×
Ad

ಜಾತಿಗಣತಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ ಬೆನ್ನಲ್ಲೇ ಹಿಂದಿನ ವೀಡಿಯೊ ಹಂಚಿಕೊಂಡು ತಿರುಗೇಟು ನೀಡಿದ ಕಾಂಗ್ರೆಸ್

Update: 2025-05-26 18:10 IST

 ನರೇಂದ್ರ ಮೋದಿ ,  ಜೈರಾಮ್ ರಮೇಶ್ | PC : PTI 

ಹೊಸದಿಲ್ಲಿ: ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು 26 ಮಂದಿ ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಬೆನ್ನಿಗೇ, ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತು. ಆದರೆ, ಇದೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರನೆ ಎಪ್ರಿಲ್ 30ರಂದು ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಘೋಷಿಸಿದ್ದು ಅಚ್ಚರಿ ಮೂಡಿಸಿದೆ ಎಂದು ಕಾಂಗ್ರೆಸ್ ಹೇಳಿದೆ.

ಈ ಕುರಿತು ಎಕ್ಸ್ ನಲ್ಲಿ ಎರಡು ಹಳೆಯ ವಿಡಿಯೊಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಎನ್‌ಡಿಎ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಜಾತಿ ಗಣತಿಯ ಸಂಪೂರ್ಣ ಶ್ರೇಯಸ್ಸು ತನ್ನದೇ ಎಂದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ” ಎಂದು ಟೀಕಿಸಿದ್ದಾರೆ.

ಈ ಪೋಸ್ಟ್ ನೊಂದಿಗೆ ಅಕ್ಟೋಬರ್ 2, 2023ರಂದು ಬಿಹಾರದ ಜಾತಿ ಗಣತಿ ಸಮೀಕ್ಷೆ ಬಿಡುಗಡೆಯಾದ ಸಂದರ್ಭ ಹಾಗೂ ಎಪ್ರಿಲ್ 28, 2024ರಂದು ಜಾತಿ ಗಣತಿಗೆ ಕಾಂಗ್ರೆಸ್ ಬೇಡಿಕೆ ಇಟ್ಟ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಪ್ರತಿಕ್ರಿಯೆಯ ಎರಡು ವಿಡಿಯೊ ತುಣುಕುಗಳನ್ನೂ ಅವರು ಹಂಚಿಕೊಂಡಿದ್ದಾರೆ.

“ಜಾತಿ ಗಣತಿ ಪ್ರಕ್ರಿಯೆಯು ಹಿಂದುಳಿದ ಸಮುದಾಯಗಳನ್ನು ಅಭಿವೃದ್ಧಿಯ ಮುಖ್ಯ ವಾಹಿನಿಗೆ ತರುವ ಪ್ರಮುಖ ಮಾರ್ಗವಾಗಿದೆ. ಜಾತಿ ರಾಜಕಾರಣದಲ್ಲಿ ನಮ್ಮ ಸರಕಾರ ನಂಬಿಕೆ ಇಟ್ಟಿಲ್ಲ. ಆದರೆ, ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ಬದ್ಧವಾಗಿದೆ” ಎಂದು ರವಿವಾರ ನಡೆದಿದ್ದ ಎನ್‌ಡಿಎ ಸರಕಾರಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದರು.

ಪ್ರಧಾನಿ ಮೋದಿಯ ಈ ಮಾತುಗಳನ್ನು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿರುವ ಜೈರಾಮ್ ರಮೇಶ್, “ವಿರೋಧ ಪಕ್ಷಗಳು ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜಿಸುವ ಮೂಲಕ, ಇಂದಿಗೂ ತಮ್ಮ ಪಾಪವನ್ನು ಮುಂದುವರಿಸಿವೆ” ಎಂದು ಅವರು ಆರೋಪಿಸಿದ್ದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷವು ಜಾತಿ ಗಣತಿಗಾಗಿ ಆಗ್ರಹಿಸಿದಾಗ, ಈ ಕುರಿತು ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, “ಇದು ನಗರ ನಕ್ಸಲರ ಮನಸ್ಥಿತಿಯ ಭಾಗವಾಗಿದೆ” ಎಂದು ಟೀಕಿಸಿದ್ದ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, “ಜಾತಿ ಗಣತಿ ಎಂಬ ಪರಿಕಲ್ಪನೆಯು ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಚಿಂತನೆಯಲ್ಲಿ ಎಂದಿಗೂ ಇದೆ. ಎನ್ಡಿಎ ಮೈತ್ರಿಕೂಟದ ಭಾಗವಾದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರಕಾರವು ಇದನ್ನು ಮೊದಲ ಬಾರಿಗೆ ಜಾರಿಗೆ ತಂದಿದೆ. ದಲಿತರು ಹಾಗೂ ಇನ್ನಿತರ ಕೆಲ ಸಮುದಾಯಗಳು ಇಂದಿಗೂ ಹಿಂದುಳಿದಿದ್ದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಅಗತ್ಯವಿದೆ” ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ, ಎಪ್ರಿಲ್ 30ರಂದು ಸ್ವಾತಂತ್ರ್ಯಾನಂತರ ಇದೇ ಪ್ರಥಮ ಬಾರಿಗೆ ಜನ ಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿತ್ತು. ಅದಕ್ಕೂ ಹಿಂದೆಯೇ, ಕಾಂಗ್ರೆಸ್ ಸಹಿತ ಇತರ ವಿರೋಧ ಪಕ್ಷಗಳು ಜಾತಿ ಗಣತಿ ನಡೆಸಬೇಕು ಎಂದು ಪಟ್ಟು ಹಿಡಿದಿದ್ದವು.

ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಇಂತಹ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೊಂದಿಗೆ ಜಾತಿ ಗಣತಿಯನ್ನೂ ನಡೆಸಲಾಗಿತ್ತು. ತದನಂತರ, ಬಿಹಾರ ಮತ್ತು ತೆಲಂಗಾಣದಲ್ಲೂ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News