ವಯನಾಡ್ ದುರಂತ | ಬದುಕುಳಿದವರಿಗೆ ಮಾನಸಿಕ-ಸಾಮಾಜಿಕ ಬೆಂಬಲ ನೀಡಲು 121 ಸದಸ್ಯರ ಮಾನಸಿಕ ಆರೋಗ್ಯ ತಂಡ
ಆರೋಗ್ಯ ಸಚಿವೆ ವೀಣಾ ಜಾರ್ಜ್ |PC : minister-health.kerala.gov.in
ತಿರುವನಂತಪುರ : ವಯನಾಡ್ ನ ದುರಂತದಲ್ಲಿ ಬದುಕುಳಿದವರಿಗೆ ಮಾನಸಿಕ ಬೆಂಬಲ ನೀಡಲು ಮಾನಸಿಕ ಆರೋಗ್ಯ ವಿಪತ್ತು ನಿರ್ವಹಣಾ ತಂಡವನ್ನು ರೂಪಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ತಿಳಿಸಿದ್ದಾರೆ.
ಮನೋರೋಗ ತಜ್ಞರು, ಕ್ಲಿನಿಕಲ್ ಮನಶಾಸ್ತ್ರಜ್ಞರು, ಮನೋರೋಗ ಸಾಮಾಜಿಕ ಕಾರ್ಯಕರ್ತರು ಹಾಗೂ ಸಮಾಲೋಚಕರ 121 ಸದಸ್ಯರ ತಂಡವನ್ನು ಮಂಗಳವಾರವೇ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ನೀಡಿದ ಗುರುತು ಪತ್ರವನ್ನು ಹೊಂದಿರುವ ವಿಶೇಷ ತಂಡದ ಸದಸ್ಯರಿಗೆ ಮಾತ್ರ ಪರಿಹಾರ ಕೇಂದ್ರಗಳಲ್ಲಿರುವ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಬದುಕುಳಿದವರಿಗೆ ಮಾನಸಿಕ ಆರೋಗ್ಯದ ಬೆಂಬಲ ನೀಡಲು ಅವಕಾಶ ಒದಗಿಸಲಾಗಿದೆ. ಎಲ್ಲಾ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಈ ತಂಡ ಹೆಲ್ಪ್ ಡೆಸ್ಕ್ ಅನ್ನು ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
‘‘ಬದುಕುಳಿದವರ ಕಳವಳವನ್ನು ಮಾನಸಿಕ ಆರೋಗ್ಯ ಕಾರ್ಯಕರ್ತರು ಆಲಿಸಲಿದ್ದಾರೆ ಹಾಗೂ ಅವರಿಗೆ ಸಾಂತ್ವನ ನೀಡಲಿದ್ದಾರೆ. ಈ ತಂಡ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರಿಗೆ ಆದ್ಯತೆ ನೀಡಲಿದೆ’’ ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಪತ್ತಿನಿಂದ ಉಂಟಾದ ಖಿನ್ನತೆ ಹಾಗೂ ಆತಂಕದಿಂದ ಗುಣಮುಖರಾಗಲು ದೀರ್ಘಾವಧಿ ಗಮನ ನೀಡಬೇಕಾಗಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.