ಮತ ಪತ್ರಗಳ ಮೂಲಕ ಚುನಾವಣೆ ನಡೆದರೆ ಬಿಎಸ್ಪಿಯ ಗತವೈಭವ ಮರುಕಳಿಸಲಿದೆ: ಮಾಯಾವತಿ
ಮಾಯಾವತಿ | PTI
ಲಕ್ನೋ: ಇವಿಎಂ ಬದಲು ಮತ ಪತ್ರಗಳ ಮೂಲಕ ಚುನಾವಣೆ ನಡೆದರೆ, ಪಕ್ಷದ ಗತ ವೈಭವ ಮರುಕಳಿಸಲಿದೆ ಎಂದು ಬಿಸ್ಪಿಯ ವರಿಷ್ಠೆ ಮಾಯಾವತಿ ಗುರುವಾರ ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಚುನಾವಣೆಗಳನ್ನು ಮತ ಪತ್ರಗಳ ಮೂಲಕ ನಡೆಸುವ ತನ್ನ ಬೇಡಿಕೆಯನ್ನು ಮರು ಉಚ್ಚರಿಸಿದರು. ಅಲ್ಲದೆ, ಬಿಎಸ್ಪಿ ಅಭ್ಯರ್ಥಿಗಳು ಜಯ ಗಳಿಸುವುದನ್ನು ತಡೆಯಲು ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದರು.
ಅಧಿಕಾರದಲ್ಲಿರುವ ಹಾಗೂ ಪ್ರತಿಪಕ್ಷದಲ್ಲಿರುವ ಜಾತಿವಾದಿ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳು ದಲಿತ ಹಾಗೂ ಇತರ ಅಂಚಿನಲ್ಲಿರುವ ಸಮುದಾಯಗಳ ನಿರ್ದಿಷ್ಟ ಅವಕಾಶವಾದಿ ಹಾಗೂ ಸ್ವಾರ್ಥಿಗಳನ್ನು ತೆರೆ ಮರೆಯಲ್ಲಿ ನಿಯಂತ್ರಿಸುತ್ತಿವೆ. ಈ ವ್ಯಕ್ತಿಗಳನ್ನು ಬಳಸಿಕೊಂಡು ವಿವಿಧ ಸಂಘಟನೆ, ಪಕ್ಷಗಳನ್ನು ರೂಪಿಸಲಾಗುತ್ತಿದೆ. ಇವು ನಮ್ಮ ಬೆಂಬಲದ ನೆಲೆಯನ್ನು ದಾರಿ ತಪ್ಪಿಸುತ್ತಿವೆ ಹಾಗೂ ಬಿಎಸ್ಪಿಯ ಭದ್ರ ಕೋಟೆಯಾಗಿರುವ ವಿಶೇಷವಾಗಿ ಉತ್ತರಪ್ರದೇಶದಲ್ಲಿ ಮತಗಳನ್ನು ವಿಭಜಿಸುತ್ತಿದೆ ಎಂದು ಅವರು ತಿಳಿಸಿದರು.
ರಾಷ್ಟ್ರ ರಾಜಕಾರಣದಲ್ಲಿ ಬಿಎಸ್ಪಿಯ ಉಪಸ್ಥಿತಿಯನ್ನು ಕನಿಷ್ಠ ಮಟ್ಟದಲ್ಲಿ ಉಳಿಯುವಂತೆ ಮಾಡಲು ಎದುರಾಳಿ ರಾಜಕೀಯ ಪಕ್ಷಗಳು ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಮಾಯಾವತಿ ಹೇಳಿದರು.
ಈ ಪಕ್ಷಗಳು ಅವಕಾಶವಾದಿ ಸಂಘಟನೆಗಳನ್ನು ಸೃಷ್ಟಿಸುತ್ತಿರುವುದು ಹಾಗೂ ಪೋಷಿಸುತ್ತಿರುವುದು ಮಾತ್ರವಲ್ಲದೆ, ತಮ್ಮ ಕೆಲವು ಅಭ್ಯರ್ಥಿಗಳನ್ನು ಗೆಲ್ಲಿಸಲು ಚುನಾವಣೆಯಲ್ಲಿ ಅವರ ಮತಗಳನ್ನು ಅಭ್ಯರ್ಥಿಗಳಿಗೆ ವರ್ಗಾಯಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಬಿಎಸ್ಪಿ ಅಭ್ಯರ್ಥಿಗಳನ್ನು ಸೋಲಿಸಲು ಇವಿಎಂ ಅನ್ನು ತಿರುಚಲಾಗುತ್ತಿದೆ. ಇದು ಬಿಎಸ್ಪಿಯಲ್ಲಿರುವ ದಲಿತರು ಹಾಗೂ ಅಂಚಿನಲ್ಲಿರುವ ಮತದಾರರ ನಂಬಿಕೆಯನ್ನು ಮುರಿಯುವ ಪ್ರಯತ್ನವಾಗಿದೆ ಎಂದು ಮಾಯಾವತಿ ಆರೋಪಿಸಿದರು.