ತಮಿಳುನಾಡು | ಉಷ್ಣ ವಿದ್ಯುತ್ ಸ್ಥಾವರದ ಕಮಾನು ಕುಸಿತ : 9 ಕಾರ್ಮಿಕರು ಮೃತ್ಯು, ಹಲವರಿಗೆ ಗಾಯ
PC | ndtv.com
ಚೆನ್ನೈ, ಸೆ. 30: ತಮಿಳುನಾಡಿನ ಎನ್ನೋರ್ನಲ್ಲಿ ನಿರ್ಮಾಣ ಹಂತದ ಉಷ್ಣ ವಿದ್ಯುತ್ ಸ್ಥಾವರದ ಕಮಾನು ಕುಸಿದು ಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ 9 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಅವಘಡದಲ್ಲಿ ಮೃತಪಟ್ಟ ಎಲ್ಲ ಕಾರ್ಮಿಕರು ಅಸ್ಸಾಂನವರು. ಈ ಸಂದರ್ಭ ನಿವೇಶನದಲ್ಲಿ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಡೆಟ್ (ಬಿಎಚ್ಇಎಲ್)ನ ಅಧಿಕಾರಿಗಳು ಇದ್ದರು ಎಂದು ತಮಿಳುನಾಡು ಜನರೇಷನ್ ಆ್ಯಂಡ್ ಡಿಸ್ಟ್ರಿಬ್ಯುಷನ್ ಕಾರ್ಪೊರೇಷನ್(ಟಿಎಎನ್ಜಿಇಡಿಸಿಒ)ನ ಅಧ್ಯಕ್ಷ ಡಾ. ಜೆ. ರಾಧಾಕೃಷ್ಣನ್ ಹೇಳಿದ್ದಾರೆ.
ಗಾಯಗೊಂಡ ಕಾರ್ಮಿಕರನ್ನು ಅವಘಡ ನಡೆದ ಸ್ಥಳದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಚೆನ್ನೈಯ ಸ್ಟ್ಯಾನ್ಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವಘಡದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.