×
Ad

ತಾಜ್‌ಮಹಲ್‌ನಲ್ಲಿ ಗಂಗಾಜಲ ಸುರಿದ ಇಬ್ಬರ ಬಂಧನ

Update: 2024-08-03 21:13 IST

PC : X \ @ygauravyadav

ಹೊಸದಿಲ್ಲಿ: ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ತಾಜ್‌ಮಹಲ್‌ನಲ್ಲಿ ಗಂಗಾಜಲವನ್ನು ಸುರಿದ ಕೇಸರಿ ಸಂಘಟನೆಯೊಂದರ ಇಬ್ಬರು ವ್ಯಕ್ತಿಗಳನ್ನು ಶನಿವಾರ ಬಂಧಿಸಿದ್ದಾರೆ. ತಾಜ್‌ಮಹಲ್ ‘ ತೇಜೋಮಹಾಲಯ’ ಎಂಬ ‘ಶಿವದೇಗುಲ’ ವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ ಪ್ಲಾಸ್ಟಿಕ್ ಬಾಟಲಿಗಳಿಂದ ಗಂಗಾಜಲವನ್ನು ಅಭಿಷೇಕ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಆರೋಪಿಗಳಲ್ಲೊಬ್ಬಾತ ತಾಜ್‌ಮಹಲ್‌ನ ತಳಅಂತಸ್ತಿಗೆ ತೆರಳುವ ಮುಚ್ಚುಗಡೆಗೊಂಡ ಮೆಟ್ಟಲುಗಳಿಗೆ ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ಸುರಿಯುತ್ತಿರುವ ವೀಡಿಯೊ ಕ್ಲಿಪ್ಪಿಂಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸ್ಥಳದಲ್ಲಿ ಶಾಹಜಹಾನ್ ಹಾಗೂ ಮುಮ್ತಾಝ್‌ಮಹಲ್ ಅವರ ಮೂಲ ಸಮಾಧಿಗಳಿವೆ. ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತಾವು ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯರೆಂದು ಬಂಧಿತರು ಹೇಳಿಕೊಂಡಿದ್ದಾರೆ.

ತಾಜ್‌ಮಹಲ್ ಆವರಣದ ಸುರಕ್ಷತೆಯನ್ನು ನೋಡಿಕೊಳ್ಳುತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತಾಪಡೆಯ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಬ್ಬರು ಪ್ರವಾಸಿಗಳ ಸೋಗಿನಲ್ಲಿ ಟಿಕೆಟ್ ಖರೀದಿಸಿ ತಾಜ್‌ಮಹಲ್ ಪ್ರವೇಶಿಸಿದ್ದರು.

ಆರೋಪಿಗಳನ್ನು ಪ್ರಸಕ್ತ ತಾಜ್‌ಗಂಜ್ ಪೊಲೀಸ್‌ಠಾಣೆಯಲ್ಲಿಡಲಾಗಿದ್ದು, ತನಿಖೆ ನಡೆಯುತ್ತಿರುವುದಾಗಿ ಆಗ್ರಾ ನಗರದ ಉಪ ಪೊಲೀಸ್ ಉಪಆಯುಕ್ತ ಸೂರಜ್ ರಾಯ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News