ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ : ಪುಲ್ವಾಮಾದಲ್ಲಿ ಭದ್ರತಾ ಪಡೆಗಳಿಂದ ಶಂಕಿತನ ಮನೆ ನೆಲಸಮ
Update: 2025-11-14 09:21 IST
Photo credit: indiatoday.in
ಹೊಸದಿಲ್ಲಿ: ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪುಲ್ವಮಾದಲ್ಲಿ ಪ್ರಮುಖ ಶಂಕಿತ ಡಾ. ಉಮರ್ ಉನ್ ನಬಿ ನಿವಾಸವನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿದ್ದಾರೆ.
ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ 13 ಜನರು ಮೃತಪಟ್ಟಿದ್ದರು. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಕುರಿತ ತನಿಖೆಯ ಭಾಗವಾಗಿ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ ಡಾ. ಉಮರ್ ಮನೆಯನ್ನು ಧ್ವಂಸ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ್ಕೆ ಬಳಸಿದ ಹುಂಡೈ i20 ಕಾರು ಕಾಶ್ಮೀರದ ವೈದ್ಯ ಡಾ. ಉಮರ್ಗೆ ಸಂಬಂಧಿಸಿದ್ದಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ದಾಳಿಯಲ್ಲಿ ಉಮರ್ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶೋಧ ಕಾರ್ಯಾಚರಣೆಗಳನ್ನು ನಡೆಸಿ ಡಾ. ಉಮರ್ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಆರು ಜನರನ್ನು ಈಗಾಗಲೇ ಬಂಧಿಸಿದ್ದಾರೆ.