ಯಾದಗಿರಿ | ಎಂಎಸ್ಎಂಇಗಳ ಕಾರ್ಯಕ್ಷಮತೆ ವೃದ್ಧಿಗೆ ಝಡ್ & ಲಿಯನ್ ಕುರಿತು ಅರಿವು ಕಾರ್ಯಗಾರ
ಯಾದಗಿರಿ : ಜಿಲ್ಲಾ ಕೈಗಾರಿಕಾ ಕೇಂದ್ರ, ಸುರಪುರ ಹಾಗೂ ಶಹಾಪೂರ ತಾಲೂಕುಗಳ ಕೈಗಾರಿಕಾ ಅಸೋಸಿಯೇಷನ್ಗಳು ಮತ್ತು ಕೆ.ಎಸ್.ಎಂ.ಸಿ.ಎ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ವೇಗಗೊಳಿಸುವ ಉದ್ದೇಶದ ರಾಂಪ್ ಯೋಜನೆಯಡಿ ಝಡ್ & ಲಿಯನ್ ಕುರಿತು ಒಂದು ದಿನದ ಅರಿವು ಕಾರ್ಯಗಾರ ಶಹಾಪೂರದಲ್ಲಿ ಜರುಗಿತು.
ಶಹಾಪೂರದ ಬಿ.ಬಿ. ರಸ್ತೆದಲ್ಲಿರುವ ಶುಭಾಶ್ರೀ ಹೋಟೆಲ್ನಲ್ಲಿ ನಡೆದ ಕಾರ್ಯಗಾರವನ್ನು ಯಾದಗಿರಿ ಜಿಲ್ಲಾ ಕಾಟನ್ ಜಿನ್ನಿಂಗ್ ಅಸೋಸಿಯೇಷನ್ ವ್ಯವಸ್ಥಾಪಕ ಪಾಲುದಾರ ಹಾಗೂ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್ನ ಮಣಿಕಂಠ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸತೀಶಕುಮಾರ, ಈ ಭಾಗದಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಝಡ್ & ಲಿಯನ್ ಪ್ರಮಾಣೀಕರಣದ ಬಗ್ಗೆ ಕೈಗಾರಿಕೋದ್ಯಮಿಗಳು ಅರಿವು ಪಡೆದುಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಹಾಪೂರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಮುಸ್ತಫಾ ದರ್ಬಾನ್, ತಾಲ್ಲೂಕಿನಲ್ಲಿ ಕೈಗಾರಿಕಾ ಬೆಳವಣಿಗೆಗೆ ಅಪಾರ ಅವಕಾಶಗಳಿದ್ದು, ಆರ್ಥಿಕವಾಗಿ ಸದೃಢರಾದವರು ಬೇರೆ ವಲಯಗಳಲ್ಲಿ ಹೂಡಿಕೆ ಮಾಡುವ ಬದಲಾಗಿ ಕೈಗಾರಿಕಾ ವಲಯದಲ್ಲಿ ಹೂಡಿಕೆ ಮಾಡಿದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ (ಗ್ರಾಕೈ) ಮುಕುಂದ ರೆಡ್ಡಿ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜ್ಯೋತಿ ಕೃಷ್ಣ (ಅಸಿಸ್ಟೆಂಟ್), ರಾಧಾ, ಎಂ.ಎ. ಸಲೀಮ್, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.