×
Ad

ಅಕ್ಬರ್-ಸೀತೆ ಜೋಡಿಯಾಗಲು ಸಾಧ್ಯವೇ ಇಲ್ಲ...!: ನ್ಯಾಯಾಲಯದ ಕದ ತಟ್ಟಿದ ವಿಶ್ವ ಹಿಂದೂ ಪರಿಷತ್

Update: 2024-02-17 17:09 IST

Photo : thewire

ಜಲ್ಪೈಗುರಿ: ತ್ರಿಪುರಾದಿಂದ ಪಶ್ಚಿಮ ಬಂಗಾಳಕ್ಕೆ ತರಲಾದ ಎರಡು ಸಿಂಹಗಳಲ್ಲಿ ಒಂದಕ್ಕೆ “ಸೀತಾ” ಎಂಬ ಹೆಸರಿಟ್ಟಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್, ಕೊಲ್ಕತ್ತಾ ಹೈಕೋರ್ಟಿನ ಸರ್ಕಿಟ್‌ ಬೆಂಚ್‌ ಕದ ತಟ್ಟಿದೆ ಎಂದು thewire.in ವರದಿ ಮಾಡಿದೆ.

ಸಿಲಿಗುರಿಯಲ್ಲಿರುವ ಬಂಗಾಳ ಸಫಾರಿ ಪಾರ್ಕ್‌ಗೆ ಫೆಬ್ರವರಿ 12ರಂದು ತ್ರಿಪುರಾದ ಸೆಪಹಿಜಲಾ ಝುಲಾಜಿಕಲ್‌ ಪಾರ್ಕಿನಿಂದ ಎರಡು ಸಿಂಹಗಳನ್ನು ತರಲಾಗಿತ್ತು.

ಅವುಗಳಲ್ಲಿ ಒಂದಕ್ಕೆ ʼಅಕ್ಬರ್‌ʼ ಎಂದು ಹೆಸರನ್ನಿಡಲಾಗಿದ್ದರೆ ಇನ್ನೊಂದಕ್ಕೆ ಸೀತಾ ಎಂಬ ಹೆಸರನ್ನಿಡಲಾಗಿದೆ.

ಅಕ್ಬರ್‌ಗೆ ಏಳು ವರ್ಷ ಪ್ರಾಯವಾಗಿದ್ದರೆ ಸೀತಾ ವಯಸ್ಸು ಆರು ವರ್ಷ. ಮುಘಲ್ ದೊರೆ ಹೆಸರು ಅಕ್ಬರ್‌ ಆಗಿರುವುದರಿಂದ ಅಕ್ಬರ್‌ ಹೆಸರಿಟ್ಟ ಸಿಂಹಕ್ಕೆ ಜೊತೆಗಾತಿಯಾದ ಸಿಂಹಿಣಿಗೆ ಸೀತಾ ಹೆಸರಿಟ್ಟಿದ್ದು ಸಂಘ ಪರಿವಾರ ಸಂಘಟನೆಗೆ ಅಸಮಾಧಾನ ತಂದಿದೆ.

ಅರಣ್ಯ ಅಧಿಕಾರಿಗಳು ಸಿಂಹಗಳಿಗೆ ಹೆಸರನ್ನು ಸೂಚಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಲಿದ್ದಾರೆಂದು ಈ ಹಿಂದೆ ತಿಳಿಯಲಾಗಿತ್ತು. ಹೆಸರುಗಳನ್ನು ಸಿಎಂ ಸೂಚಿಸಿದ್ದರೇ ಎಂಬುದು ಸ್ಪಷ್ಟವಾಗಿಲ್ಲ.

ಹೆಣ್ಣು ಸಿಂಹದ ಹೆಸರು ಬದಲಾಯಿಸಬೇಕೆಂದು ವಿಹಿಂಪ ನ್ಯಾಯಾಲಯವನ್ನು ಕೋರಿದೆ. ಅಕ್ಬರ್‌ ಹೆಸರಿನ ಸಿಂಹದ ಜೋಡಿಯಾಗಿರುವ ಹೆಣ್ಣು ಸಿಂಹಕ್ಕೆ ಸೀತಾ ಹೆಸರಿಟ್ಟಿದ್ದು ಹಿಂದು ಧರ್ಮದ ಮೇಲಿನ ದಾಳಿಯಾಗಿದೆ. ಇದು ಹಿಂದು ಧರ್ಮದವರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ವಿಹಿಂಪ ಜಿಲ್ಲಾಧ್ಯಕ್ಷ ದುಲಾಲ್‌ ಚಂದ್ರ ರೇ ಹೇಳಿದ್ದಾರೆ.

ಪ್ರಕರಣದ ವಿಚಾರಣೆ ಫೆಬ್ರವರಿ 20ರಂದು ನಡೆಯಲಿದೆ. ಅರಣ್ಯಾಧಿಕಾರಿಗಳು ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News