ಭೂ ಕಬಳಿಕೆ ಪ್ರಕರಣ: ಸಂದೇಶಖಾಲಿಯ ಹಲವೆಡೆ ಈಡಿ ದಾಳಿ
Update: 2024-03-14 23:13 IST
Photo : PTI
ಕೋಲ್ಕತಾ : ಬಂಧನದಲ್ಲಿರುವ ಉಚ್ಚಾಟಿತ ಟಿಎಂಸಿ ನಾಯಕ ಶಾಹಜಹಾನ್ ಶೇಖ್ ವಿರುದ್ಧದ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ)ವು ಗುರುವಾರ ಪಶ್ಚಿಮ ಬಂಗಾಳದ ಸಂದೇಶಖಾಲಿಯ ಹಲವೆಡೆಗಳಲ್ಲಿ ದಾಳಿಗಳನ್ನು ನಡೆಸಿದೆ. ಪ್ರಕರಣದೊಂದಿಗೆ ನಂಟು ಹೊಂದಿರುವ ಶಂಕಿತ ವ್ಯಕ್ತಿಗಳ ನಿವಾಸಗಳೂ ದಾಳಿ ನಡೆದ ಸ್ಥಳಗಳಲ್ಲಿ ಸೇರಿವೆ.
ಸಂದೇಶಖಾಲಿ ಗ್ರಾಮದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮತ್ತು ಭೂ ಕಬಳಿಕೆ ಆರೋಪಗಳನ್ನು ಹೊತ್ತಿರುವ ಶೇಖ್ನನ್ನು ಫೆ.29ರಂದು ಪಶ್ಚಿಮ ಬಂಗಾಳ ಪೋಲಿಸರು ಮಿನಾಖಾನ್ ನಲ್ಲಿಯ ಮನೆಯೊಂದರಿಂದ ಬಂಧಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.23ರಂದು ಈಡಿ ಪಶ್ಚಿಮ ಬಂಗಾಳದಲ್ಲಿಯ ಐದಾರು ಸ್ಥಳಗಳಲ್ಲಿ ದಾಳಿ ನಡೆಸಿತ್ತು.
ಶೇಖ್ ವಿರುದ್ಧದ ಪ್ರತ್ಯೇಕ ಪಡಿತರ ವಿತರಣೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಈಡಿ ಜನವರಿಯಲ್ಲಿ ಹಲವು ಕಡೆಗಳಲ್ಲಿ ದಾಳಿಗಳನ್ನು ನಡೆಸಿತ್ತು.