ಉತ್ತರ ಭಾರತದಲ್ಲಿ ತಮಿಳು ಕಲಿಸುವ ಸಂಸ್ಥೆಗಳನ್ನು ಸರಕಾರ ಯಾಕೆ ರಚಿಸಿಲ್ಲ?: ಸ್ಟಾಲಿನ್ ಪ್ರಶ್ನೆ
Update: 2025-03-04 22:22 IST
Photo : PTI
ಚೆನ್ನೈ: ಹಿಂದಿ ಹೇರಿಕೆಯ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧದ ವಾಗ್ದಾಳಿಯನ್ನು ತೀವ್ರಗೊಳಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಮ್. ಕೆ. ಸ್ಟಾಲಿನ್, ಉತ್ತರ ಭಾರತದ ಜನರಿಗೆ ತಮಿಳು ಅಥವಾ ಇತರ ದಕ್ಷಿಣ ಭಾರತದ ಭಾಷೆಗಳನ್ನು ಕಲಿಸಲು ಕೇಂದ್ರ ಸರಕಾರವು ಯಾಕೆ ಇನ್ನೂ ಸಂಸ್ಥೆಗಳನ್ನು ರಚಿಸಿಲ್ಲ ಎಂಬುದಾಗಿ ಮಂಗಳವಾರ ಪ್ರಶ್ನಿಸಿದ್ದಾರೆ.
‘‘ಹಿಂದಿ ಹೇರಿಕೆಯ ವಿರುದ್ಧ ಸಾರ್ವಕಾಲಿಕ ವಿರೋಧ’’ ಎಂಬ ವಿಷಯಕ್ಕೆ ಸಂಬಂಧಿಸಿ ಪಕ್ಷದ ಕಾರ್ಯಕರ್ತರಿಗೆ ಪತ್ರವೊಂದನ್ನು ಬರೆದಿರುವ ಸ್ಟಾಲಿನ್, ಗೂಗಲ್ ಟ್ರಾನ್ಸ್ಲೇಟ್, ಚಾಟ್ ಜಿಪಿಟಿ ಮತ್ತು ಕೃತಕ ಬುದ್ಧಿಮತ್ತೆಯು ಭಾಷಾ ಅಡೆತಡೆಗಳನ್ನು ಮೀರಿ ನಿಲ್ಲಲು ಜನರಿಗೆ ಸಹಾಯ ಮಾಡುವುದು ಎಂದು ಅಭಿಪ್ರಾಯಪಟ್ಟರು. ಅಗತ್ಯ ತಂತ್ರಜ್ಞಾನವನ್ನು ಮಾತ್ರ ಕಲಿಯುವುದು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಎಂದು ಹೇಳಿದ ಅವರು, ಭಾಷೆಯೊಂದನ್ನು ಹೇರುವುದು ಅವರಿಗೆ ಹೊರೆಯಾಗುತ್ತದೆ ಎಂದರು.