ಖತರ್ನಲ್ಲಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಪೂರ್ಣೇಂದು ತಿವಾರಿ ಬಂಧನ: ವಿದೇಶಾಂಗ ಸಚಿವಾಲಯ ಮಾಹಿತಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ನ್ಯಾಯಾಲಯದ ಆದೇಶದ ನಂತರ ಡಿಸೆಂಬರ್ನಲ್ಲಿ ಖತರ್ನಲ್ಲಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕಮಾಂಡರ್ ಪೂರ್ಣೇಂದು ತಿವಾರಿ ಅವರನ್ನು ಮತ್ತೆ ಬಂಧಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಪ್ರತಿಕ್ರಿಯಿಸಿ, ಖತರ್ನಲ್ಲಿ ಬಹಳ ಸಮಯದಿಂದ ನಡೆಯುತ್ತಿರುವ ಪ್ರಕರಣವೊಂದರಲ್ಲಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಪೂರ್ಣೇಂದು ತಿವಾರಿ ಅವರನ್ನು ಬಂಧಿಸಲಾಗಿದೆ. ನಮ್ಮ ರಾಯಭಾರಿ ಕಚೇರಿಯು ಕಮಾಂಡರ್ ತಿವಾರಿ ಮತ್ತು ಅವರ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದೆ. ನ್ಯಾಯಾಲಯದ ಆದೇಶದ ನಂತರ ಬಂಧನ ನಡೆದಿದೆ. ಈ ಪ್ರಕರಣ ವಿಚಾರಣೆಯಲ್ಲಿದೆ. ನಾನು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ತಿವಾರಿ ಅವರನ್ನು ಈ ಹಿಂದೆ ಆಗಸ್ಟ್ 2022 ರಲ್ಲಿ ಇತರ 7 ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿ ಜೊತೆ ವಶಕ್ಕೆ ಪಡೆಯಲಾಯಿತು. ಅವರ ವಿರುದ್ಧದ ಆರೋಪಗಳನ್ನು ಖತರ್ ಅಧಿಕಾರಿಗಳು ಬಹಿರಂಗಪಡಿಸಿರಲಿಲ್ಲ.