ಒಡಿಶಾ: ನೆರೆ ಭೀತಿ; ಮಹಿಳೆ ಸಾವು, 6,000ಕ್ಕೂ ಅಧಿಕ ಜನರ ಸ್ಥಳಾಂತರ
Photo : PTI
ಭುವನೇಶ್ವರ: ಒಡಿಶಾದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಅಪಾಯದ ಭೀತಿ ಉಂಟಾಗಿದ್ದು, ಒಡಿಶಾ ಸರಕಾರ 6 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಿದೆ. ಅಲ್ಲದೆ, 106 ರಕ್ಷಣಾ ತಂಡಗಳನ್ನು ವಿವಿಧ ಜಿಲ್ಲೆಗಳಿಗೆ ಕಳುಹಿಸಿಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ತಂಡಗಳಲ್ಲಿ ಎನ್ಡಿಆರ್ಎಫ್ನ 8 ತಂಡಗಳು, ಒಡಿಆರ್ಎಎಫ್ನ 13 ತಂಡಗಳು ಹಾಗೂ ಅಗ್ನಿ ಶಾಮಕ ದಳದ 85 ತಂಡಗಳು ಒಳಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
‘‘ತಗ್ಗು ಪ್ರದೇಶಗಳಿಂದ 6,834ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಅವರಿಗಾಗಿ 136 ಉಚಿತ ಅಡುಗೆ ಕೋಣೆಗಳನ್ನು ಆರಂಭಿಸಲಾಗಿದೆ’’ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್ಆರ್ಸಿ) ಸತ್ಯವ್ರತ ಸಾಹು ಹೇಳಿದ್ದಾರೆ.
‘‘ಮಹಾನದಿಯ ಮುಂಡಾಲಿ ಅಣೆಕಟ್ಟಿನಿಂದ ಗುರುವಾರ 9.2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಪುರಿ, ಖುರ್ದಾ, ಜಗತ್ಸಿಂಗ್ಪುರ ಹಾಗೂ ಕೇಂದ್ರಪಾರಾ ಜಲಾವೃತವಾಗಿವೆ’’ ಎಂದು ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಭಕ್ತರಂಜನ್ ಮೊಹಾಂತಿ ತಿಳಿಸಿದ್ದಾರೆ.
ಕಾಲಹಂದಿಯಲ್ಲಿ ಬುಧವಾರ ಗೋಡೆ ಕುಸಿದು ಸಂಭವಿಸಿದ ದುರಂತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ 6 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.