×
Ad

ಗುರುಮಠಕಲ್ ಪದವಿ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ಶರಣಗೌಡ ಕಂದಕೂರ

Update: 2025-07-09 20:28 IST

ಯಾದಗಿರಿ: ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯ ಪಡುವುದು ಬೇಡ, ಯಾವುದೇ ಪುಂಡರಿಂದ ಕಾಲೇಜು ಸಮಯದಲ್ಲಿ ನನ್ನ ಮತಕ್ಷೇತ್ರದಲ್ಲಿ ತೊಂದರೆಯಾಗುವುದಿಲ್ಲ, ಭಯ ಬಿಟ್ಟು ನೀವು ಓದುವುದಕ್ಕೆ ಗಮನ ನೀಡಿ ಎಂದು ಶಾಸಕ ಶರಣಗೌಡ ಕಂದಕೂರ ಗುರುಮಠಕಲ್ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು.

ಗುರುಮಠಕಲ್ ಪಟ್ಟಣದ ಪದವಿ ಕಾಲೇಜಿಗೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.

ಬಸ್ ಸೌಲಭ್ಯ ಕಲ್ಪಿಸಿ :

ಗುರುಮಠಕಲ್ ತಾಲೂಕಿನ ಮಲ್ಲಾಫೂರ, ಬೂರಪಲ್ಲಿ, ವಡವಟ್ ಸೇರಿದಂತೆ ಹಲವು ಗ್ರಾಮಗಳಿಂದ ಗುರುಮಠಕಲ್ ಪಟ್ಟಣಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು, ಅದೇ ರೀತಿಯಾಗಿ ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ತಲುಪುವ ಹಾಗೂ ಕಾಲೇಜು ಬಿಡುವ ವೇಳೆಯಲ್ಲಿ ಗ್ರಾಮಗಳಿಗೆ ತಲುಪುವ ಬಸ್ ಸೌಲಭ್ಯ ಒದಗಿಸಿದರೆ ಉತ್ತಮವಾಗುತ್ತದೆ ಎಂದು ವಿದ್ಯಾರ್ಥಿಗಳು ಕೇಳಿಕೊಂಡ ತಕ್ಷಣ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ವಿಷಯ ತಿಳಿಸಿದ ಶಾಸಕ ಶರಣಗೌಡ ಕಂದಕೂರ ಅವರು, ಈ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವುದರೊಂದಿಗೆ ವಿದ್ಯಾರ್ಥಿ ನಿಲಯದ ಬಳಿ ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

ಉಪನ್ಯಾಸಕರನ್ನು ನೇಮಿಸಿ:

ಗುರುಮಠಕಲ್ ಪದವಿ ಕಾಲೇಜಿನಲ್ಲಿ ಹಲವು ಉಪನ್ಯಾಸಕ ಹುದ್ದೆಗಳು ಖಾಲಿ ಇರುವುದಿರಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಉಪನ್ಯಾಸಕರ ನೇಮಕ ಮಾಡಲು ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿಗಳು ಮನವಿ ಮಾಡಿದಾಗ ಶಾಸಕ ಕಂದಕೂರ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹಾಸ್ಟೇಲ್ ಅವ್ಯವಸ್ಥೆಯ ಅನಾವರಣ:

ಹೈದರಾಬಾದ್ ರಸ್ತೆ ಬಳಿ ಇರುವ ಹಾಸ್ಟೇಲ್‌ನಲ್ಲಿ ಅವ್ಯವಸ್ಥೆಯ ಅನಾವರಣವಿದೆ, ಕಳೆದ 1 ವರ್ಷದಿಂದ ವಿದ್ಯಾರ್ಥಿಗಳಿಗೆ ಬಿಸಿ ನೀರು ಸಿಗುತ್ತಿಲ್ಲ, ಚಳಿಗಾಲ, ಮಳೆಗಾಲದ ಸಮಯದಲ್ಲಿ ಬೆಳಗ್ಗೆ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದು, ಹಾಸ್ಟೇಲ್ ವಾರ್ಡನ್‌ ಮತ್ತು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ವಿದ್ಯಾರ್ಥಿಗಳು ಶಾಸಕರ ಎದುರು ಹಾಸ್ಟೇಲ್ ಸಮಸ್ಯೆಗಳನ್ನು ಬಿಚ್ಚಿಟ್ಟರು. ಕೂಡಲೇ ಸ್ಪಂದಿಸಿದ ಶಾಸಕ ಶರಣಗೌಡ ಕಂದಕೂರ ವಸತಿ ನಿಲಯ ವಾರ್ಡನ್‌ ಗಳಿಗೆ ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಅದರ ಜೊತೆಗೆ ಹಾಸ್ಟೆಲ್‌ನಲ್ಲಿ ಸ್ವಚ್ಚತೆ ಕಾಪಾಡುವುದರೊಂದಿಗೆ ಸರಿಯಾದ ಸಮಯಕ್ಕೆ ಉತ್ತಮ ಗುಣಮಟ್ಟದ ಆಹಾರ ಒದಗಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪುರಶೋತ್ತಮ ಜೋಶಿ, ಕಾಲೇಜು ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.

ವಿದ್ಯಾರ್ಥಿಗಳಿಗೆ ನೆರಳಾಗಿ ನಿಲ್ಲುವೆ

ನನ್ನ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ, ಹಿಂದುಳಿದ ಹಣೆಪಟ್ಟಿಯಿಂದ ದೂರ ಸರಿಸಲು ಶಿಕ್ಷಣವೊಂದೆ ಪರಿಹಾರವಾಗಿದ್ದು, ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಂದರ್ಭದಲ್ಲಿ ಯಾವುದೇ ತೊಂದರೆಗೆ ಒಳಗಾಗಬಾರದು ನಿಮಗೆ ನೆರಳಾಗಿ ನಾನು ನಿಲ್ಲುವೆ, ನೀವು ಕೇವಲ ಓದುವುದೊಂದೆ ಕೆಲಸ ಮಾಡಿ, ಉನ್ನತ ವ್ಯಾಸಂಗ ಮಾಡಿ ನಿಮ್ಮ ಕುಟುಂಬಕ್ಕೆ ನೀವು ನೆರಳಗಾಗಿ ನಿಲ್ಲಬೇಕು, ಅಲ್ಲಿಯವರಗೆ ನಾನು ಅವಿರತವಾಗಿ ನಿಮ್ಮ ಜೊತೆ ನಿಲ್ಲುವೆ.

- ಶರಣಗೌಡ ಕಂದಕೂರ, ಶಾಸಕರು ಗುರುಮಠಕಲ್ ಮತಕ್ಷೇತ್ರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News