ಭಾರತದೊಂದಿಗಿನ ಒಪ್ಪಂದಗಳ ಪರಿಶೀಲನೆಗೆ ಸಮಿತಿ
ಕಠ್ಮಂಡು, ಜ. 14: ನೇಪಾಳದ ಪ್ರಧಾನಿ ಕೆ.ಪಿ. ಒಲಿ ಮುಂದಿನ ತಿಂಗಳು ಭಾರತಕ್ಕೆ ನೀಡುತ್ತಿರುವ ಚೊಚ್ಚಲ ಭೇಟಿಗೆ ಪೂರ್ವಭಾವಿಯಾಗಿ, ಭಾರತದೊಂದಿಗಿನ ಚಾಲ್ತಿಯಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳ ಪರಿಶೀಲನೆಗಾಗಿ ನೇಪಾಳ ಸರಕಾರವು ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಪರಿಶೀಲನೆಗೊಳಪಡುವ ಒಪ್ಪಂದಗಳಲ್ಲಿ 1950ರ ಆಯಕಟ್ಟಿನ ಶಾಂತಿ ಮತ್ತು ಸ್ನೇಹ ಒಪ್ಪಂದವೂ ಸೇರಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸಮಿತಿಯ ನಾಲ್ವರು ವ್ಯಕ್ತಿಗಳ ಹೆಸರುಗಳನ್ನು ಸರಕಾರ ಸೂಚಿಸಿದೆ, ಆದಾಗ್ಯೂ, ಈ ವಿಷಯದಲ್ಲಿ ಔಪಚಾರಿಕ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿಲ್ಲ ಎಂದು ವಾರ್ತಾ ಮತ್ತು ಸಂಪರ್ಕ ಸಚಿವ ಶೆರ್ದಾನ್ ರೈ ಹೇಳಿದರು.
ಮಾಜಿ ಹಣಕಾಸು ಸಚಿವ ಹಾಗೂ ಭಾರತಕ್ಕೆ ನೇಪಾಳದ ಮಾಜಿ ರಾಯಭಾರಿ ಭೇಶ್ ಬಹದೂರ್ ಥಾಪ, ತನಿಖಾ ಆಯೋಗ ಪ್ರಾಧಿಕಾರದ ಮಾಜಿ ಮುಖ್ಯಸ್ಥ ಸೂರ್ಯನಾಥ್ ಉಪಾಧ್ಯಾಯ, ವಿಶ್ವಸಂಸ್ಥೆಯ ಮಾಜಿ ಸಹಾಯಕ ಮಹಾ ಕಾರ್ಯದರ್ಶಿ ಕುಲಚಂದ್ರ ಗೌತಮ್ ಮತ್ತು ಸಿಪಿಎನ್-ಯುಎಂಎಲ್ ಸಂಸದ ರಾಜನ್ ಭಟ್ಟಾರಾಯ್ ಅವರ ಹೆಸರುಗಳನ್ನು ಸಮಿತಿಗೆ ಶಿಫಾರಸು ಮಾಡಲಾಗಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಔಪಚಾರಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ರೈ ತಿಳಿಸಿದರು.