ಪ.ಜಾತಿ, ಪಂಗಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಗುರಿ ಪಡೆಯಿರಿ: ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್

Update: 2015-12-31 18:33 GMT

ಉಡುಪಿ, ಡಿ.31: ಜಿಲ್ಲೆಯ ಪರಿಶಿಷ್ಟ ಜಾತಿ ಪಂಗಡಗಳ ಜನರ ಶ್ರೇಯೋಭಿವೃದ್ಧಿಗಾಗಿ ಜಿಲ್ಲಾ ಕೇಂದ್ರಗಳಿಗೆ ಹಂಚಿಕೆ ಮಾಡುವ ಗುರಿಯ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳು ತಮ್ಮ ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಹೆಚ್ಚಿನ ಗುರಿಯನ್ನು ಕೇಳಿ ಪಡೆಯುವಂತೆ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಹೇಳಿದ್ದಾರೆ.

ಗುರುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡದ ಜನರ ಹಿತರಕ್ಷಣಾ ಸಮಿತಿ ಹಾಗೂ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಮರಳುಗಾರಿಕೆಗೆ ಲೈಸೆನ್ಸ್ ನೀಡುವ ಸಂದರ್ಭ ಪ.ಜಾತಿ ಪಂಗಡದ ವ್ಯಕ್ತಿಗಳಿಗೂ ಮೀಸಲಾತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಸ್ಥಳೀಯರ ಬದಲು ಹೊರ ರಾಜ್ಯದ ಜನರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿ ರುವ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕೆಲಸ ಮಾಡುವ ನೌಕರರಿಗೆ ಕಡ್ಡಾಯವಾಗಿ ‘ಹೆಪಟಿಟೈಸ್ ಬಿ’ ಇಂಜೆಕ್ಷನ್ ನೀಡುವಂತೆ ಹಾಗೂ ಅವರ ಕುಟುಂಬ ವರ್ಗದವರಿಗೂ ಸಹ ಈ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು, ಉಡುಪಿ ನಗರಸಭೆಯಲ್ಲಿ ಪೌರಕಾರ್ಮಿಕರು ಮತ್ತವರ ಕುಟುಂಬ ವರ್ಗ ದವರೂ ಸೇರಿದಂತೆ 392 ಮಂದಿಗೆ, ಕಾರ್ಕಳದಲ್ಲಿ 31, ಸಾಲಿಗ್ರಾಮದಲ್ಲಿ 15, ಕುಂದಾಪುರದಲ್ಲಿ 55 ಮಂದಿಗೆ ಇಂಜೆಕ್ಷನ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಮಿಕರಿಗೆ ಕೆಲಸ ಮಾಡಲು ಸುರಕ್ಷಾ ಉಪಕರಣಗಳನ್ನು ನೀಡುವಂತೆ ಹಾಗೂ ಗ್ರಾಪಂ ನಲ್ಲೂ ಸಹ ಪೌರಕಾರ್ಮಿಕರಿಗೆ ಇಂಜೆಕ್ಷನ್ ನೀಡಲು ಹಾಗೂ ಸುರಕ್ಷಾ ಉಪಕರಣಗಳನ್ನು ಒದಗಿಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಎಲ್ಲಾ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿಯ ಸಂಪೂರ್ಣ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಪಡೆಯುವಂತೆ ಹಾಗೂ ದಲಿತರ ಭೂ ಸಮಸ್ಯೆಗಳ ಕುರಿತಂತೆ ಪ್ರತ್ಯೇಕ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ವಿವಿಧ ದಲಿತ ಸಂಘಟನೆಗಳ ಮುಖಂಡರಿಗೆ ತಿಳಿಸಿದರು.

ಜಿಲ್ಲೆಯ ಕೆಲವು ಗ್ರಾಪಂಗಳಲ್ಲಿ ಪ.ಜಾತಿ, ಪಂಗಡದ ಜನ ವಾಸವಿಲ್ಲದೇ ಇದ್ದರೂ ಸಹ ಯೋಜನೆ ಹೆಸರಿನಲ್ಲಿ ರಸ್ತೆ ಮಾಡಲಾ ಗಿದೆ. ಮೀಸಲಿಟ್ಟಿರುವ ಮನೆ ನಿವೇಶನ ಹಂಚಿಕೆ ಸಮಯದಲ್ಲಿ ಯಾರೂ ಇಲ್ಲ ಎಂದು ದಾಖಲಿಸಿ, ಮನೆ ನಿವೇಶನಗಳನ್ನು ಇತರೆ ವರ್ಗದ ಜನರಿಗೆ ಹಂಚಿಕೆ ಮಾಡಿದ್ದಾರೆ ಎಂದ ಸಂಘಟನೆಯ ಮುಖ್ಯಸ್ಥರ ದೂರಿಗೆ ಪ್ರತಿಕ್ರಿಯಿಸಿದ ಅವರು, ಸಂಬಂಧಪಟ್ಟ ಗ್ರಾಪಂಗಳಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಪಂ ಸಿಇಗೆ ಸೂಚಿಸಿದರು.

ಸಭೆಯಲ್ಲಿ ಸುಂದರ ಮಾಸ್ತರ್, ಉದಯ ಕುಮಾರ್ ತಲ್ಲೂರು, ಮಂಜುನಾಥ ಗಿಳಿಯಾರು, ರಮೇಶ್ ಕೋಟ್ಯಾನ್, ಗಣೇಶ ಕೊರಗ, ವಾಸುದೇವ, ಸುಂದರ ಕಪ್ಪೆಟ್ಟು, ವಕೀಲ ಮಹಾಬಲ, ಗಣೆೀಶ್ ರಾಣೆ, ಮೋಹನ್‌ಚಂದ್ರ ಕಾಳವರ್ಕರ್, ಗೀತಾ ಪಡುಬಿದ್ರೆ
, ವಿಶ್ವನಾಥ ಪೇತ್ರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರೇಮನಾಥ ಕಾರ್ಯಕ್ರಮ ನಿರೂಪಿಸಿದರು.

ಮಧೂರಿನಲ್ಲಿ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ರಬ್ಬರ್ ತೋಟ ಮಾಡಿರುವ ಬಗ್ಗೆ ಪರಿಶೀಲಿಸುವಂತೆ ಬಂದ ಕೋರಿಕೆಯನ್ನು ಆಲಿಸಿದ ಜಿಲ್ಲಾಧಿಕಾರಿ ಡಾ.ವಿಶಾಲ್, ಕುಂದಾ ಪುರ ಉಪವಿಭಾಗಾಧಿಕಾರಿ, ಕುಂದಾಪುರ ಡಿವೈಎಸ್ಪಿ, ತಹಶೀಲ್ದಾರ್, ಸರ್ವೇಯರ್ ಹಾಗೂ ಸಂಘಟನೆಗಳ ಮುಖಂಡರು ಸಭೆ ನಡೆಸಿ ಜನವರಿ ಕೊನೆಯೊಳಗೆ ವರದಿ ನೀಡುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಎಸ್ಸಿಪಿ-ಟಿಎಎಸ್ಪಿಯೋಜನೆಯಡಿ ನಿರ್ಮಾಣವಾಗುವ ರಸ್ತೆಗಳಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ಇಡುವಂತೆ ಕೋರಿದ ಸಂಘಟನೆಗಳ ಮುಖ್ಯಸ್ಥರಿಗೆ ಈ ಕುರಿತು ಮನವಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಹೇಳಿದರು.

ಅಂಬೇಡ್ಕರ್ ಭವನ ಪುನರ್ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣ

ಜಿಲ್ಲೆಯ ಅಂಬೇಡ್ಕರ್ ಭವನ ಪುನರ್ ನಿರ್ಮಾಣಕ್ಕಾಗಿ, ನಗರಸಭೆ ವತಿಯಿಂದ 21 ಲಕ್ಷ ರೂ. ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಅಲ್ಲದೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಕಾಮಗಾರಿಯನ್ನು ಎಪ್ರಿಲ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News