ಮೋದಿ ‘ಜೈ ಬಜರಂಗ ಬಲಿ’ ಘೋಷಣೆ ಕೂಗಿದರೂ ಚು.ಆಯೋಗ ಸುಮ್ಮನಿರುತ್ತದೆ: ಯಚೂರಿ
ಸೀತಾರಾಮ ಯಚೂರಿ | Photo: PTI
ಹೈದರಾಬಾದ್: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಜೈ ಬಜರಂಗ ಬಲಿ’ ಯಂತಹ ಘೋಷಣೆಗಳನ್ನು ಕೂಗಿದರೂ, ಚುನಾವಣಾ ಆಯೋಗವು ಮೌನವಹಿಸಿತ್ತು, ಆದರೆ ಪ್ರತಿಪಕ್ಷ ನಾಯಕರು ಏನಾದರೂ ಅಂದರೆ ತಕ್ಷಣವೇ ಪ್ರತಿಕ್ರಿಯಿಸುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಶನಿವಾರ ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಸಿಪಿಎಂ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು. ಇಲ್ಲದೇ ಇದ್ದಲ್ಲಿ ದೇಶದ ಜಾತ್ಯತೀತ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿಯವರು , ಮತದಾರರಿಗೆ ಜೈ ಬಜರಂಗ ಬಲಿ ಎಂಬ ಘೋಷಣೆ ಕೂಗಿ, ಮತದಾರರಲ್ಲಿ ಮತವನ್ನು ಯಾಚಿಸಿದ್ದರು. ಆ ಬಗ್ಗೆ ಚುನಾವಣಾ ಆಯೋಗವು ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸಿರಲಿಲ್ಲ. ಆದರೆ ಪ್ರತಿಪಕ್ಷ ನಾಯಕರು ಏನಾದರೂ ಹೇಳಿದಲ್ಲಿ, ಆಗ ನೋಟಿಸ್ ಗಳನ್ನು ನೀಡುತ್ತದೆ ಮತ್ತು ಕ್ರಮಗಳನ್ನು ಕೈಗೊಳ್ಳುತ್ತದೆ’’ ಎಂದು ಯಚೂರಿ ಆರೋಪಿಸಿದರು.
ಹಾಲಿ ಪಂಚ ರಾಜ್ಯ ವಿಧಾನಸಭಾ ಚುನಾವಣಾ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕಠಿಣ ಸ್ಪರ್ಧೆಯೇರ್ಪಟ್ಟಿದೆ. ಉಳಿದೆಡೆ ಬಿಜೆಪಿಯು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದವರು ಹೇಳಿದರು.