Madhya Pradesh| ಕಲುಷಿತ ನೀರು ಕುಡಿದು ಮೂವರು ಮೃತ್ಯು; 100ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
Photo| newindianexpress
ಇಂದೋರ್: ಕಲುಷಿತ ನೀರು ಕುಡಿದು ಮೂವರು ಮೃತಪಟ್ಟು, 100ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಭಗೀರಥ್ ಪುರ ಪ್ರದೇಶದಲ್ಲಿ ನಡೆದಿದೆ ಎಂದು ನಗರದ ಮೇಯರ್ ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಕಲುಷಿತ ನೀರು ಸೇವಿಸಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಡಿಸೆಂಬರ್ 25ರಂದು ಭಗೀರಥ್ ಪುರ ಪ್ರದೇಶದಲ್ಲಿ ಸರಬರಾಜು ಮಾಡಲಾಗಿದ್ದ ನೀರು ಕೆಟ್ಟದಾಗಿ ವಾಸನೆ ಬರುತ್ತಿತ್ತು. ಅದನ್ನು ಸೇವಿಸಿದ ನಂತರ ಗ್ರಾಮಸ್ಥರು ಅಸ್ವಸ್ಥಗೊಂಡರು ಎಂದು ಸ್ಥಳೀಯ ಕೌನ್ಸಿಲರ್ ಹೇಳಿದ್ದಾರೆ.
ಭಾಗೀರಥಪುರದ ಒಂದು ಸ್ಥಳದಲ್ಲಿ ಮುಖ್ಯ ನೀರು ಸರಬರಾಜು ಪೈಪ್ಲೈನ್ನಲ್ಲಿ ಸೋರಿಕೆಯಾಗುತ್ತಿರುವುದು ಮತ್ತು ಪೈಪ್ಲೈನ್ ಸಮೀಪ ಶೌಚಾಲಯ ನಿರ್ಮಿಸಿರುವುದು ಕಂಡುಬಂದಿದೆ ಎಂದು ಪುರಸಭೆ ಆಯುಕ್ತ ದಿಲೀಪ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ವಿತರಿಸಲಾಗುವುದು ಹಾಗೂ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ವೈದ್ಯಕೀಯ ವೆಚ್ಚ ಭರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.