ಯಾದಗಿರಿ | ಕಳ್ಳಭಟ್ಟಿ ಪರಿಶೀಲನೆ ವೇಳೆ ಅಬಕಾರಿ ಪೊಲೀಸ್, ಗೃಹರಕ್ಷಕನ ಮೇಲೆ ಹಲ್ಲೆ : ಪ್ರಕರಣ ದಾಖಲು
ಪರಶುರಾಮ ರಾಠೋಡ | ಭೀಮರಾಯ ಕಬ್ಬೇರ
ಯಾದಗಿರಿ : ಗುರುಮಠಕಲ್ ಕಳ್ಳಭಟ್ಟಿ ತಯಾರಿಕೆ ಘಟಕದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುವ ವೇಳೆ ಅಬಕಾರಿ ಇಲಾಖೆಯ ಪೊಲೀಸ್ ಮತ್ತು ಗೃಹರಕ್ಷಕನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಪಸಪುಲ್ ತಾಂಡಾದ ಶಂಕ್ರಿಬಾಯಿ, ನಿಂಗಪ್ಪ, ಮೋಹನ, ಸೋಮ್ಲಾ, ಶಾಂತಿಬಾಯಿ ಮತ್ತು ಬೀಚಿಬಾಯಿ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಯಾದಗಿರಿ ಅಬಕಾರಿ ಇನ್ಸ್ಪೆಕ್ಟರ್ ಕಚೇರಿಯ ಅಬಕಾರಿ ಪೊಲೀಸ್ ಪರಶುರಾಮ ರಾಠೋಡ ಮತ್ತು ಗೃಹರಕ್ಷಕ ಭೀಮರಾಯ ಕಬ್ಬೇರ ಆಶಾಪುರ ಅವರು ಮಂಗಳವಾರ ಮಾರ್ಗ-4ರಲ್ಲಿ ಗಸ್ತು ನಡೆಸುತ್ತಿದ್ದರು.
ಪಸಪುಲ್ ತಾಂಡಾದ ಶಂಕ್ರಿಬಾಯಿ ನಿಂಗಪ್ಪ ಅವರ ಮನೆಯಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಸುವ ಕುರಿತು ಅಬಕಾರಿ ಇನ್ಸ್ಪೆಕ್ಟರ್ ಅವರಿಗೆ ಮಾಹಿತಿ ಬಂದಿದ್ದು, ಗಸ್ತಿನಲ್ಲಿದ್ದ ಅಬಕಾರಿ ಪೊಲೀಸ್ ಪರಶುರಾಮ ಅವರಿಗೆ ಪರಿಶೀಲಿಸಲು ತಿಳಿಸಿದ್ದರು. ಹಾಗಾಗಿ ಸಿಬ್ಬಂದಿಯು ಕಳ್ಳಭಟ್ಟಿ ಸರಾಯಿ ತಯಾರಿಕೆ ಕುರಿತು ಪರಿಶೀಲನೆಗೆ ಶಂಕ್ರಿಬಾಯಿ ಅವರ ಮನೆಗೆ ತೆರಳಿದ್ದರು. ಪರಿಶೀಲನೆಗೆ ಬಂದಿರುವುದು ತಿಳಿದ ಶಂಕ್ರಿಬಾಯಿ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಉಳಿದ ಆರೋಪಿಗಳನ್ನೂ ಕರೆದಿದ್ದಾರೆ ಎನ್ನಲಾಗಿದೆ.
ಪರಶುರಾಮ ರಾಠೋಡ ಅವರನ್ನು ಕೋಲಿನಿಂದ ಹೊಡೆಯುತ್ತಿದ್ದಾಗ, ಬಿಡಿಸಲು ಬಂದ ಗೃಹರಕ್ಷಕ ಭೀಮರಾಯ ಅವರಿಗೂ ಹೊಡೆದಿದ್ದಾರೆ ಎಂಬ ದೂರಿನನ್ವಯ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಜಗಳದ ವೇಳೆ ವಿಡಿಯೋ ಚಿತ್ರೀಕರಿಸುವಾಗ ಆರೋಪಿಗಳು ಮೊಬೈಲ್ ಮತ್ತು ಸರ್ಕಾರಿ ಬೈಕ್ ಅನ್ನು ಕಸಿದುಕೊಂಡಿದ್ದಾರೆ ಎಂದು ಅಬಕಾರಿ ಪೊಲೀಸ್ ಪರಶುರಾಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.