ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ; ಕೇಜ್ರಿವಾಲ್ ವಿರುದ್ಧ ಜಾರಿಗೊಳಿಸಿದ ಸಮನ್ಸ್ ರದ್ದು
ಅರವಿಂದ ಕೇಜ್ರಿವಾಲ್ | Photo: PTI
ಪಣಜಿ : ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಮ್ಯಾಜಿಸ್ಟ್ರೇಟ್ ಜಾರಿ ಮಾಡಿದ್ದ ಸಮನ್ಸ್ ಅನ್ನು ಬಾಂಬೆ ಉಚ್ಚ ನ್ಯಾಯಾಲಯದ ಗೋವಾ ಪೀಠ ಮಂಗಳವಾರ ರದ್ದುಗೊಳಿಸಿದೆ.
2017ರ ಗೋವಾ ವಿಧಾನ ಸಭೆ ಚುನಾವಣೆ ಸಂದರ್ಭ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ದಾಖಲಿಸಿದ ದೂರಿನ ಕುರಿತು ಜಾರಿಗೊಳಿಸಲಾದ ಸಮನ್ಸ್ ಅನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ ಎಂದು ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಮುಖ್ಯಸ್ಥ ಅಮಿತ್ ಪಾಲೇಕರ್ ತಿಳಿಸಿದ್ದಾರೆ.
ಪ್ರಜಾ ಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದಾಖಲಿಸಲಾಗಿದ್ದ ಆರೋಪ ಪಟ್ಟಿಗೆ ಸಂಬಂಧಿಸಿ ಅರವಿಂದ ಕೇಜ್ರಿವಾಲ್ ಅವರಿಗೆ ಜೆಎಫ್ಎಂಸಿ ಮಫುಸಾ ಸಮನ್ಸ್ ಜಾರಿಗೊಳಿಸಿತ್ತು.
‘‘ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರ ವಕೀಲರು ಕಳೆದ ವರ್ಷ ಜೆಎಂಎಫ್ಸಿ ಮುಂದೆ ಹಾಜರಾಗಿದ್ದರು ಹಾಗೂ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಸಮಯಾವಕಾಶ ನೀಡುವಂತೆ ಕೋರಿದ್ದರು’’ ಎಂದು ನ್ಯಾಯವಾದಿಯೂ ಆಗಿರುವ ಪಾಲೇಕರ್ ತಿಳಿಸಿದ್ದಾರೆ.