ಸುರಪುರ | ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಷ್ಟಪಟ್ಟು ಓದಬೇಕು : ಪ್ರೊ.ಹನುಮಂತಪ್ಪ
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹುಮಾನ ವಿತರಣೆ ಸಮಾರಂಭ
ಸುರಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಸಾಂಸ್ಕೃತಿಕ ಸಮಿತಿಗಳ ಜಂಟಿ ಪ್ರಾಯೋಜಕತ್ವದಲ್ಲಿ 2025-26ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ಸ್ನಾತಕ ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕಾರಟಗಿಯ ಸಿಎಂಎನ್ ಕಾಲೇಜಿನ ಅಧ್ಯಾಪಕ ಡಾ.ಹನುಮಂತಪ್ಪ ಚಂದಲಾಪುರ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಷ್ಟಪಟ್ಟು ಓದಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಸಂಸ್ಕಾರವಿರದ ಶಿಕ್ಷಣ ನಿಜವಾದ ಶಿಕ್ಷಣ ಆಗಲಾರದು, ನೋವು ಇಲ್ಲದೆ ಏನನ್ನು ಸುಲಭವಾಗಿ ಪಡೆಯಲಾಗದು ಎಂದು ತಿಳಿಸಿದರು.
ಅಜ್ಞಾನ ಮೂಢನಂಬಿಕೆ ಸುಟ್ಟು ಹಾಕಿ ಸುಜ್ಞಾನ ಕ್ರಿಯಾಶೀಲವಾಗಿ ಪುಸ್ತಕ ಜ್ಞಾನದ ಜೊತೆ ಸಂಸ್ಕೃತಿ ಅರಿತು ಕೊಂಡಾಗ ಮಾತ್ರ ಬದುಕು ಸರಳವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಲಭೀಮರಾಯ ದೇಸಾಯಿ ಮಾತನಾಡಿ, ವಿದ್ಯಾರ್ಥಿ ಜೀವನ ಕುಣಿದು ಕೊಪ್ಪಳಿಸುವ ವಯಸ್ಸು ಆದರೆ ಅದು ಅತಿ ಆಗಬಾರದು. ಅಲ್ಲದೆ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಓದಿದಾಗ ಬದುಕಿನಲ್ಲಿ ಮುಂದೆ ಬರಲು ಸಾಧ್ಯವಿದೆ. ಕಾಲೇಜಿನಲ್ಲಿ ಎಲ್ಲ ರೀತಿಯ ಸೌಕರ್ಯಗಳಿದ್ದು, ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಆನಂದ ಕುಮಾರ ಜೋಶಿ ಅವರು ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನೂತನ ಸ್ನಾತಕೋತ್ತರ ಪ್ರಥಮ ವರ್ಷಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಬಿಇಓ ಯಲ್ಲಪ್ಪ ಕಾಡ್ಲೂರ, ನಗರಸಭೆ ಪೌರಾಯುಕ್ತ ಬಸವರಾಜ ಟಣಿಕೆದಾರ, ಸರ್ಕಾರಿ ನೌಕರರ ಸಂಘದ ತಾ.ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಭಂಡಾರೆಪ್ಪ ನಾಟೇಕಾರ್, ಹಿರಿಯ ಅತಿಥಿ ಉಪನ್ಯಾಸಕ ಬಸವರಾಜ ಪೂಜಾರಿ, ಕೆಪಿಎಸ್ ಶಾಲೆಯ ಪ್ರಾಂಶುಪಾಲ ಭೀಮಣ್ಣ ಬೋಸಗಿ,ಸ.ಬಾ.ಪ್ರೌ. ಶಾಲೆಯ ಪ್ರಾ.ಸೋಪಿಸಾಬ ಕುಂಬಾರಪೇಟ, ಉಪನ್ಯಾಸಕರಾದ ಪ್ರೊ.ವೆಂಕೋಬ ಬಿರಾದರ್, ಡಾ.ಪ್ರಮೋದ್ ಕುಲಕರ್ಣಿ,ಪ್ರೊ.ಹನುಮಂತಪ್ಪ ವಗ್ಗರ್, ಡಾ.ಮೋನಯ್ಯ, ಡಾ.ಗುರುರಾಜ ನಾಗಲೀಕರ, ಪ್ರೊ.ಬಸಣ್ಣ ಶೆಟ್ಟಿ, ಡಾ.ಮಹದೇವಪ್ಪ, ರೂಪ ಕುಲಕರ್ಣಿ, ಶಾಂತು ನಾಯಕ, ಆದಿಶೇಷ ನೀಲಗಾರ್, ರಮೇಶ ಶಹಾಪುರಕರ, ವೆಂಕಟೇಶ, ಹೊನ್ನಪ್ಪ, ವಿಶ್ವನಾಥ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.ಪ್ರೊ. ಜಗದೀಶ ನಾಯಕ ಸ್ವಾಗತಿಸಿದರು, ಪ್ರೊ.ದೇವು ಹೆಬ್ಬಾಳ ನಿರೂಪಿಸಿದರು, ದೇವೇಂದ್ರ ಪಾಟೀಲ ವಂದಿಸಿದರು.