“ನಮಗೆ 15 ಸೆಕೆಂಡ್‌ ಸಾಕು”: ವಿವಾದ ಸೃಷ್ಟಿಸಿದ ಬಿಜೆಪಿ ನಾಯಕಿ ನವನೀತ್‌ ರಾಣಾ ಹೇಳಿಕೆ

Update: 2024-05-09 10:49 GMT

ನವನೀತ್‌ ರಾಣಾ (Screengrab:X/@navneetravirana)

ಹೊಸದಿಲ್ಲಿ:ಎಐಎಂಐಎಂ ನಾಯಕ ಅಕ್ಬರುದ್ದೀನ್‌ ಉವೈಸಿ ಅವರು 11 ವರ್ಷಗಳ ಹಿಂದೆ “15 ನಿಮಿಷಗಳ ಕಾಲ ಪೊಲೀಸರನ್ನು ತೆಗೆದುಹಾಕಿದರೆ…ʼʼ ಎಂಬ ವಿವದಾತ್ಮಕ ಹೇಳಿಕೆ ನೀಡಿ ಹಿಂದೂಗಳಿಗೆ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಲಾಗಿದ್ದರೆ, ಹೈದರಾಬಾದ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಪರ ಪ್ರಚಾರ ನಡೆಸಿದ ನವನೀತ್‌ ರಾಣಾ ಅವರು “…ನಮಗೆ ಕೇವಲ 15 ಸೆಕೆಂಡ್‌ಗಳು ಸಾಕು,” ಎಂದು ತಿರುಗೇಟು ನೀಡಿರುವುದು ವಿವಾದಕ್ಕೀಡಾಗಿದೆ.

ನವನೀತ್‌ ರಾಣಾ ಅವರು ಮಹಾರಾಷ್ಟ್ರದ ಅಮರಾವತಿಯ ಮಾಜಿ ಸಂಸದೆಯಾಗಿದ್ದು 2013ರಲ್ಲಿ ಅಕ್ಬರುದ್ದೀನ್‌ ಉವೈಸಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ “ಕಿರಿಯ ಸೋದರ ಹೇಳಿದ್ದರು “ಪೊಲೀಸರನ್ನು 15 ನಿಮಿಷ ತೆಗೆದುಹಾಕಿ, ನಾವೇನು ಮಾಡಬಲ್ಲೆವೆಂದು ತೋರಿಸಬಲ್ಲೆವು ಎಂದಿದ್ದರು. ಅವರಿಗೆ ಹೇಳಬಯಸುತ್ತೇನೆ, ನಿಮಗೆ 15 ನಿಮಿಷಗಳು ಬೇಕಾಗಬಹುದು… ಆದರೆ ನಮಗೆ ಕೇವಲ 15 ಸೆಕೆಂಡ್‌ಗಳು ಸಾಕು…” ಎಂದು ಹೇಳಿದ್ದಾರೆ.

“ಹೈದರಾಬಾದ್‌ ನಗರವು ಪಾಕಿಸ್ತಾನ ಆಗಿ ಪರಿವರ್ತನೆಗೊಳ್ಳುವುದನ್ನು ಮಾಧವಿ ಲತಾ ಖಂಡಿತ ತಡೆಯುತ್ತಾರೆ,” ಎಂಬ ವಿವಾದಾತ್ಮಕ ಹೇಳಿಕೆಯನ್ನೂ ರಾಣಾ ನೀಡಿದ್ದಾರೆ.

“ನೀವು ಎಐಎಂಐಎಂ ಅಥವಾ ಕಾಂಗ್ರೆಸ್‌ಗೆ ಮತ ನೀಡಿದರೆ, ಅದು ನೇರವಾಗಿ ಪಾಕಿಸ್ತಾನಕ್ಕೆ ಹೋಗುತ್ತದೆ. ಪಾಕಿಸ್ತಾನ ತೋರಿಸುತ್ತಿರುವ ಎಐಎಂಐಎಂ ಮತ್ತು ರಾಹುಲ್‌ ಪ್ರೀತಿಯನ್ನು ನೋಡಿದರೆ, ಪಾಕ್‌ ಸಂಜ್ಞೆಯಂತೆ ದೇಶದ ಆಡಳಿತ ನಡೆಸಿದ ಕಾಂಗ್ರೆಸ್‌ನಂತೆ.. ಇಂದು ಅದೇ ಪಾಕ್‌ ಕಾಂಗ್ರೆಸ್‌ ಮತ್ತು ಎಐಎಂಐಎಂ ಮೇಲೆ ಪ್ರೀತಿ ತೋರಿಸುತ್ತಿದೆ,” ಎಂದು ಹೇಳಿದರು.

ರಾಣಾ ಅವರ ಪೋಸ್ಟ್‌ಗೆ ಉವೈಸಿ ಸೋದರರನ್ನೂ ಟ್ಯಾಗ್‌ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಸದುದ್ದೀನ್‌ ಉವೈಸಿ “ನಾನು ಮೋದೀಜೀಗೆ ಹೇಳುತ್ತಿದ್ದೇನೆ, ಆಕೆಗೆ 15 ಸೆಕೆಂಡ್‌ ನೀಡಿ. ಅವರೇನು ಮಾಡುತ್ತಾರೆ? ಆಕೆಗೆ 15 ಸೆಕೆಂಡ್‌ ನೀಡಿ, ಒಂದು ಗಂಟೆ ಬೇಕಾದರೂ ನೀಡಿ. ಅವರೇನು ಮಾಡಬಲ್ಲರೆಂದು ನಾವು ನೋಡಬಯಸುತ್ತೇವೆ. ಅವರಲ್ಲಿ ಮಾನವೀಯತೆ ಉಳಿದಿದೆಯೇ? ಯಾರಿಗೆ ಭಯವಿದೆ? ಯಾರಾದೂ ಈ ರೀತಿ ಬಹಿರಂಗ ಕರೆ ನೀಡುತ್ತಾರಾದರೆ ಹಾಗೆಯೇ ಆಗಲಿ. ಯಾರು ನಿಮ್ಮನ್ನು ತಡೆಯುತ್ತಾರೆ?” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News