×
Ad

ಮಧ್ಯಪ್ರದೇಶ: ಟಿವಿ ಚಾನೆಲ್‌ ನಲ್ಲಿ ಚುನಾವಣೆ ಚರ್ಚೆ ವೇಳೆ ಬಿಜೆಪಿ ನಾಯಕನ ಮೇಲೆ ಹಲ್ಲೆ

Update: 2024-04-21 14:06 IST

ಸಾಂದರ್ಭಿಕ ಚಿತ್ರ

ಮಧ್ಯಪ್ರದೇಶದ ಟಿಕಮ್‌ಘರ್‌ನಲ್ಲಿ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಚುನಾವಣಾ ಚರ್ಚೆಯಲ್ಲಿ ಇಬ್ಬರು ವ್ಯಕ್ತಿಗಳು ಸ್ಥಳೀಯ ಬಿಜೆಪಿ ನಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ನಜರ್‌ಬಾಗ್‌ನ ಮೈದಾನದಲ್ಲಿ ಶನಿವಾರ ರಾತ್ರಿ ಸುದ್ದಿ ವಾಹಿನಿಯೊಂದು ಚರ್ಚೆಯನ್ನು ಆಯೋಜಿಸಿದ್ದ ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದರು.

ಆರೋಪಿಗಳಾದ ಹಿಮಾಂಶು ತಿವಾರಿ ಮತ್ತು ಬಾಬರ್ ಅವರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಆನಂದ್ ರಾಜ್ ಹೇಳಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಜಿಲ್ಲಾ ಮಾಧ್ಯಮ ಘಟಕದ ಉಸ್ತುವಾರಿ ಪ್ರಫುಲ್ ದ್ವಿವೇದಿ, ಯುವಕರೊಂದಿಗೆ ವಾಗ್ವಾದಕ್ಕೆ ತೊಡಗಿದ್ದು, ಈ ವೇಳೆ ಇಬ್ಬರೂ ಅವರ ಮೇಲೆ ಕುರ್ಚಿ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ದ್ವಿವೇದಿ ಅವರನ್ನು ರಕ್ಷಿಸಲು ಕೆಲವು ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿದ್ದು, ಇದು ಜಗಳಕ್ಕೆ ಕಾರಣವಾಯಿತು ಎಂದು ಅಧಿಕಾರಿ ಹೇಳಿದರು. ದ್ವಿವೇದಿ ಅವರ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಾಬರ್ ನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ತಿವಾರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನವೀನ್ ಸಾಹು ಸ್ಪಷ್ಟಪಡಿಸಿದ್ದು, ಅವರು ಪ್ರೇಕ್ಷಕರಂತೆ ಹಾಜರಾಗಿದ್ದರು ಎಂದು ಅವರು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಸುದ್ದಿ ವಾಹಿನಿಗಳು ಆಯೋಜಿಸಿದ್ದ ಚುನಾವಣಾ ಚರ್ಚೆಯಲ್ಲಿ ಇದು ಎರಡನೇ ಘಟನೆಯಾಗಿದೆ.

ಇದಕ್ಕೂ ಮುನ್ನ ಏಪ್ರಿಲ್ 13 ರಂದು, ಜಬಲ್‌ಪುರದ ಸಾರ್ವಜನಿಕ ಉದ್ಯಾನವನದಲ್ಲಿ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಚರ್ಚೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಮತ್ತು ಮುಖಂಡರು ಪರಸ್ಪರ ದೊಣ್ಣೆ ಮತ್ತು ಪ್ಲಾಸ್ಟಿಕ್ ಕುರ್ಚಿಗಳಿಂದ ಹಲ್ಲೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News