ಬಿಕರ್ನಕಟ್ಟೆ: ಪೌರಕಾರ್ಮಿಕನಿಗೆ ಹಲ್ಲೆ, ಜೀವಬೆದರಿಕೆ ಆರೋಪ; ಪ್ರಕರಣ ದಾಖಲು
ಮಂಗಳೂರು. ಫೆ.26: ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರೊಬ್ಬರಿಗೆ ಗುಜರಿ ಅಂಗಡಿ ಮಾಲಕರೊಬ್ಬರು ಬುಧವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾದ ಘಟನೆ ಬಿಕರ್ನಕಟ್ಟೆಯಲ್ಲಿ ಬುಧವಾರ ನಡೆದಿರುವುದು ವರದಿಯಾಗಿದೆ.
ಕದ್ರಿ ಶಿವಭಾಗ್ನ ನಿವಾಸಿ ಶಿವಪ್ಪ ಎಂಬವರು ಬುಧವಾರ ಬೆಳಗ್ಗೆ 11:36ಕ್ಕೆ ಬಿಕರ್ನಕಟ್ಟೆ ಪೆಟ್ರೋಲ್ಪಂಪ್ ಹತ್ತಿರ ತಲುಪುವಾಗ ಅವರ ಕಸ ಸಾಗಾಟದ ವಾಹನವನ್ನು ಅಡ್ಡಗಟ್ಟಿದ ಗುಜರಿ ವ್ಯಾಪಾರಿಯೊಬ್ಬರು , ಗೋಣಿ ಚೀಲದಲ್ಲಿ ತುಂಬಿಸಲಾದ ಕಸವನ್ನು ವಾಹನಕ್ಕೆ ಎಸೆಯಲು ಯತ್ನಿಸಿದರೆನ್ನಲಾಗಿದೆ.
ವಾಹನಕ್ಕೆ ಹಸಿ ಕಸ-ಒಣಕಸ ಎಂದು ವಿಂಗಡಿಸದೆ ವ್ಯಾಪಾರಿಯು ನೇರವಾಗಿ ಕಸವನ್ನು ವಾಹನಕ್ಕೆ ಎಸೆಯಲು ಬಂದಾಗ ಇದನ್ನು ಪೌರ ಕಾರ್ಮಿಕ ಶಿವಪ್ಪ ಆಕ್ಷೇಪಿಸಿದಕ್ಕಾಗಿ ಅವರ ಮೇಲೆ ವ್ಯಾಪಾರಿಯು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಧರಿಸಿದ್ದ ಬಟ್ಟೆಯನ್ನು ಹರಿದು ಹಾಕಿ, ಜೀವ ಒಡ್ಡಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಸಂಬಂಧ ಕದ್ರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.