ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಶಾರುಕ್,ಆಮಿರ್ ಹೇಳಿಕೆಗಳಲ್ಲಿ ತಪ್ಪಿಲ್ಲ: ಅಪರ್ಣಾ ಸೇನ್
ಹೊಸದಿಲ್ಲಿ,ಜ.3: ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಕುರಿತು ಆಮಿರ್ ಖಾನ್ ಮತ್ತು ಶಾರುಕ್ ಖಾನ್ ಅವರ ಹೇಳಿಕೆಗಳಲ್ಲಿ ಯಾವುದೇ ತಪ್ಪಿಲ್ಲ ಎಂದು ಖ್ಯಾತ ಬಂಗಾಳಿ ನಿರ್ದೇಶಕಿ ಅಪರ್ಣಾ ಸೇನ್ ಹೇಳಿದ್ದಾರೆ.
ಸಾಧ್ವಿ ಪ್ರಾಚಿ ಪ್ರತಿಕ್ರಿಯೆಯು ಧಾರ್ಮಿಕ ಅಸಹಿಷ್ಣುತೆ ವಿರುದ್ಧದ ಪ್ರತಿಭಟನೆಗಿಂತ ಹೆಚ್ಚು ವಿಭಜನಕಾರಿಯಾಗಿದೆ ಎಂದು ಅವರು ನುಡಿದರು.
ರವಿವಾರ ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅವರು, ಇದು ಹಾಸ್ಯಾಸ್ಪದವಾಗಿದೆ. ನಾನು ಆಗ ಸಾಮಾಜಿಕ ಜಾಲತಾಣದಲ್ಲಿ ನನ್ನ ಆಕ್ರೋಶವನ್ನೂ ವ್ಯಕ್ತಪಡಿಸಿದ್ದೆ. ಶಾರುಕ್ ಹೇಳಿದ್ದರಲ್ಲಿ ತಪ್ಪೇನಿದೆ? ವಾಸ್ತವದಲ್ಲಿ ಸಾಧ್ವಿ ಹೇಳಿದ್ದು ಹೆಚ್ಚು ಒಡಕು ಮಾಡುವಂಥದ್ದಾಗಿದೆ. ಆಮಿರ್ ಬಗ್ಗೆ ಹೇಳುವುದಾದರೆ ಅವರು ಟಿವಿಯಲ್ಲಿ ಬಿತ್ತರಗೊಂಡ ಅತ್ಯಂತ ಹೆಚ್ಚು ರಾಷ್ಟ್ರಪ್ರೇಮವನ್ನು ಮೆರೆದ ಕಾರ್ಯಕ್ರಮಗಳಲ್ಲೊಂದಾದ ಸತ್ಯಮೇವ ಜಯತೆಯನ್ನು ನಮಗೆ ನೀಡಿದ್ದಾರೆ. ಅವರು ಮುಸ್ಲಿಮ್ ಆಗಿದ್ದಾರೆ ಎಂಬ ಕಾರಣಕ್ಕೆ ಅವರು ತನ್ನ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶವಿಲ್ಲ ಅಷ್ಟೇ ಎಂದು ಹೇಳಿದರು.
ಇದು ಭಾರತದಲ್ಲಿ ಅಭದ್ರತೆಯ ಮಟ್ಟವನ್ನು ಸೂಚಿಸುತ್ತದೆ. ಆಮಿರ್ರಂತಹವರು ಭಾರತಕ್ಕಿಂತ ಹೆಚ್ಚು ಅಭದ್ರತೆಯನ್ನು ಅನುಭವಿಸುತ್ತಿರುವ ಹಲವಾರು ರಾಷ್ಟ್ರಗಳಿವೆ ಎನ್ನುವುದು ನನಗೆ ಗೊತ್ತು. ಆದರೆ ಭಾರತವೆಂದೂ ಹೀಗಿರಲಿಲ್ಲ ಎಂದು ಸೇನ್ ನುಡಿದರು.
ಭಾರತದಲ್ಲಿ ಧರ್ಮದ ಹೆಸರಿನಲ್ಲಿ ಅಪರಾಧಗಳನ್ನೆಸಗಿರುವವರು ಸಾಮಾನ್ಯವಾಗಿ ಅಭಯವನ್ನು ಹೊಂದಿಯೇ ಅಂತಹ ಕೃತ್ಯಗಳನ್ನೆಸಗಿದ್ದಾರೆ ಎಂದ ಅವರು, ಯಾರೇ ಆದರೂ ಒಬ್ಬ ವ್ಯಕ್ತಿ ಗೋಮಾಂಸ ತಿಂದಿದ್ದಕ್ಕಾಗಿ ಆತನನ್ನು ಕೊಲ್ಲುತ್ತೇವೆ ಎಂದು ಹೇಳಿ ಬಳಿಕ ಯಾವುದೇ ದಂಡನೆಯಿಲ್ಲದೆ ಪಾರಾಗುವುದು ಹೇಗೆ ಸಾಧ್ಯ? ಇದಕ್ಕಾಗಿ ಎರಡು ಗೌರವಾನ್ವಿತ ಧರ್ಮಗಳ ಸ್ವಘೋಷಿತ ರಕ್ಷಕರನ್ನು ದೂರಬೇಕು ಎನ್ನುವುದು ನನ್ನ ಅಭಿಪ್ರಾಯ.ಧರ್ಮಗಳು ಬೆಳೆಯಬೇಕು ಮತ್ತು ವಿಕಸನಗೊಳ್ಳಬೇಕು ಎಂದರು.