×
Ad

ಕೇಂದ್ರ ಕಾನೂನು ಸಚಿವ ಅರ್ಜುನ್‌ ಮೇಘ್ವಲ್‌ 'ಭ್ರಷ್ಟಾಚಾರಿ ನಂ. 1' ಎಂದ ಹಿರಿಯ ಬಿಜೆಪಿ ಶಾಸಕ

Update: 2023-08-30 13:09 IST

 ಅರ್ಜುನ್‌ ರಾಮ್‌ ಮೇಘ್ವಲ್‌ (PTI)

ಜೈಪುರ್: ಬಿಜೆಪಿ ಶಾಸಕ ಹಾಗೂ ರಾಜಸ್ಥಾನ ವಿಧಾನಸಭೆಯ ಮಾಜಿ ಸ್ಪೀಕರ್‌ ಕೈಲಾಶ್‌ ಚಂದ್ರ ಮೇಘ್ವಲ್ ಅವರು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಲ್‌ ಅವರ ವಿರುದ್ಧ ಕಿಡಿಕಾರಿದ್ದಾರೆ. ಅರ್ಜುನ್‌ ರಾಮ್‌ ಅವರು “ಭ್ರಷ್ಟಾಚಾರಿ ನಂಬರ್‌ ಒನ್” ಎಂದು ಆರೋಪಿಸಿದ ಅವರು ಸಚಿವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಕೋರಿ ತಾವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಭಿಲ್ವಾರಾದ ಶಾಹಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 89 ವರ್ಷದ ಕೈಲಾಶ್‌ ಚಂದ್ರ ಮಾತನಾಡುತ್ತಿದ್ದರು. “ಈ ಅರ್ಜುನ್‌ ಮೇಘ್ವಲ್‌ ಭ್ರಷ್ಟಾಚಾರಿ ನಂಬರ್‌ 1. ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ. ನೀವು ಕಾನೂನು ಸಚಿವರಾಗಿ ನೇಮಿಸಿದವರು ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ಪ್ರಧಾನಿಗೆ ಬರೆಯುವ ಪತ್ರದಲ್ಲಿ ವಿವರಿಸುತ್ತೇನೆ. ಅವರು ಅಧಿಕಾರಿಯಾಗಿದ್ದಾಗ ಅವರು ಬಡವರನ್ನು ಮತ್ತು ಪರಿಶಿಷ್ಟ ಜಾತಿಯವರನ್ನೂ ಬಿಟ್ಟಿಲ್ಲ ಹಾಗೂ ಎಲ್ಲರಿಂದಲೂ ಹಣ ಪಡೆದಿದ್ದರು,” ಎಂದು ಅವರು ಆರೋಪಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವರು ರಾಜಕೀಯ ಸೇರಿದರು ಎಂದೂ ಕೈಲಾಶ್‌ ಚಂದ್ರ ಆರೋಪಿಸಿದ್ದಾರೆ.

“ಅರ್ಜುನ್‌ ಮೇಘ್ವಲ್‌ ಹಿಂದೆ ಕಲೆಕ್ಟರ್‌ ಆಗಿದ್ದಾಗ ವ್ಯಾಪಕ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದರು,” ಎಂದು ಅವರು ಆರೋಪಿಸಿದರು.

“ಇಲ್ಲಿನ ರಾಜಕೀಯದಲ್ಲಿ ಸಚಿವರು ಹಸ್ತಕ್ಷೇಪ ನಡೆಸುತ್ತಿದ್ದಾರೆ. ಅವರ ವಿರುದ್ಧದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳು ಇತ್ಯರ್ಥವಾಗುವ ತನಕ ಸಚಿವ ಸ್ಥಾನದಿಂದ ತೆಗೆದುಹಾಕಬೇಕು,” ಎಂದು ಕೈಲಾಶ್‌ ಚಂದ್ರ ಹೇಳಿದ್ದಾರೆ.

ಅರ್ಜುನ್‌ ಮೇಘ್ವಲ್ ಅವರು ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಂಸ್ಕೃತಿ ಸಚಿವರಾಗಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯ 25 ಸದಸ್ಯರ ಸಂಕಲ್ಪ ಪತ್ರ ಅಥವಾ ಪ್ರಣಾಳಿಕೆ ಸಮಿತಿಯ ಸಂಚಾಲಕರನ್ನಾಗಿ ಇತ್ತೀಚೆಗಷ್ಟೇ ಅರ್ಜುನ್‌ ಮೇಘ್ವಲ್‌ ಅವರನ್ನು ನೇಮಿಸಲಾಗಿತ್ತು. ರಾಜಸ್ಥಾನ ಆಡಳಿತಾತ್ಮಕ ಸೇವೆಗಳ ಅಧಿಕಾರಿಯಾಗಿದ್ದ ಅವರು ನಂತರ ಐಎಎಸ್‌ ಆದಿಕಾರಿಯಾಗಿ ಭಡ್ತಿಗೊಂಡಿದ್ದರಲ್ಲದೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.

2009 ಲೋಕಸಭಾ ಚುನಾವಣೆಗೆ ಮುನ್ನ ವಿಆರ್‌ಎಸ್‌ ಪಡೆದು ಅವರು ಬಿಕಾನೇರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News