ಭಾರತ-ಪಾಕ್ ಕದನ ವಿರಾಮ: ಜಮ್ಮು - ಕಾಶ್ಮೀರ ಹಾಗೂ ಪಂಜಾಬ್ ಗಡಿಯಾದ್ಯಂತ ಸಹಜ ಸ್ಥಿತಿ
Photo credit: PTI
ಹೊಸದಿಲ್ಲಿ: ಸುಮಾರು ಒಂದು ವಾರಗಳ ಕಾಲ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ತೀವ್ರ ಸಂಘರ್ಷದ ನಂತರ, ಶನಿವಾರ ರಾತ್ರಿ ಕಾಶ್ಮೀರ ಕಣಿವೆ ಸಹಜ ಸ್ಥಿತಿಗೆ ಮರಳುತ್ತಿದೆ. ಆರು ದಿನಗಳ ನಂತರ, ಇದೇ ಪ್ರಥಮ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಯಾವುದೇ ವಿಮಾನಗಳು, ಕ್ಷಿಪಣಿಗಳು ಅಥವಾ ಡ್ರೋನ್ ಗಳ ಸದ್ದು ಕೇಳಿ ಬಾರದಿದ್ದರಿಂದ ಕಾಶ್ಮೀರ ಕಣಿವೆಯ ಸ್ಥಳೀಯ ನಿವಾಸಿಗಳು ನಿರಾಳರಾದರು.
“ಶನಿವಾರ ರಾತ್ರಿ 11 ಗಂಟೆಯ ನಂತರ, ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆಯಾದ್ಯಂತ ಇರುವ ಯಾವುದೇ ವಲಯದಿಂದಲೂ ಕದನ ವಿರಾಮ ಉಲ್ಲಂಘನೆಯಾಗಿರುವ ವರದಿಗಳು ಬಂದಿಲ್ಲ” ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಶನಿವಾರ ರಾತ್ರಿ ಜಮ್ಮು ಪ್ರಾಂತ್ಯವಲ್ಲದೆ, ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಬಣಿಸಿದ್ದ ಸಂಘರ್ಷದಿಂದಾಗಿ ತೀವ್ರವಾಗಿ ಬಾಧಿತವಾಗಿದ್ದ ಪೂಂಛ್ ಹಾಗೂ ರಜೌರಿ ಜಿಲ್ಲೆಗಳಲ್ಲೂ ಕೂಡಾ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇದರಿಂದಾಗಿ, ಈ ಪ್ರಾಂತ್ಯಗಳ ಜನರಿಗೆ ಅತ್ಯಗತ್ಯವಾಗಿದ್ದ ನಿರಾಳತೆ ದೊರೆತಿದ್ದು, ರವಿವಾರ ಬೆಳಗ್ಗೆ ಜನರು ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನಾರಂಭಿಸಿದ್ದಾರೆ.
ಶನಿವಾರ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ, ಭೂಮಾರ್ಗ, ವಾಯು ಮಾರ್ಗ ಹಾಗೂ ಸಮುದ್ರ ಮಾರ್ಗದಲ್ಲಿನ ಎಲ್ಲ ದಾಳಿಗಳು ಹಾಗೂ ಸೇನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಪರಸ್ಪರ ಸಮ್ಮತಿಸಿದ್ದಾರೆ ಎಂದು ಶನಿವಾರ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಪ್ರಕಟಿಸಿದ್ದರು.