2002ರ ಗುಜರಾತ್ ಗಲಭೆ ಪ್ರಕರಣ: ಎಫ್ಐಆರ್ ರದ್ದುಗೊಳಿಸುವಂತೆ ಗುಜರಾತ್ ಹೈಕೋರ್ಟ್ಗೆ ತೀಸ್ತಾ ಸೆಟಲ್ವಾಡ್ ಮೊರೆ
Photo: ತೀಸ್ತಾ ಸೆಟಲ್ವಾಡ್ | PTI
ಅಹ್ಮದಾಬಾದ್: 2002ರ ಗಲಭೆ ಪ್ರಕರಣಗಳಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದ ಆರೋಪದಲ್ಲಿ ತನ್ನ ವಿರುದ್ಧ ಸಿಟಿ ಕ್ರೈಂ ಬ್ರ್ಯಾಂಚ್ ದಾಖಲಿಸಿರುವ ಎಫ್ಐಆರ್ನ್ನು ರದ್ದುಗೊಳಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಸೋಮವಾರ ಗುಜರಾತ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
ಪ್ರಕರಣದಿಂದ ತನ್ನನ್ನು ಖುಲಾಸೆಗೊಳಿಸುವಂತೆ ಕೋರಿ ಸೆಟಲ್ವಾಡ್ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ಇತ್ತೀಚಿಗೆ ತಿರಸ್ಕರಿಸಿತ್ತು. ಗುಜರಾತ್ ಉಚ್ಚ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಸೆಟಲ್ವಾಡ್ ಸಲ್ಲಿಸಿರುವ ಅರ್ಜಿಯು ಕೆಲವೇ ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.
2002ರ ಗುಜರಾತ ಗಲಭೆಗೆ ಸಂಬಂಧಿಸಿದಂತೆ ಫೋರ್ಜರಿ ಮತ್ತು ನಕಲಿ ಸಾಕ್ಷ್ಯ ಸೃಷ್ಟಿ ಆರೋಪದಲ್ಲಿ ಸೆಟಲ್ವಾಡ್,ರಾಜ್ಯದ ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಸಿಟಿ ಕ್ರೈಂ ಬ್ರ್ಯಾಂಚ್ ಜೂನ್ 2022ರಲ್ಲಿ ಬಂಧಿಸಿತ್ತು. ಝಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ವಜಾಗೊಳಿಸಿದ ಬಳಿಕ ಈ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಗಲಭೆ ಸಂದರ್ಭ ಜಾಫ್ರಿಯವರ ಪತಿ ಹಾಗೂ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರು ಕೊಲ್ಲಲ್ಪಟ್ಟಿದ್ದರು.