×
Ad

ಕೇರಳ | ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕಿಯ ಮೃತದೇಹ ಪತ್ತೆ: ತಾಯಿಯ ವಿರುದ್ಧ ಕೊಲೆ ಪ್ರಕರಣ ದಾಖಲು

Update: 2025-05-20 16:51 IST

PC : thenewsminute.com

ಕೊಚ್ಚಿ: ಕೇರಳದಲ್ಲಿ ಬೆಳಕಿಗೆ ಬಂದಿರುವ ಆಘಾತಕಾರಿ ಘಟನೆಯೊಂದರಲ್ಲಿ ತಿರುವಣಿಯೂರ್ ಪಂಚಾಯತ್‌ ನಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕಿಯ ಮೃತದೇಹವು ಮಂಗಳವಾರ ಬೆಳಗ್ಗೆ ಮೂಳಿಕುಳಂ ಸೇತುವೆ ಕೆಳಗೆ ಹರಿಯುವ ಚಾಲುಕ್ಕುಡಿ ನದಿಯಲ್ಲಿ ಪತ್ತೆಯಾಗಿದೆ. ಆಕೆಯ ತಾಯಿ ಸಂಧ್ಯಾ ಎಂಬಾಕೆಯೇ ಆಕೆಯನ್ನು ನದಿಗೆ ಎಸೆದಿದ್ದಳು ಎಂದು ಆರೋಪಿಸಲಾಗಿದೆ. ಈ ಸಂಬಂಧ ಆಕೆಯನ್ನು ವಶಕ್ಕೆ ಪಡೆದಿರುವ ಚೆಂಗಮನಾಡ್ ಠಾಣೆಯ ಪೊಲೀಸರು, ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಬಾಲಕಿಯು ಸಂಧ್ಯಾ ಹಾಗೂ ಆಕೆಯ ಪತಿ ಸುಭಾಷ್ ರ ಕಿರಿಯ ಪುತ್ರಿ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಸೋಮವಾರ ಸಂಜೆ ಮಟ್ಟುಕ್ಕುಳಿಯಲ್ಲಿರುವ ಅಂಗನವಾಡಿಯಿಂದ ತನ್ನ ಪುತ್ರಿಯನ್ನು ಸಂಧ್ಯಾ ಕರೆದೊಯ್ದಿದ್ದು, ಆಕೆ ತನ್ನ ಪುತ್ರಿಯನ್ನು ಕರೆದೊಯತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ನಂತರ, ಆಕೆ ತನ್ನ ಪೋಷಕರ ಕುಟುಂಬ ವಾಸಿಸುತ್ತಿರುವ ಕುರುರಮಸ್ಸೇರಿಗೆ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಳು ಎಂದು ಹೇಳಲಾಗಿದೆ.

ತಡ ಸಂಜೆಯಾದರೂ ತಾಯಿ ಮತ್ತು ಮಗು ಇಬ್ಬರೂ ಮನೆಗೆ ಮರಳದಿದ್ದುದರಿಂದ ಕುಟುಂಬದ ಸದಸ್ಯರಲ್ಲಿ ಕಳವಳ ಪ್ರಾರಂಭವಾಗಿದೆ. ಈ ವೇಳೆ, ಸಂಧ್ಯಾಳ ಪತಿ ಸುಭಾಷ್ ತಮ್ಮ ತಂದೆಯೊಂದಿಗೆ ಕೊಲಂಚೆರಿಯಲ್ಲಿನ ಆಸ್ಪತ್ರೆಯೊಂದರಲ್ಲಿದ್ದರು ಎನ್ನಲಾಗಿದ್ದು, ತಾಯಿ ಮಗು ಕಾಣೆಯಾಗಿರುವ ಕುರಿತು ಮೊದಲ ಬಾರಿಗೆ ಆತಂಕ ವ್ಯಕ್ತಪಡಿಸಿದ್ದು ಸುಭಾಷ್ ರ ಸಹೋದರ ಎಂದು ಹೇಳಲಾಗಿದೆ. ಈ ಕುರಿತು ಕುರುಮಸ್ಸೇರಿಯಲ್ಲಿರುವ ಸಂಧ್ಯಾಳ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದಾಗ, ಆಕೆ ತಮ್ಮ ಮನೆಗೆ ಆಗಮಿಸಿಲ್ಲ ಎಂದು ತಿಳಿಸಿದ್ದಾರೆ. ತದನಂತರ, ಸೋಮವಾರ ರಾತ್ರಿ ಏಕಾಂಗಿಯಾಗಿ ಮನೆಗೆ ಮರಳಿರುವ ಸಂಧ್ಯಾ, ಮೊದಲಿಗೆ ಮಗು ಕಾಣೆಯಾಗಿದೆ ಎಂದಷ್ಟೇ ಹೇಳಿದ್ದು, ಮತ್ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿದ್ದಳು ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ವಾರ್ಡ್ ಸದಸ್ಯೆ ಬೀನಾ ಜೋಸ್, ನಂತರ ತನ್ನ ಹೇಳಿಕೆಯನ್ನು ಬದಲಿಸಿದ ಸಂಧ್ಯಾ, ನಾವು ಆಳುವಾದಲ್ಲಿದ್ದಾಗ ಮಗು ನಾಪತ್ತೆಯಾಯಿತು ಎಂದು ತಿಳಿಸಿದಳು ಎಂದು ಹೇಳಿದ್ದಾರೆ. ಆದರೆ, ಈ ಹಿಂದೆ ಸಂಧ್ಯಾ ತನ್ನ ಪುತ್ರಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿಯಿಂದಾಗಿ, ಆಕೆಯ ಹೇಳಿಕೆಯ ಬಗ್ಗೆ ತಕ್ಷಣವೇ ಅನುಮಾನಗಳು ವ್ಯಕ್ತವಾಗಿವೆ. ಇದರ ಬೆನ್ನಿಗೇ, ಈ ಕುರಿತು ಪುತೆನ್ ಕ್ರೂಝ್ ಪೊಲೀಸ್ ಠಾಣೆಗೆ ವರದಿ ಮಾಡಲಾಗಿದೆ.

ಆದರೆ, ಸಂಧ್ಯಾ ಮುಳಿಕುಳಂ ಸೇತುವೆಯ ಬಳಿ ತನ್ನ ಮಗುವನ್ನು ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ, ಆಕೆಯ ಕುಟುಂಬದ ಸದಸ್ಯರ ಅತಂಕ ಮತ್ತಷ್ಟು ದೃಢವಾಗಿದೆ. ಇದರ ಬೆನ್ನಿಗೇ, ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಂತರ, ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸುವುದಕ್ಕೂ ಮುನ್ನವೇ, ರಾತ್ರಿ ಸುಮಾರು 2.30ರ ವೇಳೆಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಆದರೆ, ಈ ಹತ್ಯೆಯ ಹಿಂದಿನ ಉದ್ದೇಶವೇನು ಎಂಬ ಸಂಗತಿ ಇನ್ನೂ ಬೆಳಕಿಗೆ ಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News