×
Ad

ಅರಬಿ ಸಮುದ್ರದಲ್ಲಿ ರೂಪುಗೊಂಡ ‘ಶಕ್ತಿ’ ಚಂಡಮಾರುತ : ಮಹಾರಾಷ್ಟ್ರದಲ್ಲಿ ಕಟ್ಟೆಚ್ಚರ

Update: 2025-10-04 23:33 IST

Image: ANI/ Express Photo

ಹೊಸದಿಲ್ಲಿ,ಅ.4: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತವು ‘ಶಕ್ತಿ’ ಚಂಡಮಾರುತವಾಗಿ ತೀವ್ರಗೊಂಡಿದ್ದು, ಪ್ರತಿ ಗಂಟೆಗೆ 100ರಿಂದ 110 ಕಿ.ಮೀ.ವೇಗದ ಗಾಳಿಯೊಂದಿಗೆ ಹಾವಳಿಯೆಬ್ಬಿಸಲು ಸಜ್ಜಾಗುತ್ತಿದೆ. ಶನಿವಾರ ಬೆಳಿಗ್ಗೆ ಚಂಡಮಾರುತವು ಗುಜರಾತಿನ ದ್ವಾರಕಾದಿಂದ ಪಶ್ಚಿಮ-ನೈರುತ್ಯ ದಿಕ್ಕಿನಲ್ಲಿ ಸುಮಾರು 420ಕಿ.ಮೀ.ದೂರದಲ್ಲಿ ಸ್ಥಿತಗೊಂಡಿದ್ದು, ಪ್ರತಿ ಗಂಟೆಗೆ 13ರಿಂದ 18 ಕಿ.ಮೀ.ವೇಗದಲ್ಲಿ ಪಶ್ಚಿಮ-ನೈರುತ್ಯ ದಿಕ್ಕಿಗೆ ಚಲಿಸುತ್ತಿದೆ.

‘ಶಕ್ತಿ’2025ನೇ ಸಾಲಿನಲ್ಲಿ ಅರಬಿ ಸಮುದ್ರದಲ್ಲಿ ಮಾನ್ಸೂನ್ ನಂತರದ ಮೊದಲ ಚಂಡಮಾರುತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ದೃಢಪಡಿಸಿದೆ.

ಚಂಡಮಾರುತವು ಅ.5ರ ವೇಳೆಗೆ ವಾಯುವ್ಯ ಮತ್ತು ಪಕ್ಕದ ಪಶ್ಚಿಮ-ಮಧ್ಯ ಅರಬಿ ಸಮುದ್ರವನ್ನು ತಲುಪುವ ನಿರೀಕ್ಷೆಯಿದೆ. ಅ.6ರಿಂದ ಪೂರ್ವ-ಈಶಾನ್ಯದತ್ತ ತಿರುವು ಪಡೆದುಕೊಳ್ಳಲಿದೆ ಮತ್ತು ಕ್ರಮೇಣ ದುರ್ಬಲಗೊಳ್ಳಲಿದೆ ಎಂದು ಐಎಂಡಿ ಅಂದಾಜಿಸಿದೆ. ಚಂಡಮಾರುತವು ಭಾರತೀಯ ಕರಾವಳಿಗೆ ನೇರವಾಗಿ ಅಪ್ಪಳಿಸುವ ಸಾಧ್ಯತೆಯಿಲ್ಲವಾದರೂ ಅದು ಪಶ್ಚಿಮ ಭಾರತದಾದ್ಯಂತ ಹವಾಮಾನದ ಮೇಲೆ ಪ್ರಭಾವ ಬೀರುತ್ತಿದೆ.

ಐಎಂಡಿ ಅ.7ರವರೆಗೆ ಮಹಾರಾಷ್ಟ್ರದ ಆರು ಕರಾವಳಿ ಜಿಲ್ಲೆಗಳಾದ ಮುಂಬೈ, ಥಾಣೆ, ಪಾಲ್ಘರ್, ರತ್ನಾಗಿರಿ, ರಾಯಗಢ ಮತ್ತು ಸಿಂಧುದುರ್ಗಗಳಿಗೆ ಮಧ್ಯಮ ಚಂಡಮಾರುತ ಎಚ್ಚರಿಕೆಗಳನ್ನು ಹೊರಡಿಸಿದೆ. ಅ.5ರವರೆಗೆ ಉತ್ತರ ಮಹಾರಾಷ್ಟ್ರ ಕರಾವಳಿಯಲ್ಲಿ ಪ್ರತಿ ಗಂಟೆಗೆ 45-55ರಿಂದ 65 ಕಿ.ಮೀ.ವೇಗದ ಗಾಳಿ ಬೀಸುವ ನಿರೀಕ್ಷೆಯಿದೆ.

ಪ್ರಸ್ತುತ ಸಮುದ್ರವು ಅತ್ಯಂತ ಪ್ರಕ್ಷುಬ್ಧವಾಗಿದ್ದು, ಅ.5ರವರೆಗೆ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಅಧಿಕಾರಿಗಳು ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಒಳನಾಡು ಪ್ರದೇಶಗಳಲ್ಲಿ ವಿಶೇಷವಾಗಿ ಪೂರ್ವ ವಿದರ್ಭ ಮತ್ತು ಮರಾಠವಾಡಾದ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ತೀವ್ರವಾದ ಮೋಡ ಕವಿದ ವಾತಾವರಣ ಮತ್ತು ತೇವಾಂಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕೊಂಕಣದ ತಗ್ಗು ಪ್ರದೇಶಗಳಲ್ಲಿ ನೆರೆಯ ಅಪಾಯವನ್ನು ಅಂದಾಜಿಸಲಾಗಿದೆ.

ಚಂಡಮಾರುತ ಎಚ್ಚರಿಕೆಗೆ ಪ್ರತಿಕ್ರಿಯೆಯಾಗಿ ಮಹಾರಾಷ್ಟ್ರ ಸರಕಾರವು ಸಂಭಾವ್ಯ ಪೀಡಿತ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ಘಟಕಗಳನ್ನು ಸಕ್ರಿಯಗೊಳಿಸಿದೆ. ಕರಾವಳಿ ಮತ್ತು ಸಂಭಾವ್ಯ ನೆರೆಪೀಡಿತ ವಲಯಗಳಲ್ಲಿ ಜನರನ್ನು ತೆರವುಗೊಳಿಸಲು ಯೋಜನೆಗಳನ್ನು ಸಿದ್ಧಪಡಿಸುವಂತೆ ಮತ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News