×
Ad

ವಕ್ಫ್ ತಿದ್ದುಪಡಿ ಮಸೂದೆ ಕುರಿತು ಸುದೀರ್ಘ ಚರ್ಚೆಗೆ ಸಜ್ಜಾದ ಲೋಕಸಭೆ; ಸಂಖ್ಯಾಬಲ ಹೇಗಿದೆ?

Update: 2025-04-02 10:50 IST

Photo credit: PTI

ಹೊಸದಿಲ್ಲಿ: ಕಳೆದ ಕೆಲವು ವಾರಗಳಿಂದ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಇಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಲಿದ್ದು, ಈ ಕುರಿತ ಸುದೀರ್ಘ ಚರ್ಚೆಗೆ ಸಾಕ್ಷಿಯಾಗಲು ಲೋಕಸಭೆ ಸಜ್ಜಾಗಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.

ವಕ್ಫ್ ಆಸ್ತಿಗಳನ್ನು ನಿರ್ವಹಿಸುವ 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಈ ತಿದ್ದುಪಡಿಗಳು ಭಾರತದಲ್ಲಿನ ವಕ್ಫ್ ಆಸ್ತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಆದರೆ, ಈ ಕಾನೂನನ್ನು ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧ ಪಕ್ಷಗಳು ವಿರೋಧಿಸಿವೆ. ಮಸೂದೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಜಂಟಿ ಸದನ ಸಮಿತಿಯು ವಿರೋಧ ಪಕ್ಷಗಳ ಸಲಹೆಗಳನ್ನು ಪರಿಗಣಿಸಿಲ್ಲ ಎಂದು ಅವು ಆರೋಪಿಸಿವೆ. ಸರಕಾರವು ತರಾತುರಿಯಲ್ಲಿ ಮಸೂದೆ ಮಂಡಿಸುತ್ತಿದೆ ಎಂದೂ ಅವು ಆರೋಪಿಸಿವೆ.

ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳೂ ಮಸೂದೆಯನ್ನು ಸದನದಲ್ಲಿ ಮಂಡಿಸಿದಾಗ, ಸದನದಲ್ಲಿ ಹಾಜರಿರಬೇಕು ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಮ್ಮ ಸಂಸದರಿಗೆ ವಿಪ್ ಜಾರಿಗೊಳಿಸಿವೆ.

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಚರ್ಚಿಸಲು ಎಂಟು ಗಂಟೆಗಳ ಕಾಲಾವಕಾಶವನ್ನು ನಿಗದಿಗೊಳಿಸಲಾಗಿದೆ. ಈ ಅವಧಿಯನ್ನು ವಿಸ್ತರಿಸಲೂಬಹುದಾಗಿದೆ. ಒಂದು ವೇಳೆ ಈ ಮಸೂದೆಯೇನಾದರೂ ಲೋಕಸಭೆಯಲ್ಲಿ ಅಂಗೀಕಾರಗೊಂಡರೆ, ನಂತರ ಅದನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ.

ಸಂಸದರ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಆಡಳಿತಾರೂಢ ಎನ್‌ಡಿಎ ಮೇಲುಗೈ ಹೊಂದಿದೆ. ಬಿಜೆಪಿ 240 ಸಂಸದರನ್ನು ಹೊಂದಿದ್ದರೆ, ಅದರ ಮಿತ್ರಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯು ಕ್ರಮವಾಗಿ 16. ಮತ್ತು 12 ಮಂದಿ ಸಂಸದರನ್ನು ಹೊಂದಿವೆ. ಇನ್ನಿತರ ಮಿತ್ರಪಕ್ಷಗಳ ಸಂಸದರೂ ಸೇರಿ ಎನ್‌ಡಿಎ ಮೈತ್ರಿಕೂಟದ ಬಳಿ 295 ಸಂಸದರ ಸಂಖ್ಯಾಬಲವಿದೆ. ಹೀಗಾಗಿ, ಬಹುಮತಕ್ಕೆ ಅಗತ್ಯವಿರುವ 272 ಮತಗಳನ್ನು ಸುಲಭವಾಗಿ ದಾಟಲಿದೆ. ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಅದರ ಇನ್ನಿತರ ಮಿತ್ರಪಕ್ಷಗಳು ಒಟ್ಟು 234 ಮತಗಳನ್ನು ಹೊಂದಿವೆ.

ಬಿಜೆಪಿಯ ಪ್ರಮುಖ ಮಿತ್ರಪಕ್ಷಗಳಾದ ಟಿಡಿಪಿ ಹಡಗು ಜೆಡಿಯು ಪಕ್ಷಗಳು ಅಲ್ಪಸಂಖ್ಯಾತರ ಗಮನಾರ್ಹ ಬೆಂಬಲ ಹೊಂದಿವೆ. ಪ್ರಮುಖ ಅಲ್ಪಸಂಖ್ಯಾತ ಸಂಘಟನೆಗಳಿಂದ ಟೀಕೆಗೊಳಗಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನೇನಾದರೂ ಬೆಂಬಲಿಸಿದರೆ, ನೀವು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎನ್‌ಡಿಎ ಮಿತ್ರಪಕ್ಷಗಳ ಸಂಸದರಿಗೆ ವಿರೋಧ ಪಕ್ಷಗಳು ಎಚ್ಚರಿಸಿವೆ.

ಆದರೆ, ಮಸೂದೆಯನ್ನು ಬೆಂಬಲಿಸುತ್ತೇವೆ ಎಂದು ಘೋಷಿಸಿರುವ ಟಿಡಿಪಿ, ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ದೃಢವಾಗಿ ಮುಸ್ಲಿಮರೊಂದಿಗಿದ್ದಾರೆ ಎಂದು ಭರವಸೆ ನೀಡಿದೆ. ಈ ನಡುವೆ, ಪ್ರತಿಕೂಲ ಪರಿಣಾಮಗಳೊಂದಿಗೆ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಕೇಂದ್ರ ಸರಕಾರವನ್ನು ಜೆಡಿಯು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News