ದಿಲ್ಲಿ ವಿಧಾನಸಭೆ : ಬಹುಮತವಿದ್ದರೂ ವಿಶ್ವಾಸ ನಿರ್ಣಯ ಮಂಡಿಸಲಿರುವ ಕೇಜ್ರಿವಾಲ್
Update: 2024-02-16 17:22 IST
PTI Photo
ಹೊಸದಿಲ್ಲಿ: ದಿಲ್ಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯವನ್ನು ಮಂಡಿಸುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ. ತಮ್ಮ ಸರ್ಕಾರವನ್ನು ಉರುಳಿಸುವ ಯತ್ನವಾಗಿ ಬಿಜೆಪಿ ಆಪ್ ಶಾಸಕರನ್ನು “ಖರೀದಿಸಲು” ಯತ್ನಿಸುತ್ತಿದೆ ಎಂದು ಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು.
ಪಕ್ಷ ಬದಲಾಯಿಸಲು ಏಳು ಆಪ್ ಶಾಸಕರಿಗೆ ಬಿಜೆಪಿ ರೂ 25 ಕೋಟಿ ನೀಡುವ ಆಮಿಷ ಒಡ್ಡಿತ್ತು ಎಂದು ಕೇಜ್ರಿವಾಲ್ ಆರೋಪಿಸಿದ್ದರು. ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಶೀಘ್ರ ಬಂಧಿಸಲಾಗುವುದೆಂದೂ ಬಿಜೆಪಿ ಅವರಿಗೆ ಬೆದರಿಸಿತ್ತದೆಂದು ಆರೋಪಿಸಲಾಗಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಕೇಜ್ರಿವಾಲ್ ನಾಳೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಅವರ ಇಂದಿನ ಹೇಳಿಕೆ ಮಹತ್ವ ಪಡೆದಿದೆ.
ಜಾರಿ ನಿರ್ದೇಶನಾಲಯವೂ ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರಿಗೆ ಸೋಮವಾರ ಹಾಜರಾಗುವಂತೆ ಸೂಚಿಸಿದೆ.