರುವುದು ಗೊತ್ತಾಗಿದೆ.

ಸರಕಾರದಿಂದ ಗುತ್ತಿಗೆ ನೀಡಲಾದ ಮೂಡುಶೆಡ್ಡೆ ಮತ್ತು ತಿರುವೈಲು ಗ್ರಾಮದ 9.13 ಎಕರೆ ನವ ಮಂಗಳೂರು ಬಂದು ಪ್ರಾಧಿಕಾರದ ಹೆಸರಿನಲ್ಲಿ ಪಹಣಿ ದಾಖಲಾಗಿದೆ. ಸಾರ್ವಜನಿಕ ರಸ್ತೆ ಉದ್ದೇಶಕ್ಕೆ ಬಳಕೆಯಾಗುತ್ತಿರುವ 0.32 ಎಕರೆ ಹೊರತುಪಡಿಸಿ ಉಳಿಕೆ ಜಮೀನಿನ ಸ್ವಾಧೀನತೆ ಪಿಲಿಕುಳ ನಿಸರ್ಗಧಾಮಕ್ಕೆ ಒಳಪಟ್ಟಿರುವುದು ತಿಳಿದು ಬಂದಿದೆ.

ಹಾಗೆಯೇ ಗುತ್ತಿಗೆ ನೀಡದ ಸರ್ವೇ ನಂಬರ್ 98/2ರಲ್ಲಿ 2.12 ಎಕರೆ ಮತ್ತು ಸರ್ವೇ ನಂಬರ್ 96/1ರಲ್ಲಿ 0.20 ಎಕರೆ ಒಟ್ಟು 2.32 ಎಕರೆ ಜಮೀನು ನವ ಮಂಗಳೂರು ಬಂದರು ಪ್ರಾಧಿಕಾರದ ಹೆಸರಿನಲ್ಲಿ ಪಹಣಿ ದಾಖಲಾಗಿದೆ.

‘ಪ್ರಸಕ್ತ ಜಮೀನಿನ ಪ್ರತೀ ಸರ್ವೇ ನಂಬರ್‌ಗಳಲ್ಲಿನ ಸರ್ವೇ ದಾಖಲೆಗಳನ್ನು ಪರಿಶೀಲಿಸಿ ಡೀಮ್ಡ್ ಫಾರೆಸ್ಟ್ ಆಗಿಲ್ಲವೆಂಬ ಬಗ್ಗೆ ಮತ್ತು ಹೊಳೆ ಪೊರಂಬೋಕು ಇತರ ಜಲಕಾಯ, ಜಲಮೂಲ ವರ್ಗೀಕರಣ ಜಮೀನಾಗಿಲ್ಲವೆಂಬ ಕುರಿತು ಸರ್ವೋಚ್ಚ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿ ನೀಡಿರುವ ಆದೇಶಗಳ ಹಿನ್ನೆಲೆಯಲ್ಲಿ ಮಂಜೂರಾತಿಗೆ ಅರ್ಹವಾಗಿದೆಯೇ ಎಂಬ ಬಗ್ಗೆ ಪರಿಶೀಲನಾತ್ಮಕ ವರದಿಯನ್ನೂ ನೀಡಿದೆ.

ಪ್ರಸ್ತಾವಿತ ಜಮೀನುಗಳು ಸರಕಾರಿ ಅನಾಧೀನ ಜಮೀನಾಗಿವೆ. ಇವು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸ್ವಾಧೀನದಲ್ಲಿದೆ. ನಮೂನೆ 50, 53, 57, 94 ಸಿ ಮತ್ತು 94 ಸಿಸಿ ಅಡಿ ಅರ್ಜಿ ತನಿಖೆಗೆ ಬಾಕಿ ಇಲ್ಲ. ಹೀಗಾಗಿ ಈ ಜಮೀನುಗಳನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಎ 3 ಪ್ರಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಸರಿಗೆ ಮಂಜೂರು ಮಾಡಬಹುದು ಎಂದು ಅಭಿಪ್ರಾಯಿಸಿದೆ.

ಕಂದಾಯ ಇಲಾಖೆಗೊಳಪಟ್ಟಿರುವ ಪಿಲಿಕುಳ ಭೂಮಿಯನ್ನು ಲೀಸ್‌ನಡಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಬಳಕೆ ಮಾಡುತ್ತಿದೆ. ಮೃಗಾಲಯವನ್ನು ಅರಣ್ಯ ಇಲಾಖೆಯಡಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಈ ಹಿಂದೆಯೇ ಸಮಿತಿ ಸಲಹೆ ನೀಡಲಾಗಿತ್ತು. ಆ ಪ್ರಕ್ರಿಯೆ ನಡೆಯುತ್ತಿದ್ದು, ಕಾಯಂ ನೆಲೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ನೇಮಕವಾಗಿದೆ. ಮೃಗಾಲಯ ಪ್ರಾಧಿಕಾರ ನಿರ್ವಹಣೆಗೆ ಒಪ್ಪಿಕೊಂಡಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಮಾಹಿತಿ ನೀಡಿದ್ದನ್ನು ಸ್ಮರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್,

contributor