×
Ad

ಉತ್ತರ ಪ್ರದೇಶ: ಕಾರು ಚಾಲಕನನ್ನು ಬಲವಂತವಾಗಿ ಮಂಡಿಯೂರಿಸಿ ನಿಂದಿಸಿದ ಬಿಜೆಪಿ ನಾಯಕನ ಬಂಧನ

Update: 2025-10-22 16:03 IST

Screengrab:X/@yadavakhilesh

ಮೀರತ್: ವಾಹನ ನಿಲುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವೊಂದರಲ್ಲಿ, ಇಬ್ಬರು ಯುವಕರೊಂದಿಗೆ ಬಿಜೆಪಿ ನಾಯಕನೊಬ್ಬ ಅನುಚಿತ ವರ್ತನೆ ತೋರಿದ್ದು, ಈ ಪೈಕಿ ಬಲವಂತವಾಗಿ ಓರ್ವ ಯುವಕನಿಗೆ ತನ್ನ ಮೂಗಿನಿಂದ ನೆಲವನ್ನು ಒರೆಸುವಂತೆ ಮಾಡಿರುವ ಘಟನೆ ಮೀರತ್ ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧಿತ ಬಿಜೆಪಿ ನಾಯಕನನ್ನು ಚಪ್ರಾನ ಎಂದು ಗುರುತಿಸಲಾಗಿದೆ.

ಈ ಘಟನೆ ಅಕ್ಟೋಬರ್ 19ರ ರಾತ್ರಿಯಂದು ಮೀರತ್ ನ ತೇಜ್ ಗಾರ್ಹಿ ಪ್ರದೇಶದ ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವಿಕುಲ್ ಚಪ್ರಾನ ಹಾಗೂ ಆತನ ಸಹಚರರು ಇಬ್ಬರು ಯುವಕರಿಗೆ ಬೆದರಿಕೆ ಒಡ್ಡುತ್ತಿರುವುದು ಹಾಗೂ ಅವರ ಕಾರಿನ ಕಿಟಕಿಯನ್ನು ಒಡೆದು ಹಾಕುತ್ತಿರುವುದು ಸೆರೆಯಾಗಿದೆ. ಈ ವೇಳೆ ಓರ್ವ ಯುವಕ ಕೈಮುಗಿದು ಕ್ಷಮೆ ಯಾಚಿಸುತ್ತಿರುವುದು ಹಾಗೂ ಆತ ಮಂಡಿಯೂರಿ ತನ್ನ ಮೂಗಿನಿಂದ ನೆಲ ಒರೆಸುತ್ತಿರುವುದೂ ಕಂಡು ಬಂದಿದ್ದು, ಮತ್ತೊಬ್ಬ ವ್ಯಕ್ತಿ ಆತನನ್ನು ನಿಂದಿಸುತ್ತಿರುವುದು ಆ ವಿಡಿಯೊದಲ್ಲಿ ದಾಖಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಉತ್ತರ ಪ್ರದೇಶದ ಇಂಧನ ಖಾತೆಯ ರಾಜ್ಯ ಸಚಿವರ ಕಚೇರಿಯ ಕೆಳಗೆ ಪಾರ್ಕಿಂಗ್ ವಿಚಾರದಲ್ಲಿ ನಡೆದ ವಾಗ್ವಾದದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಂ ಸಿಂಗ್, “ವೈರಲ್ ವಿಡಿಯೊವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಬ್ಬರು ವ್ಯಕ್ತಿಗಳ ನಡುವಿನ ವಾಹನ ನಿಲುಗಡೆ ವಿಚಾರದಲ್ಲಿ ನಡೆದ ವಾಗ್ವಾದದಿಂದ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಚಪ್ರಾನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.

ಈ ಘಟನೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, “ಬಿಜೆಪಿಯವರು ಅಧಿಕಾರದ ಮದವೇರಿಸಿಕೊಂಡಿದ್ದು, ಯಾರನ್ನು ಅವಮಾನಿಸಲೂ ಅವರು ಹಿಂಜರಿಯುವುದಿಲ್ಲ. ಆದರೆ, ಒಂದಲ್ಲ ಒಂದು ದಿನ ಎಲ್ಲ ದುರಹಂಕಾರ ಅಂತ್ಯಗೊಳ್ಳಲಿದೆ ಎಂಬುದನ್ನು ಬಿಜೆಪಿಯವರು ಮರೆಯಬಾರದು” ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚಾಟಿ ಬೀಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News