ಕೊಲ್ಕತ್ತಾ: ಪ್ರಿಯತಮೆಯ ರಕ್ಷಣೆಗೆ ಮುಂದಾದ ಯುವಕನನ್ನು ಥಳಿಸಿ ಕೊಂದ ದುಷ್ಕರ್ಮಿಗಳು
ಕೊಲ್ಕತ್ತಾ: ತನ್ನ ಲಿವ್ ಇನ್ ಸಂಗಾತಿಗೆ ಕಿರುಕುಳ ನೀಡುತ್ತಿದ್ದ ಮೂವರ ವಿರುದ್ಧ ಸಂಘರ್ಷಕ್ಕಿಳಿದ 29 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ. ಯುವತಿ ತಾನು ವಾಸವಿದ್ದ ಬಾಡಿಗೆ ಮನೆಯಿಂದ ಕ್ಷುಲ್ಲಕ ಜಗಳದ ಬಳಿಕ ಸಂಗಾತಿಯನ್ನು ಬೆದರಿಸುವ ಸಲುವಾಗಿ ಹೊರ ನಡೆದಿದ್ದಳು.
ಮೂವರು ದುಷ್ಕರ್ಮಿಗಳು ಸಂಕೇತ್ ಚಟರ್ಜಿಯನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿದ್ದಲ್ಲದೇ, ಆತನನ್ನು ರಕ್ಷಿಸುವಂತೆ ಮೊರೆ ಇಟ್ಟ ಪ್ರಿಯತಮೆಯ ಮೇಲೂ ಹಲ್ಲೆ ನಡೆಸಿದ್ದಾರೆ. ಬಳಿಕ ಖುದಿರಾಂಪಲ್ಲಿ ಪ್ರದೇಶದಲ್ಲಿ ನೆರವಿಗಾಗಿ ಯುವತಿ ಯಾಚಿಸಿದರೂ ಯಾರೂ ಸಹಾಯಹಸ್ತ ಚಾಚಲಿಲ್ಲ. ಬಳಿಕ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಕೇತ್ ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಬೆಳಿಗ್ಗೆ 8ರ ಸುಮಾರಿಗೆ ಆತ ಮೃತಪಟ್ಟ ಎಂದು ಪೊಲೀಸರು ವಿವರಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿಗಳಾದಶಂಭು ಮಂಡಲ್, ಸಾಗರ್ ದಾಸ್ ಮತ್ತು ರಾಜು ಘೋಷ್ ಎಂಬುವವರನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.
ವಾಗ್ವಾದದ ಬಳಿಕ ಸಂಕೇತ್ ನ 23 ವರ್ಷದ ಲಿವ್ ಇನ್ ಸಂಗಾತಿ ಮನೆಬಿಟ್ಟು ಹೋಗಿದ್ದಳು. ಈ ಸಮಯದಲ್ಲಿ ಮನೆ ಮುಂದೆ ಅಡ್ಡಾಡುತ್ತಿದ್ದ ಮೂವರು ಗೂಂಡಾಗಳು ಕಿರುಕುಳ ನೀಡಲು ಮಂದಾದರು. ಪಾನಮತ್ತ ಸ್ಥಿತಿಯಲ್ಲಿದ್ದ ವ್ಯಕ್ತಿ ಆಕೆಯ ಬಳಿ ಅನುಚಿತವಾಗಿ ನಡೆದುಕೊಳ್ಳಲು ಆರಂಭಿಸಿದ. ಮತ್ತೊಬ್ಬ ಆಕೆಯ ಕೈಹಿಡಿದು ಬೇರೆಡೆಗೆ ಒಯ್ಯುವ ಪ್ರಯತ್ನದಲ್ಲಿದ್ದ. ಆಕೆಯ ಚೀರಾಟ ಕೇಳಿ ಸಂಕೇತ್ ನೆರವಿಗೆ ಧಾವಿಸಿದ. ಆಕೆಯನ್ನು ಬಿಡಿಸುವಲ್ಲಿ ಯಶಸ್ವಿಯಾದರೂ, ಒಬ್ಬ ಸಂಕೇತ್ ಗೆ ಇಟ್ಟಿಗೆಯಿಂದ ಹೊಡೆದ. ಉಳಿದವರು ಬಿದಿರಿನ ಬಡಿಗೆಯಿಂದ ಹಲ್ಲೆ ನಡೆಸಿದರು ಎಂದು ಸಂಕೇತ್ ಸಹೋದರಿ ಮಹಿಮಾ ವಿವರಿಸಿದ್ದಾರೆ. ಯುವತಿ ಕೂಡಾ ಪ್ರಿಯತಮನನ್ನು ಬಿಟ್ಟುಬಿಡುವಂತೆ ಮೊರೆ ಹೋಗಿ ನೆರವಿಗಾಗಿ ಮನೆಗಳ ಬಾಗಿಲು ಬಡಿದರೂ ಯಾರೂ ನೆರವಿಗೆ ಬರಲಿಲ್ಲ.
ಎಸಿ ತಂತ್ರಜ್ಞನಾಗಿರುವ ಸಂಕೇತ್ ಗೌರಾಂಗ್ ನಗರದಲ್ಲಿ ಎರಡೂವರೆ ವರ್ಷದಿಂದ ಪ್ರಿಯತಮೆ ಜತೆ ವಾಸವಿದ್ದ. ಇವರ ವಿವಾಹಕ್ಕೆ ಕುಟುಂಬದವರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸದ್ಯದಲ್ಲೇ ವಿವಾಹವಾಗಲು ನಿರ್ಧರಿಸಿದ್ದರು ಎಂದು ಸಂಕೇತ್ ನ ಸಹೋದರಿ ವಿವರಿಸಿದ್ದಾರೆ.