ಮಣಿಪುರದಲ್ಲಿ ಚುನಾಯಿತ ಸರಕಾರ ಮರು ಸ್ಥಾಪಿಸಿ: ಅಮಿತ್ ಶಾಗೆ 21 ಎನ್ಡಿಎ ಶಾಸಕರು ಆಗ್ರಹ
ಅಮಿತ್ ಶಾ | PTI
ಹೊಸದಿಲ್ಲಿ: ಮಣಿಪುರದಲ್ಲಿ ‘‘ಚುನಾಯಿತ ಸರಕಾರ’’ವನ್ನು ಮರು ಸ್ಥಾಪಿಸುವಂತೆ ಆಗ್ರಹಿಸಿ ರಾಜ್ಯದ 21 ಎನ್ಡಿಎ ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಶಾಂತಿ ಹಾಗೂ ಸಹಜ ಸ್ಥಿತಿ ತರಲು ಇದೊಂದೆ ಮಾರ್ಗ ಎಂದು ಅವರ ಪತ್ರದಲ್ಲಿ ಹೇಳಿದ್ದಾರೆ.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಫೆಬ್ರವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಎರಡಕ್ಕೂ ಅಧಿಕ ತಿಂಗಳುಗಳ ಬಳಿಕ ಈ ಪತ್ರ ಬರೆಯಲಾಗಿದೆ.
‘‘ಬಹಳಷ್ಟು ಭರವಸೆ ಹಾಗೂ ನಿರೀಕ್ಷೆಗಳೊಂದಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ಮಣಿಪುರದ ಜನತೆ ಸ್ವಾಗತಿಸಿತು. ಈಗ ಮೂರು ತಿಂಗಳಾಯಿತು. ಆದರೆ, ಇದುವರೆಗೆ ಶಾಂತಿ ಹಾಗೂ ಸಹಜಸ್ಥಿತಿ ತರಲು ಕ್ರಮ ಕೈಗೊಂಡಿರುವುದು ಕಂಡು ಬಂದಿಲ್ಲ’’ ಎಂದು ಶಾಸಕರು ಪತ್ರದಲ್ಲಿ ಹೇಳಿದ್ದಾರೆ.
ಚುನಾಯಿತ ಸರಕಾರವನ್ನು ರಚಿಸಲು ಪ್ರಯತ್ನಿಸುತ್ತಿಲ್ಲ ಹಾಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಜವಾಬ್ದಾರಿಯನ್ನು ನಿಗದಿಪಡಿಸುತ್ತಿಲ್ಲ ಎಂದು ನಾಗರಿಕ ಸಮಾಜ ಸಂಘಟನೆಗಳು ತಮ್ಮನ್ನು ದೂಷಿಸುತ್ತಿವೆ ಎಂದು ಶಾಸಕರು ಪತ್ರದಲ್ಲಿ ಹೇಳಿದ್ದಾರೆ.
ಆದುದರಿಂದ ಮಣಿಪುರದಲ್ಲಿ ಆದಷ್ಟು ಬೇಗ ಚುನಾಯಿತ ಸರಕಾರವನ್ನು ಮರು ಸ್ಥಾಪಿಸಲು ಅಗತ್ಯದ ಕ್ರಮಗಳನ್ನು ಕೈಗೊಳ್ಳುವಂತೆ ನಾವು ನಿಮ್ಮನ್ನು ವಿನಂತಿಸುತ್ತಿದ್ದೇವೆ ಎಂದು ಶಾಸಕರು ಹೇಳಿದ್ದಾರೆ.
‘‘ಚುನಾಯಿತ ಸರಕಾರ ಸ್ಥಾಪಿಸಿದ ಬಳಿಕ ಶಾಂತಿ ಹಾಗೂ ಸಹಜಸ್ಥಿತಿ ತರಲು ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ’’ ಎಂದು ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ.