ಕಾರ್ಗಿಲ್ ಬಳಿಕ ವಾಜಪೇಯಿ ಮಾಡಿದ್ದನ್ನೇ ಪಹಲ್ಗಾಮ್ ಬಳಿಕ ಮೋದಿ ಸರಕಾರ ಮಾಡುತ್ತಾ?: ಕಾಂಗ್ರೆಸ್ ಪ್ರಶ್ನೆ
ಜೈರಾಮ್ ರಮೇಶ್ (Photo: PTI)
ಹೊಸದಿಲ್ಲಿ : ಕಾರ್ಗಿಲ್ ಯುದ್ಧ ಮುಗಿದ ಮೂರು ದಿನಗಳ ನಂತರ ವಾಜಪೇಯಿ ಸರಕಾರ ತೆಗೆದುಕೊಂಡ ಅದೇ ನಡೆಯನ್ನು ಮೋದಿ ಸರಕಾರ ಈಗ ಅನುಸರಿಸುತ್ತಾ ಎಂದು ಭಾರತ-ಪಾಕ್ ನಡುವಿನ ಉದ್ವಿಗ್ನತೆ ಮತ್ತು ಅಮೆರಿಕದ ಹೇಳಿಕೆಗಳ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಅಮೆರಿಕದ ಹೇಳಿಕೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂಬ ತನ್ನ ಬೇಡಿಕೆ ಇನ್ನಷ್ಟು ತುರ್ತು ಮತ್ತು ಪ್ರಾಮುಖ್ಯತೆಯಿಂದ ಕೂಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಕಾರ್ಗಿಲ್ ಯುದ್ಧ ಮುಗಿದ ಮೂರು ದಿನಗಳ ನಂತರ ವಾಜಪೇಯಿ ಸರಕಾರ 1999ರ ಜುಲೈ 29ರಂದು ಕಾರ್ಗಿಲ್ ಪರಿಶೀಲನಾ ಸಮಿತಿಯನ್ನು ರಚಿಸಿತು. ಅದರ ವರದಿಯನ್ನು ಫೆಬ್ರವರಿ 23, 2000ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸಮಿತಿಯ ಅಧ್ಯಕ್ಷತೆಯನ್ನು ಭಾರತದ ಕಾರ್ಯತಂತ್ರದ ವ್ಯವಹಾರಗಳ ಗುರು ಕೆ. ಸುಬ್ರಹ್ಮಣ್ಯಂ ವಹಿಸಿದ್ದರು. ಅವರ ಪುತ್ರ ಈಗ ಭಾರತದ ವಿದೇಶಾಂಗ ಸಚಿವರಾಗಿದ್ದಾರೆ. NIA ತನಿಖೆಯ ಹೊರತಾಗಿ ಮೋದಿ ಸರಕಾರ ಈಗ ಪಹಲ್ಗಾಮ್ನಲ್ಲಿ ಇದೇ ರೀತಿಯ ಕಾರ್ಯತಂತ್ರವನ್ನು ನಡೆಸುತ್ತಾ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಅಮೆರಿಕದ ಹೇಳಿಕೆಗಳನ್ನು ಗಮನಿಸಿದರೆ ಪ್ರಧಾನಿ ಸರ್ವಪಕ್ಷ ಸಭೆಯನ್ನು ಕರೆಯಬೇಕು. ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಕಾಂಗ್ರೆಸ್ ನ ಪುನರಾವರ್ತಿತ ಬೇಡಿಕೆಗಳು ಇನ್ನೂ ಹೆಚ್ಚಿನ ತುರ್ತು ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.
ʼಆಪರೇಷನ್ ಸಿಂಧೂರʼ ಕುರಿತು ನಿನ್ನೆ ಪ್ರಧಾನಿ ಮೋದಿ ಮಾಡಿದ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, ಕಾಂಗ್ರೆಸ್ ಆರಂಭದಿಂದಲೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಬೆಂಬಲಿಸುತ್ತಿದೆ. ಆದರೆ ಪ್ರಧಾನಿ ಭಾಷಣಕ್ಕೂ ಮುನ್ನ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿರುವುದಾಗಿ ಘೋಷಿಸಿದರು. ಪ್ರಧಾನಿ ಈ ಬಗ್ಗೆ ಏನನ್ನೂ ಹೇಳಲಿಲ್ಲ. ಪ್ರಧಾನಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಆದರೆ ಅವರು ಮೌನವಾಗಿದ್ದರು. ಪ್ರಧಾನಿ ಸರ್ವಪಕ್ಷ ಸಭೆ ಕರೆಯಬೇಕೆಂದು ನಾವು ಬಯಸುತ್ತೇವೆ. ಟ್ರಂಪ್ ಎಲ್ಲಾ ಘೋಷಣೆಗಳನ್ನು ಏಕೆ ಮಾಡುತ್ತಿದ್ದಾರೆ? ಭಾರತ ಮತ್ತು ಅಮೆರಿಕ ವ್ಯಾಪಾರಕ್ಕೂ, ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸುವುದಕ್ಕೂ ಏನು ಸಂಬಂಧವಿದೆ? ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಪ್ರಧಾನಿ ಎಲ್ಲರೂ ಈಗ ಮೌನವಾಗಿದ್ದಾರೆ ಎಂದು ಹೇಳಿದರು.
Three days after the Kargil War ended, the Vajpayee Govt set up the Kargil Review Committee on July 29 1999. Its report was tabled in Parliament on Feb 23, 2000 athough sections of it have remained classified - as indeed they must.
— Jairam Ramesh (@Jairam_Ramesh) May 13, 2025
The Committee was chaired by India's…