ವಿಧವೆ ಸೊಸೆ ಮಾವನ ಆಸ್ತಿಯಿಂದ ಜೀವನಾಂಶ ಪಡೆಯಲು ಅರ್ಹಳು: ಮನುಸ್ಮೃತಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ತೀರ್ಪು
Photo credit: PTI
ಹೊಸದಿಲ್ಲಿ: ವಿಧವೆಯಾದ ಹಿಂದೂ ಸೊಸೆಯು ತನ್ನ ಮಾವನ ಆಸ್ತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ ಎಂದು ಮನುಸ್ಮೃತಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಪತಿ ಮಾವನ ಜೀವಿತಾವಧಿಯಲ್ಲಿ ಮೃತಪಟ್ಟಿದ್ದಾರೆಯೇ ಅಥವಾ ನಂತರ ಮೃತಪಟ್ಟಿದ್ದಾರೆಯೇ ಎಂಬುದನ್ನು ಲೆಕ್ಕಿಸದೆ ಈ ಹಕ್ಕು ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಎಸ್.ವಿ.ಎನ್.ಭಟ್ಟಿ ಅವರ ಪೀಠವು, ಇಂತಹ ಹಕ್ಕು ವಿಧವೆಯಾದ ಹಿಂದೂ ಸೊಸೆಗೆ ಕೇವಲ ಕಾನೂನು ಕಾಯ್ದೆಯಡಿ ಮಾತ್ರವಲ್ಲದೆ ಸಂವಿಧಾನದಡಿ ಹಾಗೂ ಪ್ರಾಚೀನ ಮನಸ್ಮೃತಿಯಲ್ಲೂ ಅಡಕವಾಗಿದೆ ಎಂದು ತಿಳಿಸಿದೆ.
ಡಾ.ಮಹೇಂದ್ರ ಪ್ರಸಾದ್ ಅವರ ವಿಧವೆ ಸೊಸೆ ಗೀತಾ ಶರ್ಮಾ ಅವರು ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸುವಂತೆ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಅವರ ಸಂಬಂಧಿಕರಾದ ಕಾಂಚನಾ ರೈ ಮತ್ತು ಉಮಾ ದೇವಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.