ಯಾದಗಿರಿ| ಡಿ.3ರಿಂದ ರಾಜ್ಯ ಮಟ್ಟದ ಯುವಜನೋತ್ಸವ
ಯಾದಗಿರಿ: ಕೇಂದ್ರ ಕ್ರೀಡಾ ಇಲಾಖೆ ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆ ಅಂಗವಾಗಿ ಜ.12 ರಿಂದ 16ರವಗೆ ರಾಷ್ಟ್ರೀಯ ಯುವಜನೋತ್ಸವ ಆಯೋಜಿಸುತ್ತಿರುವ ಹಿನ್ನೆಲೆ ಡಿ.3 ಮತ್ತು 4 ರಂದು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ವಿಜೇತರನ್ನು ರಾಷ್ಟ್ರಮಟ್ಟಕ್ಕೆ ಕಳುಹಿಸಲಾಗುವುದೆಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಷಲ್ ಬೋಯರ್, ಕ್ರೀಡಾಂಗಣ ಸೇರಿದಂತೆಯೇ ಏಳು ಕಡೆ ಏಳು ಸ್ಪರ್ಧೆಗಳು ನಡೆಯಲಿವೆ. ಜಾನಪದ, ಚಿತ್ರಕಲೆ, ಕಥೆ ಬರೆಯುವುದು, ವಿಜ್ಞಾನ ಮೇಳ, ಕವಿತೆ ಬರೆಯುವುದು ಮತ್ತು ಘೋಷಣೆ ಸ್ವರ್ಧೆಗಳು ನಡೆಯಲಿವೆ. 31 ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ. 40 ನಿರ್ಣಾಯಕರು ಇರಲಿದ್ದಾರೆ. 31 ಜನ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಬಂದವರಿಗೆ ಉಳಿದುಕೊಳ್ಳಲು ನಗರದ ವಿವಿಧ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸೂಚಿಸಲಾಗಿದೆ ಎಂದರು.
ಕ್ರೀಡಾ ಇಲಾಖೆ ಅಂಗ ಸಂಸ್ಥೆಯಾದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಸ್ಕೂಬಾ ಡೈವಿಂಗ್ ಮತ್ತು ಕೋಟೆಯಲ್ಲಿ ರಾಕ್ ಕ್ಲೈಂಬಿಂಗ್ ಸಾಹಸ ಕ್ರೀಡೆಗಳನ್ನು ಮತ್ತು ಮಲ್ಲಕಂಬ, ಕರಾಟೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
ವೈಯಕ್ತಿಕ ತಲಾ ಮೂರು ಬಹುಮಾನ ಹಾಗೂ ತಲಾ ಮೂರು ಗುಂಪು ಸ್ಪರ್ಧೆಗಳಿಗೆ ನಗದು ಬಹುಮಾನ ನೀಡಲಾಗುವುದು. ಯುವಜನೋತ್ಸವಕ್ಕೆ ರಾಜ್ಯ ಸರಕಾರ 75 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಡಿ.3 ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ರೀಡಾಧಿಕಾರಿಗಳಾದ ರಾಜು ಬಾವಿಹಳ್ಳಿ, ಶ್ರೀನಿವಾಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.