ಪಂಜಾಬ್ ನಲ್ಲಿ 6 'ಪ್ರಶ್ನೆಪತ್ರಿಕೆ ಸೋರಿಕೆ' ವಿವಾದ: ಈ ಬಗ್ಗೆ AAP ಸರ್ಕಾರದ ನಿಲುವು ಯಾವ ರೀತಿ ಇತ್ತು?
Photo Credit : PTI
NEET ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ವಾರ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಪಂಜಾಬ್ನ ವಿರೋಧ ಪಕ್ಷಗಳು ರಾಜ್ಯದ ಶಾಲೆ ಮತ್ತು ಉನ್ನತ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿವೆ.
ದಿಲ್ಲಿಯ ಜಂತರ್ ಮಂತರ್ ನಲ್ಲಿ ಆಮ್ ಆದ್ಮಿ ಪಾರ್ಟಿ (AAP) ಹಿರಿಯ ನಾಯಕ ಮನೀಶ್ ಸಿಸೋಡಿಯಾ, "ಪಂಜಾಬ್ನಲ್ಲಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ನಾವು ತಕ್ಷಣವೇ ಸಂಬಂಧಪಟ್ಟ ಸಚಿವರನ್ನು ವಜಾಗೊಳಿಸುತ್ತೇವೆ" ಎಂದು ಹೇಳಿದ್ದರು. ಇದರ ಬೆನ್ನಲ್ಲೇ ವಿಪಕ್ಷಗಳು ಬೈನ್ಸ್ ಮತ್ತು ವಿವಾದಾತ್ಮಕ ಪರೀಕ್ಷೆಗಳನ್ನು ನಡೆಸಿದ ಇಲಾಖೆಗಳ ಇತರ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿವೆ.
2022ರಲ್ಲಿ ಎಎಪಿ ಅಧಿಕಾರಕ್ಕೆ ಬಂದ ನಂತರ ಇತ್ತೀಚೆಗೆ ನಡೆದ ಫಾರ್ಮಸಿ ಅಧಿಕಾರಿಗಳ ನೇಮಕಾತಿ ಪರೀಕ್ಷೆ ಸೇರಿದಂತೆ ಪಂಜಾಬ್ನಲ್ಲಿ ಕನಿಷ್ಠ ಆರು ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದಿವೆ ಎಂದು ಕಾಂಗ್ರೆಸ್, ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಒಳಗೊಂಡ ವಿರೋಧ ಪಕ್ಷಗಳು ಆರೋಪಿಸಿವೆ.
ತಮ್ಮ ಸರ್ಕಾರದ ಸಮರ್ಥನೆಗೆ ಇಳಿದಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ "ಒಂದೇ ಒಂದು ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿಲ್ಲ" ಎಂದು ಹೇಳಿದ್ದಾರೆ. ಮಾನ್ ಅವರು "ಸಂಪೂರ್ಣ ಸುಳ್ಳು ಹೇಳುತ್ತಿದ್ದಾರೆ" ಎಂದು ಆರೋಪಿಸಿರುವ ವಿಪಕ್ಷಗಳು, ಅಂತಹ ಆರು ಘಟನೆಗಳನ್ನು ತೋರಿಸಿವೆ.
ಆ ಆರು ಘಟನೆಗಳಲ್ಲಿ ಏನಾಯಿತು? ಆ ಸಮಯದಲ್ಲಿ ಎಎಪಿ ಸರ್ಕಾರ ಹೇಗೆ ಸ್ಪಂದಿಸಿತು ಎಂಬ ವಿವರ ಇಲ್ಲಿದೆ.
ಫಾರ್ಮಸಿ ಅಧಿಕಾರಿಗಳ ನೇಮಕಾತಿ ಪರೀಕ್ಷೆ (2026)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ 454 ಫಾರ್ಮಸಿ ಅಧಿಕಾರಿಗಳ ನೇಮಕಾತಿಗಾಗಿ ಜುಲೈ 19ರಂದು ಪರೀಕ್ಷೆ ನಡೆಸಲಾಗಿತ್ತು. ಫರೀದ್ಕೋಟ್ನ ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಇದನ್ನು ಆಯೋಜಿಸಿದ್ದು, ಪಂಜಾಬಿನ ವಿವಿಧ ಕೇಂದ್ರಗಳಲ್ಲಿ ಸುಮಾರು 7,000 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಅದೇ ದಿನ ಪಂಜಾಬ್ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿ, ಪರೀಕ್ಷೆಯ ವೇಳೆ ಬೃಹತ್ "ಅಂತರರಾಜ್ಯ ನಕಲು ಜಾಲ"ವನ್ನು ಭೇದಿಸಿರುವುದಾಗಿ ತಿಳಿಸಿದರು. ಫಿರೋಜ್ಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ಪೆನ್ ಕ್ಯಾಮೆರಾ ಅಡಗಿಸಿಟ್ಟುಕೊಂಡಿದ್ದ ಕೆಲವು ಅಭ್ಯರ್ಥಿಗಳನ್ನು ಬಂಧಿಸಲಾಯಿತು. ಅವರು ಪ್ರಶ್ನೆಪತ್ರಿಕೆಯನ್ನು ಫೋಟೋ ತೆಗೆದು, ಹರಿಯಾಣದ ಭಿವಾನಿಯಲ್ಲಿ ಕುಳಿತಿದ್ದ ತಮ್ಮ ಸಹಚರನಿಗೆ ಕಳುಹಿಸಿದ್ದರು. ಆತ ಅದನ್ನು ಫರೀದ್ಕೋಟ್ನಲ್ಲಿದ್ದ ಇತರ ಸಹಚರರಿಗೆ ರವಾನಿಸಿದ್ದ. ನಂತರ ಆರೋಪಿಗಳು ವೈರ್ಲೆಸ್ ಬ್ಲೂಟೂತ್ ಸಾಧನಗಳ ಮೂಲಕ ಪರೀಕ್ಷಾ ಕೊಠಡಿಯಲ್ಲಿದ್ದ ಅಭ್ಯರ್ಥಿಗಳಿಗೆ ತಕ್ಷಣವೇ ಉತ್ತರಗಳನ್ನು ಹೇಳಿಕೊಡುತ್ತಿದ್ದರು ಎಂದು ಫರೀದ್ಕೋಟ್ ರೇಂಜ್ ಪೊಲೀಸರು ತಿಳಿಸಿದ್ದಾರೆ.
ಫಾಜಿಲ್ಕಾದ ಸಂತ್ ಕಬೀರ್ ಪಾಲಿಟೆಕ್ನಿಕ್ ಕಾಲೇಜಿನ ಉದ್ಯೋಗಿ ಗುರುಮೀತ್ ಸಿಂಗ್ ಈ ಜಾಲದ ಪ್ರಮುಖ ಸಂಚುಕೋರ ಎಂದು ಗುರುತಿಸಲಾಗಿದೆ. ಪೊಲೀಸರು 28 ಅಭ್ಯರ್ಥಿಗಳು ಮತ್ತು 7 ಏಜೆಂಟ್ಗಳು (ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದವರು) ಸೇರಿದಂತೆ ಒಟ್ಟು 35 ಜನರನ್ನು ವಶಕ್ಕೆ ಪಡೆದಿದ್ದಾರೆ.
ಈ ಪರೀಕ್ಷೆಯು "ಸಂಪೂರ್ಣವಾಗಿ ಅಕ್ರಮದಿಂದ ಕೂಡಿದೆ" ಎಂದು ಆರೋಪಿಸಿ, ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಜುಲೈ 28ರಂದು ಆದೇಶ ನೀಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, "ಮುಂದಿನ ಆಯ್ಕೆ ಪ್ರಕ್ರಿಯೆಯು ಈ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ" ಎಂದು ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿ ಮಾನ್ ಮತ್ತು ಸಚಿವ ಬೈನ್ಸ್ ಸೇರಿದಂತೆ ಎಎಪಿ ಸರ್ಕಾರವು, ಇದು "ಪ್ರಶ್ನೆಪತ್ರಿಕೆ ಸೋರಿಕೆ"ಯಲ್ಲ, ಬದಲಿಗೆ ತಡೆಹಿಡಿಯಲಾದ "ನಕಲು ಜಾಲ" ಎಂದಿದೆ. ಫಾರ್ಮಸಿ ಪರೀಕ್ಷೆಯು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ, ಬದಲಿಗೆ ಆರೋಗ್ಯ ಸಚಿವರ ವ್ಯಾಪ್ತಿಗೆ ಬರುತ್ತದೆ ಎಂದೂ ಬೈನ್ಸ್ ಸ್ಪಷ್ಟಪಡಿಸಿದ್ದಾರೆ.
PSSSB ಗ್ರೂಪ್-ಬಿ ಅಧಿಕಾರಿಗಳ ಪರೀಕ್ಷೆ (2025)
ನೈಬ್ ತಹಶೀಲ್ದಾರ್, ಸೀನಿಯರ್ ಅಸಿಸ್ಟೆಂಟ್, ಟ್ರೆಜರಿ ಆಫೀಸರ್ ಸೇರಿದಂತೆ ಗ್ರೂಪ್-ಬಿ ಅಧಿಕಾರಿಗಳ 408 ಹುದ್ದೆಗಳಿಗೆ ಪಂಜಾಬ್ ಸಬಾರ್ಡಿನೇಟ್ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (PSSSB) 2025ರ ಡಿಸೆಂಬರ್ 21ರಂದು ಪರೀಕ್ಷೆ ನಡೆಸಿತ್ತು. ಇದಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ನಿಯಮಬಾಹಿರ ಘಟನೆಯೊಂದರಲ್ಲಿ, ಮೊದಲ 100 ಟಾಪರ್ಗಳಲ್ಲಿ ಕನಿಷ್ಠ 22 ಅಭ್ಯರ್ಥಿಗಳು ಬಟಿಂಡಾ ಒಂದೇ ಜಿಲ್ಲೆಯವರಾಗಿದ್ದರು. ಅದರಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ಇದು ಪ್ರಶ್ನೆಪತ್ರಿಕೆ ಸೋರಿಕೆ ಶಂಕೆಗೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ, ಪಿಎಸ್ಎಸ್ಎಸ್ಬಿ ವಿಜಿಲೆನ್ಸ್ ಬ್ಯೂರೋಗೆ ತನಿಖೆ ನಡೆಸುವಂತೆ ಕೋರಿತು. ಒಡಹುಟ್ಟಿದವರು, ಗಂಡ-ಹೆಂಡತಿ ಮತ್ತು ಕಸಿನ್ಸ್ ಟಾಪರ್ಗಳ ಪಟ್ಟಿಯಲ್ಲಿದ್ದಾರೆ ಹಾಗೂ ಪ್ರಮುಖ ಶ್ರೇಣಿಗಳು ಕೆಲವೇ ಕುಟುಂಬಗಳ ಪಾಲಾಗಿವೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿದರು.
ವಿಜಿಲೆನ್ಸ್ ಬ್ಯೂರೋ ಈ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ಆರಂಭಿಸಿದ್ದು, ಪ್ರಸ್ತುತ ತನಿಖೆ ಮುಂದುವರಿದಿದೆ. ಬಟಿಂಡಾದ ಪರೀಕ್ಷಾ ಕೇಂದ್ರವೊಂದರ ಅಭ್ಯರ್ಥಿಗಳು ಹಂಚಲಾದ ಕೆಲವು ಪ್ರಶ್ನೆಪತ್ರಿಕೆಗಳಲ್ಲಿ ವೈಟ್ನರ್ ದ್ರವ ಬಳಸಿ ತಿದ್ದುಪಡಿ ಮಾಡಿರುವುದನ್ನು ತೋರಿಸಿದ್ದರು. ಇದು ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆಯಲ್ಲಿ ಅಕ್ರಮ ನಡೆದಿರಬಹುದು ಎಂಬ ಗಂಭೀರ ಸಂಶಯವನ್ನು ಹುಟ್ಟುಹಾಕಿತು.
ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ಆರು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ, ವಿಜಿಲೆನ್ಸ್ ತನಿಖೆ ಬಾಕಿಯಿರುವ ಕಾರಣ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ADO ಪರೀಕ್ಷೆ (2024)
ಪಂಜಾಬ್ ಸಾರ್ವಜನಿಕ ಸೇವಾ ಆಯೋಗ (PPSC) ನಡೆಸಿದ 200 ಕೃಷಿ ಅಭಿವೃದ್ಧಿ ಅಧಿಕಾರಿ (ADO) ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯು 2024ರ ಜೂನ್ 30ರಂದು ನಡೆದಿತ್ತು. ಕನಿಷ್ಠ 4,100 ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಹಲವು ಅಭ್ಯರ್ಥಿಗಳು ಆರೋಪಿಸಿದ್ದರು. ಪರೀಕ್ಷೆಗೆ ಕೆಲವು ದಿನಗಳ ಮೊದಲು, ರಾಜ್ಯದ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು 32 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಕೆಲವು ಅಭ್ಯರ್ಥಿಗಳು ಮುಖ್ಯಮಂತ್ರಿ ಕಚೇರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದರು.
ಪರೀಕ್ಷೆಯನ್ನು ರದ್ದುಗೊಳಿಸುವಂತೆ ಮತ್ತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಲುಧಿಯಾನ ಮತ್ತು ಜಲಂಧರ್ನಲ್ಲಿ ಪ್ರತಿಭಟನೆಗಳು ನಡೆದವು. ಪಂಜಾಬ್ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿತು.
PSTET (2023)
ಎರಡು ಪತ್ರಿಕೆಗಳನ್ನು (ಪೇಪರ್ 1 ಮತ್ತು 2) ಒಳಗೊಂಡ ಪಂಜಾಬ್ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯು (PSTET) 2023ರ ಮಾರ್ಚ್ 12ರಂದು ನಡೆದಿತ್ತು. ಒಂದೂವರೆ ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪ್ರಶ್ನೆಪತ್ರಿಕೆಯಲ್ಲಿದ್ದ ಕನಿಷ್ಠ 50 ಬಹು ಆಯ್ಕೆಯ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಈಗಾಗಲೇ ದಪ್ಪ ಅಕ್ಷರದಲ್ಲಿ ಗುರುತಿಸಲಾಗಿತ್ತು. ಇದು ಬೆಳಕಿಗೆ ಬಂದ ನಂತರ ಪಂಜಾಬ್ ಸರ್ಕಾರ ಮರುದಿನವೇ ಪೇಪರ್-2 ಅನ್ನು ರದ್ದುಗೊಳಿಸಿ, ಪರೀಕ್ಷೆಯನ್ನು ಮುಂದೂಡಿತು. ಈ ಪರೀಕ್ಷೆಯನ್ನು ನಡೆಸಿದ್ದ ಗುರು ನಾನಕ್ ದೇವ್ ವಿಶ್ವವಿದ್ಯಾಲಯದ ಇಬ್ಬರು ಪ್ರೊಫೆಸರ್ಗಳನ್ನು ಅಮಾನತುಗೊಳಿಸಲಾಯಿತು.
ಮುಖ್ಯಮಂತ್ರಿ ಮಾನ್ ಮತ್ತು ಸಚಿವ ಬೈನ್ಸ್ ಇಬ್ಬರೂ ಪರೀಕ್ಷೆಯಲ್ಲಿ ನಡೆದ ಅಕ್ರಮಗಳನ್ನು ಒಪ್ಪಿಕೊಂಡಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದರು. 2023ರ ಏಪ್ರಿಲ್ 30ರಂದು ಪೇಪರ್-2 ಮರುಪರೀಕ್ಷೆ ನಡೆದಿದೆ.
PSEB 12ನೇ ತರಗತಿ ಇಂಗ್ಲಿಷ್ ಪರೀಕ್ಷೆ (2023)
ಪಂಜಾಬ್ ಶಾಲಾ ಶಿಕ್ಷಣ ಮಂಡಳಿ (PSEB) ಅಡಿಯಲ್ಲಿ 2023ರ ಫೆಬ್ರವರಿ 24ರಂದು ನಡೆಯಬೇಕಿದ್ದ 12ನೇ ತರಗತಿಯ ಇಂಗ್ಲಿಷ್ ಬೋರ್ಡ್ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಕಡೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಗುರ್ದಾಸ್ಪುರ ಜಿಲ್ಲೆಯಲ್ಲಿ "ಪ್ರಶ್ನೆಪತ್ರಿಕೆ ಸೋರಿಕೆಯ ನೇರ ಸಾಕ್ಷ್ಯಗಳು" ಸಿಕ್ಕ ನಂತರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದ ಸಚಿವ ಬೈನ್ಸ್, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು. ರಾಜ್ಯಾದ್ಯಂತ ಸುಮಾರು 2.96 ಲಕ್ಷ ವಿದ್ಯಾರ್ಥಿಗಳು ಇದರಿಂದ ತೊಂದರೆಗೆ ಸಿಲುಕಿದ್ದರು.
ಅದೇ ವರ್ಷದ ಮಾರ್ಚ್ 24ಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆ ದಿನ ಮತ್ತೊಂದು ದೊಡ್ಡ ಎಡವಟ್ಟು ಸಂಭವಿಸಿತು. "ಕರ್ತವ್ಯದಲ್ಲಿದ್ದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ" ಆರಂಭದಲ್ಲಿ ಸೋರಿಕೆಯಾಗಿದ್ದ ಪ್ರಶ್ನೆಪತ್ರಿಕೆಗಳನ್ನೇ ಲುಧಿಯಾನ ಮತ್ತು ಫಿರೋಜ್ಪುರ ಜಿಲ್ಲೆಗಳ 185 ವಿದ್ಯಾರ್ಥಿಗಳಿಗೆ ಮತ್ತೆ ಹಂಚಲಾಗಿತ್ತು. ಈ 185 ವಿದ್ಯಾರ್ಥಿಗಳು ಮೇ 22ರಂದು ಮೂರನೇ ಬಾರಿಗೆ ಪರೀಕ್ಷೆಗೆ ಹಾಜರಾಗಬೇಕಾಯಿತು.
ನೈಬ್ ತಹಶೀಲ್ದಾರ್ ಪರೀಕ್ಷೆ (2022)
ಪಿಪಿಎಸ್ಸಿ 2022ರ ಮೇ 22ರಂದು 78 ನೈಬ್ ತಹಶೀಲ್ದಾರ್ ಖಾಲಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಿತ್ತು. ಕನಿಷ್ಠ 42,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ವ್ಯಾಪಕ ನಕಲು ಹಾಗೂ ಪರೀಕ್ಷಾ ಅಕ್ರಮದ ಆರೋಪಗಳ ಹಿನ್ನೆಲೆಯಲ್ಲಿ ಕಂದಾಯ ಮತ್ತು ಪುನರ್ವಸತಿ ಇಲಾಖೆಯು ಪರೀಕ್ಷೆಯನ್ನು ರದ್ದುಗೊಳಿಸಲು ಆದೇಶಿಸಿತು. ನಂತರ 2023ರ ಜೂನ್ 18ರಂದು ಮರುಪರೀಕ್ಷೆ ನಡೆಸಲಾಯಿತು.
ವೈರ್ಲೆಸ್ ಸಾಧನಗಳನ್ನು ಬಳಸಿ ಸಾಮೂಹಿಕ ನಕಲು ಮಾಡಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಪಂಜಾಬ್ ಪೊಲೀಸ್ ತನಿಖೆಯಲ್ಲಿ ಇದು ದೃಢಪಟ್ಟ ನಂತರ ಮರುಪರೀಕ್ಷೆಗೆ ಆದೇಶಿಸಲಾಯಿತು. ವಿಜಿಲೆನ್ಸ್ ಬ್ಯೂರೋ ಕೂಡ ಈ ವಿಷಯದ ಬಗ್ಗೆ ತನಿಖೆ ಆರಂಭಿಸಿತ್ತು.
ಸೌಜನ್ಯ: indianexpress.com