×
Ad

ಅಗ್ನಿವೀರರಿಗೆ ಪೊಲೀಸ್ ಕಾನ್ಸ್‌ಟೇಬಲ್‌ ಹಾಗೂ ಅರಣ್ಯ ರಕ್ಷಕ ಹುದ್ದೆಗಳಲ್ಲಿ ಶೇ. 10 ಮೀಸಲಾತಿ ಪ್ರಕಟಿಸಿದ ಹರ್ಯಾಣ ಸರಕಾರ

Update: 2024-07-17 21:04 IST

PC : PTI 

ಚಂಡೀಗಢ : ಹರ್ಯಾಣ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳಷ್ಟೆ ಬಾಕಿ ಇರುವಾಗ, ಅಗ್ನಿವೀರ ಯೋಧರಿಗೆ ಪೊಲೀಸ್ ಕಾನ್ಸ್‌ಟೇಬಲ್‌, ಅರಣ್ಯ ರಕ್ಷಕ ಹಾಗೂ ಜೈಲ್ ವಾರ್ಡನ್ ಹುದ್ದೆಗಳ ನೇಮಕಾತಿಯಲ್ಲಿ ಶೇ. 10ರಷ್ಟು ಮೀಸಲಾತಿಯನ್ನು ಬುಧವಾರ ಹರ್ಯಾಣದ ಬಿಜೆಪಿ ಸರಕಾರ ಪ್ರಕಟಿಸಿದೆ. ಇದರೊಂದಿಗೆ ಇನ್ನೂ ಕೆಲವು ಹುದ್ದೆಗಳಿಗೂ ಮೀಸಲಾತಿ ಪ್ರಕಟಿಸಲಾಗಿದೆ.

ಒಂದು ವೇಳೆ ಅಗ್ನಿವೀರ ಯೋಧರೇನಾದರೂ ತಮ್ಮದೇ ವ್ಯಾಪಾರವನ್ನು ಪ್ರಾರಂಭಿಸಲು ಬಯಸಿದರೆ, ರಾಜ್ಯ ಸರಕಾರವು ಅಂಥವರಿಗೆ ರೂ. 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಮಂಜೂರು ಮಾಡಲಿದೆ ಎಂದೂ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ.

ಪೊಲೀಸ್ ಕಾನ್ಸ್‌ಟೇಬಲ್‌ಗಳು, ಗಣಿ ಕಾವಲುಗಾರರು, ಅರಣ್ಯ ರಕ್ಷಕರು, ಜೈಲ್ ವಾರ್ಡನ್‌ಗಳು ಹಾಗೂ ರಾಜ್ಯ ಸರಕಾರ ನೇಮಿಸಿರುವ ವಿಶೇಷ ಪೊಲೀಸ್ ಅಧಿಕಾರಿಗಳ ಹುದ್ದೆಗಳಿಗೆ ನಡೆಯುವ ನೇರ ನೇಮಕಾತಿಯಲ್ಲಿ ಅಗ್ನಿವೀರ ಯೋಧರಿಗೆ ಶೇ. 10ರಷ್ಟು ಸಮಾನ ಮೀಸಲಾತಿ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿ ದರ್ಜೆ ಹಾಗೂ ಡಿ ದರ್ಜೆ ಉದ್ಯೋಗಗಳಲ್ಲಿ ಮೂರು ವರ್ಷಗಳ ವಿನಾಯಿತಿಯನ್ನೂ ನೀಡಲಾಗುವುದು. ಆದರೆ, ಅಗ್ನಿವೀರ ಯೋಧರ ಮೊದಲ ತಂಡದ ಸದಸ್ಯರಿಗೆ ಐದು ವರ್ಷಗಳ ವಯೋಮಾನ ವಿನಾಯಿತಿ ಇರಲಿದೆ ಎಂದೂ ಅವರು ತಿಳಿಸಿದ್ದಾರೆ.

ಸಿ ದರ್ಜೆಯ ನಾಗರಿಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಗ್ನಿವೀರ ಯೋಧರಿಗೆ ಶೇ. 5ರಷ್ಟು ಸಮಾನ ಮೀಸಲಾತಿ ಇರಲಿದೆ ಎಂದು ಮುಖ್ಯಮಂತ್ರಿ ಸೈನಿ ಹೇಳಿದ್ದಾರೆ.

ಒಂದು ವೇಳೆ ಯಾವುದೇ ಉದ್ಯಮಗಳು ಮಾಸಿಕ ರೂ. 30,000 ವೇತನ ನೀಡಿ ಅಗ್ನಿವೀರ ಯೋಧರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಂಡಿದ್ದೇ ಆದರೆ, ಅಂತಹ ಉದ್ಯಮಗಳಿಗೆ ವಾರ್ಷಿಕ ರೂ. 60,000 ಸಹಾಯ ಧನ ನೀಡಲಾಗುವುದು ಎಂದೂ ಅವರು ಪ್ರಕಟಿಸಿದ್ದಾರೆ.

ಇದೇ ವೇಳೆ, ಆದ್ಯತೆಯ ಮೇರೆಗೆ ಅಗ್ನಿವೀರ ಯೋಧರು ಶಸ್ತ್ರಾಸ್ತ್ರ ಬಳಕೆಯ ಪರವಾನಗಿ ಪಡೆಯಲಿದ್ದಾರೆ ಎಂದೂ ಅವರು ಪ್ರಕಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News