ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಗೆ ಸುಪ್ರೀಂ ಕೋರ್ಟ್‌ ನಿಂದ ಕ್ಲೀನ್ ಚಿಟ್; 11 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಅಂತ್ಯ

Update: 2026-07-30 20:50 IST

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ | Photo Credit : PTI 

ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಕ್ಲೀನ್ ಚಿಟ್ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೊಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಮಾಜಿ ಪ್ರಧಾನಿಯವರನ್ನು ವಿಚಾರಣೆಗೆ ಒಳಪಡಿಸಲು ಸೂಕ್ತ ಆಧಾರಗಳಿಲ್ಲವೆಂದು ಸ್ಪಷ್ಟಪಡಿಸಿತು. ಈ ಮೂಲಕ ಸಿಬಿಐ ವಿಶೇಷ ನ್ಯಾಯಾಲಯ 2015ರಲ್ಲಿ ಹೊರಡಿಸಿದ್ದ ಆದೇಶವನ್ನು ವಜಾಗೊಳಿಸಿತು.

ಮನಮೋಹನ್ ಸಿಂಗ್ ಅವರು 2024ರ ಡಿಸೆಂಬರ್‌ನಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಸುಮಾರು 18 ತಿಂಗಳ ನಂತರ ಈ ತೀರ್ಪು ಬಂದಿದೆ. ಕ್ರಿಮಿನಲ್ ಸಮನ್ಸ್ ವಿರುದ್ಧ ಅವರು ಸಲ್ಲಿಸಿದ್ದ ಮೇಲ್ಮನವಿಯು ದಶಕಕ್ಕೂ ಹೆಚ್ಚು ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯುಳಿದಿತ್ತು.

ಸಿಂಗ್ ನಿಧನದ ನಂತರವೂ ಪ್ರಕರಣದ ಪರಿಶೀಲನೆ ನಡೆಸಿದ ಸುಪ್ರೀಂ ಕೋರ್ಟ್

ಮನಮೋಹನ್ ಸಿಂಗ್ ಅವರ ನಿಧನದ ನಂತರ ಈ ಮೇಲ್ಮನವಿಯು ತಾಂತ್ರಿಕವಾಗಿ ಅನಗತ್ಯವಾಗಿತ್ತು ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಆದರೆ, ಮಾಜಿ ಪ್ರಧಾನಿಯವರ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದ ಆರೋಪಗಳು ಮತ್ತು ಟೀಕೆಗಳನ್ನು ತೆರವುಗೊಳಿಸಲು ಪ್ರಕರಣವನ್ನು ಅದರ ಅರ್ಹತೆಯ ಆಧಾರದ ಮೇಲೆ ಪರಿಶೀಲಿಸುವುದು ಮುಖ್ಯ ಎಂದು ಪೀಠ ತಿಳಿಸಿದೆ.

ಈ ಮೇಲ್ಮನವಿಯನ್ನು ವಜಾಗೊಳಿಸಬಹುದಿತ್ತಾದರೂ, ವಿಚಾರಣಾ ನ್ಯಾಯಾಲಯವು ಸಿಂಗ್ ಅವರನ್ನು ಆರೋಪಿಯನ್ನಾಗಿ ಕರೆಸಿದ ಸನ್ನಿವೇಶಗಳನ್ನು ಮರುಪರಿಶೀಲಿಸಲು ನಿರ್ಧರಿಸಲಾಯಿತು ಎಂದು ನ್ಯಾಯಾಲಯ ಹೇಳಿದೆ.

ಸಿಬಿಐ ಸಲ್ಲಿಸಿದ್ದ ತನಿಖಾ ಮುಕ್ತಾಯ ವರದಿಯನ್ನು ಪರಿಶೀಲಿಸಿದ ನಂತರ, ಸಂಸ್ಥೆಯ ತನಿಖಾ ನಿರ್ಣಯಗಳನ್ನು ತಿರಸ್ಕರಿಸಲು ವಿಚಾರಣಾ ನ್ಯಾಯಾಲಯಕ್ಕೆ ಯಾವುದೇ ಬಲವಾದ ಕಾರಣಗಳಿರಲಿಲ್ಲ ಎಂದು ತ್ರಿಸದಸ್ಯ ಪೀಠ ತೀರ್ಮಾನಿಸಿತು. ಸಿಬಿಐ ತನಿಖೆಯನ್ನು ನಿರ್ಲಕ್ಷಿಸಿ ಸಿಂಗ್ ವಿರುದ್ಧ ಮುಂದುವರಿಯಲು ವಿಶೇಷ ನ್ಯಾಯಾಧೀಶರಿಗೆ ಯಾವುದೇ ಪ್ರಬಲ ಆಧಾರಗಳಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಲ್ಲಿದ್ದಲು ನಿಕ್ಷೇಪ ಪ್ರಕರಣದ ಹಿನ್ನೆಲೆ

ಈ ಪ್ರಕರಣವು 2005ರ ಯುಪಿಎ ಸರಕಾರದ ಅವಧಿಯಲ್ಲಿ ಒಡಿಶಾದ ತಲಬಿರಾ-2 ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದೆ.

ಆ ಸಮಯದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರ ಜೊತೆಗೆ ಕಲ್ಲಿದ್ದಲು ಸಚಿವಾಲಯವನ್ನೂ ನಿರ್ವಹಿಸುತ್ತಿದ್ದರು. ಆದಿತ್ಯ ಬಿರ್ಲಾ ಸಮೂಹದ ಹಿಂಡಾಲ್ಕೋ ಇಂಡಸ್ಟ್ರೀಸ್‌ಗೆ ಈ ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡಿದ್ದು ನಂತರ ತನಿಖೆಗೆ ಒಳಪಟ್ಟಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಸಿಂಗ್ ಅವರು ಯಾವುದೇ ಅಪರಾಧ ಎಸಗಿದ್ದಾರೆ ಅಥವಾ ಅಪರಾಧ ಸಂಚು ನಡೆಸಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿ 2014ರಲ್ಲಿ ಎರಡು ತನಿಖಾ ಮುಕ್ತಾಯ ವರದಿಗಳನ್ನು ಸಲ್ಲಿಸಿತ್ತು.

ಆದರೆ, 2015ರ ಮಾರ್ಚ್‌ನಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು ಈ ವರದಿಗಳನ್ನು ತಿರಸ್ಕರಿಸಿ, ಮುಂದಿನ ಕ್ರಮ ಜರುಗಿಸಲು ಸಾಕಷ್ಟು ಆಧಾರಗಳಿವೆ ಎಂದು ಅಭಿಪ್ರಾಯಪಟ್ಟಿದ್ದರು. ನ್ಯಾಯಾಲಯವು ಸಿಂಗ್, ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಮತ್ತು ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪಾರೇಖ್ ಅವರಿಗೆ ಆರೋಪಿಗಳಾಗಿ ಸಮನ್ಸ್ ಜಾರಿ ಮಾಡಿತ್ತು.

11 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಅಂತ್ಯ

2004 ಮತ್ತು 2009ರ ನಡುವೆ ನಡೆದ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ಕುರಿತು ಭಾರತದ ಮಹಾಲೇಖಪಾಲರು (CAG) 2012ರಲ್ಲಿ ವರದಿ ಬಿಡುಗಡೆ ಮಾಡುವುದರೊಂದಿಗೆ ಈ ಪ್ರಕರಣ ಆರಂಭವಾಯಿತು. ಸರಕಾರವು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆ ಇಲ್ಲದೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಿದ್ದು, ಇದರಿಂದ ಸರ್ಕಾರಿ ಖಜಾನೆಗೆ ಭಾರಿ ನಷ್ಟವಾಗಿದೆ ಎಂದು ವರದಿ ಹೇಳಿತ್ತು. ವಿರೋಧ ಪಕ್ಷಗಳು ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದವು. ಈ ವಿವಾದವು 'Coalgate' ಎಂದೇ ಪ್ರಸಿದ್ಧಿ ಪಡೆಯಿತು.

ಎರಡನೇ ಬಾರಿಗೆ ಪ್ರಧಾನಿಯಾಗಿದ್ದಾಗ ಕಲ್ಲಿದ್ದಲು ಖಾತೆಯನ್ನೂ ನಿರ್ವಹಿಸುತ್ತಿದ್ದ ಮನಮೋಹನ್ ಸಿಂಗ್ ಅವರೇ ಈ ರಾಜಕೀಯ ವಾಗ್ದಾಳಿಯ ಕೇಂದ್ರಬಿಂದುವಾಗಿದ್ದರು. ಅವರು ವೈಯಕ್ತಿಕವಾಗಿ ಹಣ ಪಡೆದಿದ್ದಾರೆ ಎಂಬುದು ಆರೋಪವಾಗಿರಲಿಲ್ಲ, ಬದಲಿಗೆ ಅವರ ಮೇಲ್ವಿಚಾರಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬುದಾಗಿತ್ತು.

ಈ ಗದ್ದಲದ ನಂತರ, ಸಿಬಿಐ 2012ರಲ್ಲಿ ಹಲವು ಕಲ್ಲಿದ್ದಲು ನಿಕ್ಷೇಪ ಹಂಚಿಕೆಗಳ ತನಿಖೆಯನ್ನು ಪ್ರಾರಂಭಿಸಿತು. ಇವುಗಳಲ್ಲಿ ಒಡಿಶಾದಲ್ಲಿ ಹಿಂಡಾಲ್ಕೋ ಸಂಸ್ಥೆಗೆ ಹಂಚಿಕೆಯಾಗಿದ್ದ ತಲಬಿರಾ-2 ಕಲ್ಲಿದ್ದಲು ನಿಕ್ಷೇಪವೂ ಒಂದಾಗಿತ್ತು.

2014ರಲ್ಲಿ ಸುಪ್ರೀಂ ಕೋರ್ಟ್ ಕಲ್ಲಿದ್ದಲು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿತು. ಹಂಚಿಕೆ ಪ್ರಕ್ರಿಯೆಯು ಅನಿಯಂತ್ರಿತವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, 1993ರಿಂದ ಮಾಡಲಾಗಿದ್ದ 214 ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯನ್ನು ರದ್ದುಗೊಳಿಸಿತು. ಇದು ಯುಪಿಎ ಸರಕಾರದ ವರ್ಚಸ್ಸಿಗೆ ಭಾರಿ ಹೊಡೆತ ನೀಡಿತಾದರೂ, ಈ ತೀರ್ಪು ಹಂಚಿಕೆ ಪ್ರಕ್ರಿಯೆಯ ಕಾನೂನುಬದ್ಧತೆಗೆ ಸಂಬಂಧಿಸಿತ್ತೇ ಹೊರತು ಮನಮೋಹನ್ ಸಿಂಗ್ ಅವರ ಅಪರಾಧವನ್ನು ಸಾಬೀತುಪಡಿಸಿರಲಿಲ್ಲ.

ಅದೇ ವರ್ಷ ಸಿಬಿಐ ತಲಬಿರಾ ಪ್ರಕರಣದಲ್ಲಿ ಮುಕ್ತಾಯ ವರದಿಯನ್ನು ಸಲ್ಲಿಸಿತು. ಮಾಜಿ ಪ್ರಧಾನಿಯವರ ವಿರುದ್ಧ ವಿಚಾರಣೆ ನಡೆಸಲು ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಸಂಸ್ಥೆ ತಿಳಿಸಿತು.

2015ರ ಮಾರ್ಚ್‌ನಲ್ಲಿ ಈ ಪ್ರಕರಣವು ನಾಟಕೀಯ ತಿರುವು ಪಡೆಯಿತು. ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ರದ್ದುಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ, ಮನಮೋಹನ್ ಸಿಂಗ್ ಅವರಿಗೆ ಆರೋಪಿಯಾಗಿ ಸಮನ್ಸ್ ಜಾರಿ ಮಾಡಿತು. ಈ ಆದೇಶವು ದೇಶದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತು. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಭಾರತದ ಮಾಜಿ ಪ್ರಧಾನಿಯೊಬ್ಬರು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚನೆ ನೀಡಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಯಾಗಿತ್ತು.

ಇದಾದ ಕೆಲವೇ ವಾರಗಳಲ್ಲಿ, ಅಂದರೆ, 2015ರಲ್ಲೇ ಸುಪ್ರೀಂ ಕೋರ್ಟ್ ಈ ಸಮನ್ಸ್‌ಗೆ ತಡೆ ನೀಡಿತು. ಸಿಬಿಐ ತೀರ್ಮಾನವನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದ್ದು ಸರಿಯೇ ಎಂಬುದನ್ನು ಪರಿಶೀಲಿಸುವವರೆಗೂ ಸಿಂಗ್ ವಿರುದ್ಧದ ಮುಂದಿನ ನ್ಯಾಯಾಂಗ ಕ್ರಮಗಳನ್ನು ತಡೆಹಿಡಿಯಿತು.

ಇದರ ನಂತರ ನಡೆದದ್ದು ವೇಗದ ಕಾನೂನು ಹೋರಾಟವಲ್ಲ, ಬದಲಿಗೆ ಸುದೀರ್ಘ ಕಾಯುವಿಕೆ. ಸರ್ಕಾರಗಳು ಬದಲಾದವು, ರಾಜಕೀಯ ಸನ್ನಿವೇಶಗಳು ರೂಪಾಂತರಗೊಂಡವು, ಈ ಪ್ರಕರಣ ಮಾತ್ರ ವರ್ಷಗಳ ಕಾಲ ಇತ್ಯರ್ಥವಾಗದೆ ಉಳಿಯಿತು. ನಿಗದಿತ ನಿಯಮಾವಳಿಗಳಂತೆಯೇ ತಾವು ನಿರ್ಧಾರ ತೆಗೆದುಕೊಂಡಿದ್ದು, ಯಾವುದೇ ತಪ್ಪು ಮಾಡಿಲ್ಲ ಎಂದು ಮನಮೋಹನ್ ಸಿಂಗ್ ವಾದಿಸುತ್ತಲೇ ಬಂದಿದ್ದರು.

2024ರ ಡಿಸೆಂಬರ್‌ನಲ್ಲಿ ಸಿಂಗ್ ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಈ ಕಾನೂನು ಪ್ರಶ್ನೆ ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ಹಾಗೆಯೇ ಉಳಿದಿತ್ತು.

ಅಂತಿಮವಾಗಿ, 2026ರ ಜುಲೈ 29ರಂದು ನ್ಯಾಯಾಲಯವು ತೀರ್ಪು ನೀಡಿದ್ದು, ಸಿಬಿಐನ ತನಿಖಾ ಮುಕ್ತಾಯ ವರದಿಯನ್ನು ತಿರಸ್ಕರಿಸಲು ವಿಚಾರಣಾ ನ್ಯಾಯಾಧೀಶರಿಗೆ ಸೂಕ್ತ ಆಧಾರಗಳಿರಲಿಲ್ಲ ಎಂದು ಸ್ಪಷ್ಟಪಡಿಸಿತು. 2015ರ ಸಮನ್ಸ್ ಆದೇಶವನ್ನು ರದ್ದುಗೊಳಿಸಿ, ಸಿಬಿಐನ ತನಿಖಾ ಮುಕ್ತಾಯ ವರದಿಯನ್ನು ಪುರಸ್ಕರಿಸುವ ಮೂಲಕ ಸಿಂಗ್ ವಿರುದ್ಧದ ನ್ಯಾಯಾಂಗ ಕ್ರಮಗಳಿಗೆ ಅಂತಿಮ ತೆರೆ ಎಳೆಯಿತು.

ಕಲ್ಲಿದ್ದಲು ಹಗರಣವು ಯುಪಿಎ ಸರಕಾರದ ಕೊನೆಯ ದಿನಗಳ ಸಾಲು ಸಾಲು ವಿವಾದಗಳನ್ನು ನೆನಪಿಸುವ ಪ್ರಮುಖ ಪ್ರಕರಣವಾಗಿತ್ತು. ಈ ವಿವಾದ ಸೃಷ್ಟಿಯಾಗಿ 14 ವರ್ಷಗಳ ನಂತರ, ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದೆ.

ಮಾಜಿ ಪ್ರಧಾನಿ ವಿರುದ್ಧದ ಟೀಕೆಗಳನ್ನು ತೆರವುಗೊಳಿಸಿದ ನ್ಯಾಯಾಲಯ

ಸಿಂಗ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ, ಹೊರಿಸಲಾದ ಆರೋಪಗಳು ಅವರ ಸಾರ್ವಜನಿಕ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತಲೇ ಇವೆ ಎಂದು ವಾದಿಸಿದ ವಕೀಲರು, ವಿಚಾರಣಾ ನ್ಯಾಯಾಲಯವು ಅವರ ವಿರುದ್ಧ ಮಾಡಿದ್ದ ಟೀಕೆಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.

ಸಾಕಷ್ಟು ಆಧಾರಗಳಿಲ್ಲದೆ ಸಿಬಿಐನ ಸುದೀರ್ಘ ತನಿಖಾ ವರದಿಯನ್ನು ತಿರಸ್ಕರಿಸುವ ಮೂಲಕ ವಿಚಾರಣಾ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.

2015ರ ಸಮನ್ಸ್ ಆದೇಶವನ್ನು ರದ್ದುಗೊಳಿಸಿ, ಸಿಬಿಐನ ತನಿಖಾ ಮುಕ್ತಾಯ ವರದಿಯನ್ನು ಪುರಸ್ಕರಿಸುವ ಮೂಲಕ ಅತ್ಯುನ್ನತ ನ್ಯಾಯಾಲಯವು ಈ ಪ್ರಕರಣದ ಕ್ರಿಮಿನಲ್ ಆರೋಪಗಳಿಂದ ಸಿಂಗ್ ಅವರನ್ನು ಸಂಪೂರ್ಣವಾಗಿ ಮುಕ್ತಗೊಳಿಸಿದೆ.

ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದ ಇತರ ಆರೋಪಿಗಳ ವಿರುದ್ಧದ ವಿಚಾರಣೆಗಳು ಪ್ರತ್ಯೇಕವಾಗಿ ಮುಂದುವರಿಯಬಹುದಾದರೂ, ಈ ತೀರ್ಪು ದಿವಂಗತ ಸಿಂಗ್ ಅವರ ಸುದೀರ್ಘ ಕಾನೂನು ಹೋರಾಟಕ್ಕೆ ಅಂತ್ಯ ಹಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News