ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾಗುವುದಿಲ್ಲ : ಮುಸ್ಲಿಮರಿಗೆ ಮಮತಾ ಬ್ಯಾನರ್ಜಿ ಭರವಸೆ
Update: 2025-04-09 13:17 IST
ಮಮತಾ ಬ್ಯಾನರ್ಜಿ (PTI)
ಕೋಲ್ಕತ್ತಾ : ವಕ್ಫ್ ಕಾನೂನಿನ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಿಮ್ಮ ಆಸ್ತಿಯನ್ನು ರಕ್ಷಿಸಲು ಬದ್ಧಳಾಗಿದ್ದೇನೆ. ತಿದ್ದುಪಡಿ ಮಾಡಿರುವ ವಕ್ಫ್ ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮುಸ್ಲಿಂ ಸಮುದಾಯಕ್ಕೆ ಭರವಸೆ ನೀಡಿದರು.
ಜೈನ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಂಗಾಳದಲ್ಲಿರುವ ಮುಸ್ಲಿಮರು ಆತಂಕಪಡುವ ಅಗತ್ಯವಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆಯಿಂದ ನಿಮಗೆ ನೋವಾಗಿದೆ ಎಂದು ನನಗೆ ತಿಳಿದಿದೆ. ಒಡೆದು ಆಳುವಂತದ್ದೇನೂ ಬಂಗಾಳದಲ್ಲಿ ನಡೆಯುವುದಿಲ್ಲ. ಇಲ್ಲಿ ಶೇಕಡಾ 33ರಷ್ಟು ಮುಸ್ಲಿಮರಿದ್ದಾರೆ. ಅವರು ಶತಮಾನಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ನಾನು ಏನು ಮಾಡಬೇಕು ಅವರನ್ನು ಹೊರಹಾಕಬೇಕಾ? ಅವರನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂದು ಹೇಳಿದರು.