ವಾಲ್ಮೀಕಿ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ; ‘ಆಜ್ ತಕ್’ ನಿರೂಪಕಿ ಅಂಜನಾ ಓಂ ಕಶ್ಯಪ್ ವಿರುದ್ಧ ಪ್ರಕರಣ
ಚಂಡಿಗಡ, ಅ. 12: ಪರಿಶಿಷ್ಟ ಜಾತಿಯಾಗಿರುವ ವಾಲ್ಮಿಕಿ ಸಮುದಾಯದ ಧಾಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ‘ಆಜ್ ತಕ್’ ನ ಪತ್ರಕರ್ತೆ ಹಾಗೂ ನಿರ್ವಾಹಕ ಸಂಪಾದಕಿ ಅಂಜನಾ ಓಂ ಕಶ್ಯಪ್ ವಿರುದ್ಧ ಪಂಜಾಬ್ ನ ಲುಧಿಯಾನದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ವಾಲ್ಮೀಕಿ ಧರಂ ಸಮಾಜದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ‘ಇಂಡಿಯಾ ಟುಡೆ’ ಸಮೂಹ ಹಾಗೂ ಅದರ ಅಧ್ಯಕ್ಷ ಆರೂನ್ ಪುರಿ ಅವರ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ.
ಈ ದೂರು ಕಶ್ಯಪ್ ಅವರು ತನ್ನ ‘‘ಬ್ಲ್ಯಾಕ್ ಆ್ಯಂಡ್ ವೈಟ್’’ ಕಾರ್ಯಕ್ರಮದ ಸಂಚಿಕೆಯಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದೆ. ಮಂಗಳವಾರ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಘಟನೆ ಕುರಿತು ಚರ್ಚೆ ನಡೆದಿತ್ತು.
ವಾಲ್ಮೀಕಿ ಧರಂ ಸಮಾಜದ ರಾಷ್ಟ್ರೀಯ ಸಂಯೋಜಕ ಚೌಧರಿ ಯಶ್ಪಾಲ್ ಈ ದೂರು ದಾಖಲಿಸಿದ್ದಾರೆ. ಈ ಸಂಘಟನೆ ನೇತೃತ್ವವನ್ನು ಆಮ್ ಆದ್ಮಿ ಪಕ್ಷದ ನಾಯಕ ವಿಜಯ್ ದಾನವ್ ವಹಿಸಿದ್ದಾರೆ. ಅವರು ಪಂಜಾಬ್ ಸರಕಾರದ ದಲಿತ ವಿಕಾಸ ಮಂಡಳಿಯ ಅಧ್ಯಕ್ಷರು ಕೂಡ ಆಗಿದ್ದಾರೆ.