"ಜೈಲೇ ಈಗ ನನ್ನ ಜೀವನ": ಜಾಮೀನು ನಿರಾಕರಣೆ ಬಳಿಕ ಉಮರ್ ಖಾಲಿದ್ ಪ್ರತಿಕ್ರಿಯೆ
“ಇತರರಿಗೆ ಜಾಮೀನು ಸಿಕ್ಕಿರುವುದರಿಂದ ಸಂತೋಷವಾಗಿದೆ”
ಉಮರ್ ಖಾಲಿದ್ | Photo: PTI
ಹೊಸದಿಲ್ಲಿ: “ನನಗೆ ಜಾಮೀನು ಸಿಗದಿದ್ದರೂ, ನನ್ನೊಂದಿಗೆ ಜಾಮೀನು ಪಡೆದ ಇತರರಿಗೆ ಜಾಮೀನು ಸಿಕ್ಕಿರುವುದು ಸಂತೋಷ ತಂದಿದೆ” ಎಂದು ದಿಲ್ಲಿ ಗಲಭೆಗೆ ಸಂಬಂಧಿಸಿದ ಸಂಚು ಪ್ರಕರಣದಲ್ಲಿ ಬಂಧಿತ ಉಮರ್ ಖಾಲಿದ್ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೆ ಪ್ರತಿಕ್ರಿಯಿಸಿದ್ದಾರೆ.
ದಿಲ್ಲಿ ಗಲಭೆಗೆ ಸಂಚು ಪ್ರಕರಣದಲ್ಲಿ ಬಂಧಿತ ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ಗೆ ಜಾಮೀನು ನೀಡಲು ಸೋಮವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಯುಎಪಿಎಯಡಿ ಬಂಧಿತ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಉಮರ್ ಹೇಳಿಕೆ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬನೊಜ್ಯೋತ್ಸ್ನಾ ಎಂಬವರು, 'ಉಮರ್ ಅವರು, ಜೈಲೇ ಈಗ ನನ್ನ ಜೀವನ. ಇತರರಿಗೆ ಜಾಮೀನು ದೊರಕಿರುವುದು ಸಮಾಧಾನ ತಂದಿದೆ. ನಾನು ಬಹಳ ನಿರಾಳನಾಗಿದ್ದೇನೆ” ಎಂದು ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.