ಧರ್ಮಸ್ಥಳ ದೂರು | ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಪೊಲೀಸ್ ಗಸ್ತು; ಜು.29ರಂದು ಮೃತದೇಹ ಹೊರತೆಗೆಯುವ ಕಾರ್ಯಾಚರಣೆ ?
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿದೆಡೆ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಘಟನೆಯಲ್ಲಿ ಸೋಮವಾರ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಲಿನ ಪ್ರದೇಶಗಳಲ್ಲಿ ದೂರುದಾರ ವ್ಯಕ್ತಿ ತಾನು ಮೃತದೇಹಗಳನ್ನ ಹೂತು ಹಾಕಿರುವ 13 ಸ್ಥಳಗಳನ್ನು ಗುರುತಿಸಿದ್ದಾನೆ.
ಪೊಲೀಸರು ಈ 13 ಸ್ಥಳಗಳಲ್ಲಿಯೂ ಇದೀಗ ನಂಬರ್ ನೀಡಿ ಗುರುತಿಸಿದ್ದಾರೆ. ಅದರ ಸುತ್ತ ಟೇಪ್ ಕಟ್ಟಲಾಗಿದ್ದು ಈ ಸ್ಥಳಗಳಲ್ಲಿ ರಾತ್ರಿ ಪೊಲೀಸ್ ಗಸ್ತನ್ನು ಏರ್ಪಡಿಸಲಾಗಿದೆ.
►ಗುರುತಿಸಲಾಗಿರುವ ಸ್ಥಳಗಳು ಯಾವುದು?
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿಯೇ ಈ 13 ಸ್ಥಳಗಳನ್ನು ಆತ ಗುರುತಿಸಿದ್ದಾನೆ. ಸ್ನಾನ ಘಟ್ಟದ ಒಳಗೆ ನದಿ ಬದಿಯಲ್ಲಿ ಮೊದಲ ಸ್ಥಳವನ್ನು ಆತ ಗುರುತಿಸಿದ್ದಾನೆ. ಅಲ್ಲಿಂದ ಮುಂದೆ ಅರಣ್ಯದೊಳಗೆ ಆತನೊಂದಿಗೆ ಎಸ್.ಐ.ಟಿ ತಂಡದವರು ತೆರಳಿದ್ದು ಅಲ್ಲಿ ಆತ ಎಂಟು ಸ್ಥಳಗಳನ್ನು ಗುರುತಿಸಿದ್ದಾನೆ.
ಈ ಎಲ್ಲ ಸ್ಥಳಗಳ ಸುತ್ತ ಟೇಪ್ ಕಟ್ಟಲಾಗಿದೆ. ಇದಾದ ಬಳಿಕ ನೇತ್ರಾವತಿ ಸ್ನಾಘಟ್ಟದಿಂದ ನೂರು ಮೀಟರ್ ಮುಂದೆ ಧರ್ಮಸ್ಥಳ ಉಜಿರೆ ರಸ್ತೆಯ ಬದಿಯಲ್ಲಿ ಹೆದ್ದಾರಿಯಿಂದ ಎರಡು ಮೂರು ಮೀಟರ್ ದೂರದಲ್ಲಿ ಈತ ಮೂರು ಸ್ಥಳಗಳನ್ನು ಗುರುತಿಸಿದ್ದಾನೆ. ಮುಂದೆ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿಗೆ ಹೋಗುವ ರಸ್ತೆಯ ಬದಿಯಲ್ಲಿ ಕಿಂಡಿ ಅಣೆಕಟ್ಟಿಗೆ ತಾಗಿಕೊಂಡಿರುವ ಪ್ರದೆಶದಲ್ಲಿ ಈ ಮತ್ತೊಂದು ಸ್ಥಳವನ್ನು ಗುರುತಿಸಿದ್ದಾನೆ. ಇಲ್ಲಿ ಸ್ಥಳದ ಸುತ್ತ ದೊಡ್ಡದಾದ ಮಾರ್ಕ್ ಮಾಡಲಾಗಿದೆ.
ಇದಾದ ಬಳಿಕ ಸಾಕ್ಷಿ ದೂರುದಾರ ಎಸ್.ಐ.ಟಿ ತಂಡವನ್ನು ಧರ್ಮಸ್ಥಳ ಕನ್ಯಾಡಿಯ ಒಳಪ್ರದೇಶದಲ್ಲಿ ಖಾಸಗಿ ಜಾಗವೊಂದಕ್ಕೆ ಕರೆದೊಯ್ದಿದ್ದು ಅಲ್ಲಿ ಸ್ಥಳವೊಂದನ್ನು ತೋರಿಸಿದ್ದಾನೆ. ಈ ವೇಳೆಗೆ ಸಂಜೆಯಾ ಗಿದ್ದು ಮಳೆಯೂ ಬಂದ ಕಾರಣ ಇಲ್ಲಿ ಸ್ಥಳವನ್ನು ಗುರುತಿಸುವ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯ ವಾಗಿಲ್ಲ. ಅಲ್ಲಿಂದ ಎಸ್.ಐ.ಟಿ ತಂಡ ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಿ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ಹಿಂತಿರುಗಿದ್ದಾರೆ.
ಎಸ್.ಐ.ಟಿ ತಂಡ ಬೆಳಗ್ಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದು, 9 ಗಂಟೆಯ ಸುಮಾರಿಗೆ ಡಿಐಜಿ ಅನುಚೇತ್ ನೇತೃತ್ವದ ತಂಡ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಬಂದಿದೆ. ಅಲ್ಲಿ ಕಂದಾಯ ಇಲಾಖೆ,ಅರಣ್ಯ ಇಲಾಖೆ, ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇದಾದ ಬಳಿಕ 11ಗಂಟೆಯ ಸುಮಾರಿಗೆ ಸಾಕ್ಷಿ ದೂರುದಾರ ಎಸ್.ಐ.ಟಿ ಕಚೇರಿಗೆ ವಕೀಲರುಗಳೊಂದಿಗೆ ಆಗಮಿಸಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ಆತನಿಂದ ಮಾಹಿತಿ ಪಡೆಯುವ ಕಾರ್ಯ ಮಾಡಿದ್ದಾರೆ.
ಬಳಿಕ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಎಸ್.ಐ.ಟಿ ತಂಡದವರು ನೇತ್ರಾವತಿ ಸ್ನಾನಘಟ್ಟದ ಬಳಿಗೆ ಬಂದಿದ್ದಾರೆ. ಅಲ್ಲಿಂದ ಮೂರುಗಂಟೆಯ ವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆದಿದೆ. 3 ಗಂಟೆಗೆ ಧರ್ಮಸ್ಥಳ ಠಾಣೆಗೆ ಊಟಕ್ಕೆ ತೆರಳಿದ್ದು ಬಳಿಕ 4ಗಂಟೆಯ ಸುಮಾರಿಗೆ ಕಾರ್ಯಾಚರಣೆ ಆರಂಭವಾಗಿ ಆರು ಗಂಟೆಯ ವರೆಗೂ ಮುಂದುವರಿದಿದೆ.
►ಜು.29ರಂದು ಸ್ಥಳ ಗುರುತಿಸುವಿಕೆ ಮುಂದುವರಿಯಲಿದೆ : ಎಸ್ಪಿ ಜಿತೇಂದ್ರ ಕುಮಾರ್ ದಯಾಮ
ಇಂದು 13 ಸ್ಥಳಗಳನ್ನು ಸಾಕ್ಷಿ ದೂರುದಾರ ಗುರುತಿಸಿದ್ದಾನೆ. ರಾತ್ರಿ ಕಾರ್ಯಾಚರಣೆ ಮಾಡುವಂತಿಲ್ಲ. ಭಾರೀ ಮಳೆಯೂ ಇರುವ ಕಾರಣ ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಮಂಗಳವಾರ ಬೆಳಗ್ಗಿನಿಂದಲೇ ಸ್ಥಳಗಳನ್ನು ಗುರುತಿಸುವ ಕಾರ್ಯವನ್ನು ಪುನರಾರಂಭಿಸಲಾಗುವುದು. ಬಳಿಕ ಮುಂದಿನ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ತನಿಖಾಧಿಕಾರಿ, ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹೇಳಿದ್ದಾರೆ.
►ಮೃತದೇಹ ಹೊರತೆಗೆಯುವ ಕಾರ್ಯಾಚರಣೆ?
ಎಸ್.ಐ.ಟಿ ತಂಡ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಮಂಗಳವಾರವೇ ಮೃತದೇಹ ಗಳನ್ನು ಹೂತು ಹಾಕಿದ ಸ್ಥಳಗಳಲ್ಲಿ ಅಗೆದು ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಆರಂಭಿಸುವ ನಿರೀಕ್ಷೆಯಿದೆ. ಅದಕ್ಕಾಗಿ ಅಗತ್ಯವಿರುವ ಅನುಮತಿಗಳನ್ನು ಎಸ್.ಐ.ಟಿ ತಂಡ ಈಗಾಗಲೇ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.
ಆದರೆ, ಹೂತು ಹಾಕಿರುವ ಸ್ಥಳಗಳನ್ನು ಗುರುತಿಸುವ ಕಾರ್ಯ ಸೋಮವಾರ ಇನ್ನೂ ಪೂರ್ಣಗೊಂಡಿಲ್ಲ. ಮಂಗಳವಾರ ಬೆಳಗ್ಗೆ ಇದು ಆರಂಭಗೊಳ್ಳಲಿದ್ದು, ಅದು ಎಷ್ಟು ಗಂಟೆಗೆ ಮುಗಿಯುತ್ತದೆ ಎಂಬುದರ ಮೇಲೆ ಮುಂದಿನ ಕಾರ್ಯಾಚರಣೆಗಳು ನಿರ್ಧಾರವಾಗಲಿದೆ.
ದೂರು ಸಾಕ್ಷಿದಾರನ ಪರ ವಕೀಲರು ಈಗಾಗಲೇ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ, ಕಲ್ಲೇರಿಯ ಪಟ್ರೋಲ್ ಪಂಪ್ ಸಮೀಪ ಹಾಗೂ ಇತರೆಡೆಗಳಲ್ಲಿಯೂ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಈ ಪ್ರದೇಶದಲ್ಲಿ ಇನ್ನೂ ಯಾವುದೇ ಸ್ಥಳಗಳನ್ನು ಗುರುತಿಸುವ ಕಾರ್ಯ ಮಾಡಲಾಗಿಲ್ಲ. ಈ ಹಿನ್ನಲೆಯಲ್ಲಿ ಮಂಗಳವಾರ ಈ ಪ್ರದೇಶದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಜಾಗಗಳನ್ನು ಗುರುತಿಸುವ ಕಾರ್ಯ ನಡೆಯುವ ನಿರೀಕ್ಷೆಯಿದೆ.