ಯಾದಗಿರಿಯಲ್ಲಿ ಸಂಭ್ರಮದಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸದಾ ಸ್ಮರಣೀಯ : ಸಚಿವ ಶರಣಬಸಪ್ಪ ದರ್ಶನಾಪುರ
ಯಾದಗಿರಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ನಾವು ಸ್ವಾತಂತ್ರ್ಯಗಳಿಸಿದ್ದು, ಅತ್ಯಮೂಲ್ಯವಾದ ಈ ಸ್ವಾತಂತ್ರ್ಯವನ್ನು ರಕ್ಷಿಸುವ ಸಂಕಲ್ಪದ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರನ್ನೂ ಈ ಶುಭ ಸಂದರ್ಭದಲ್ಲಿ ಸ್ಮರಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು 79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
"ಮಾಡು ಇಲ್ಲವೆ ಮಡಿ", ಎಂದು ಹೇಳಿದ ಮಹಾತ್ಮ ಗಾಂಧೀಜಿ, ಸ್ವಾತಂತ್ರ್ಯವೇ "ನನ್ನ ಜನ್ಮಸಿದ್ಧ ಹಕ್ಕು" ಎಂದು ಗುಡುಗಿದ ಲೋಕಮಾನ್ಯ ಬಾಲಗಂಗಾಧರ ತಿಲಕ್,"ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುವೆ" ಎಂದು ಘರ್ಜಿಸಿದ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಡಾ. ಬಿ. ಆರ್.ಅಂಬೇಡ್ಕರ್, ಮೌಲಾನ ಆಝಾದ್, ಸರ್ದಾರ್ ವಲ್ಲಭಭಾಯ್ ಪಟೇಲ್, ಭಗತ್ ಸಿಂಗ್, ಚಂದ್ರ ಶೇಖರ್ ಆಝಾದ್, ರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರದ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಹಲವು ಹೋರಾಟಗಾರರ ತ್ಯಾಗ, ಬಲಿದಾನಗಳಿಗೆ ಶ್ರದ್ಧಾಪೂರ್ವಕವಾಗಿ ನಮಿಸುವುದಾಗಿ ತಿಳಿಸಿದರು.
ಆಧುನಿಕ ಭಾರತದ ನಿರ್ಮಾತೃ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1947ರ ಆಗಸ್ಟ್ 14 ರಂದು ಮಾಡಿದ ಭಾಷಣ ಸ್ಮರಣೀಯವಾಗಿದೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಬೆಲೆ ತುಂಬಿದ್ದ ನವಭಾರತ ನಿರ್ಮಾಣದ ಅವರ ಸಂಕಲ್ಪದಂತೆ ರಾಜ್ಯ ಸರ್ಕಾರವು ಕೂಡ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ, ಬಡ ಹಾಗೂ ಎಲ್ಲ ವರ್ಗದ ಜನರಲ್ಲಿ ಶಕ್ತಿ ತುಂಬಿದೆ. ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಹೇಳಿದರು.
ಸಂವಿಧಾನದ ತಿದ್ದುಪಡಿ ಕಲಂ 371(ಜೆ) ಮೂಲಕ ಕಲ್ಯಾಣ ಕರ್ನಾಟಕಕ್ಕೆ 5,000 ಕೋ.ರೂಗಳನ್ನು ಒದಗಿಸಿದೆ. ಶಿಕ್ಷಣ, ಆರೋಗ್ಯ, ನೀರಾವರಿ ,ಉದ್ಯೋಗ, ಪ್ರವಾಸೋದ್ಯಮಕ್ಕೆ ಪ್ರಥಮ ಆದ್ಯತೆ ನೀಡಿದೆ. ಇತ್ತೀಚೆಗೆ ಆರೋಗ್ಯ ಅವಿಷ್ಕಾರ ಯೋಜನೆಗೂ ಚಾಲನೆ ನೀಡಿದೆ. ವಡಗೇರಾ ಕೊನೆಯ ಭಾಗದಲ್ಲಿ ನೀರಾವರಿ ಕ್ಷೇತ್ರಕ್ಕೆ 200 ಕೋ.ರೂ ಒದಗಿಸಿದೆ. ಹೊಸ ತಾಲೂಕುಗಳಾದ ಗುರುಮಠಕಲ್, ವಡಗೇರಾ, ಹುಣಸಗಿಗಳಿಗೆ ಪ್ರಜಾಸೌಧ ನಿರ್ಮಾಣಕ್ಕೆ ಗಮನ ನೀಡಿ ಜನಸ್ನೇಹಿ ಆಡಳಿತ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಳಂಬವಾಗಿ ಸ್ವಾತಂತ್ರ್ಯ ದೊರೆತಿದೆ. ಇದಕ್ಕಾಗಿ ಹೋರಾಡಿದ ಸರ್ದಾರ್ ವಲ್ಲಭಭಾಯ್ ಪಟೇಲ್, ಇನ್ನಿತರ ಹೋರಾಟ ಗಾರರನ್ನು ಸ್ಮರಿಸಿ ನಮಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಡಾ.ಅಬ್ದುಲ್ ಕಲಾಂ ಅಝಾದ್ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಐವರು ಅರ್ಚಕರಿಗೆ ಅನುದಾನ ಚೆಕ್ ವಿತರಿಸಲಾಯಿತು. ರೈತರಿಗೆ ತಾಳೆ ಬೆಳೆ ಸಸಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ನಗರಸಭೆ ಅಧ್ಯಕ್ಷ ಲಲಿತಾ ಅನಪುರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್ ಉಪಸ್ಥಿತರಿದ್ದರು.