×
Ad

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ: ಭುಗಿಲೆದ್ದ ಜನಾಕ್ರೋಶ

Update: 2016-01-20 23:59 IST

ಬಿಜೆಪಿಯಲ್ಲಿ ತಳಮಳ


ಹೊಸದಿಲ್ಲಿ,ಜ.20: ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ‘ಕ್ರೋಧ, ಪ್ರತೀಕಾರ,ಬಂಡಾಯ’ದ ಎಚ್ಚರಿಕೆಯನ್ನು ನೀಡಿರುವ ಬಿಜೆಪಿ ಹಾಗೂ ಮಾಜಿ ಯೂನಿಯನ್ ನಾಯಕ ಸತ್ಯವಾನ ಪಾಸ್ವಾನ್ ಅವರ ಟ್ವೀಟ್ ದೇಶದಲ್ಲಿ ತನ್ನ ಸಾಮಾಜಿಕ ಮತ್ತು ಮತದಾರ ಬುನಾದಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿರುವ ಕೇಸರಿ ಪಕ್ಷದೊಳಗೆ ಆತಂಕವನ್ನು ಸೃಷ್ಟಿಸಿದೆ.


ವೇಮುಲಾ ಅವರ ಆತ್ಮಹತ್ಯೆ ಕುರಿತು ದೇಶಾದ್ಯಂತ ಕೇಳಿ ಬರುತ್ತಿರುವ ಆಕ್ರೋಶ ಮತ್ತು ವೇಮುಲಾ ಅವರು ವಿದ್ಯಾರ್ಥಿಯಾಗಿದ್ದ ಹೈದರಾಬಾದ್ ವಿವಿಯಿಂದ ತಾನು ಪಡೆದಿದ್ದ ಡಾಕ್ಟರೇಟ್ ಪದವಿಯನ್ನು ಹಿಂದಿರುಗಿಸುವ ಖ್ಯಾತ ಕವಿ ಅಶೋಕ ವಾಜಪೇಯಿ ಅವರ ನಿರ್ಧಾರ ಬಿಜೆಪಿಯ ನಾಯಕರನ್ನು ಕಳವಳಕ್ಕೀಡು ಮಾಡಿದೆ.


‘ಅಧಿಕಾರ ರಾಜಕಾರಣದ ಪಾಲುದಾರರು ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಅಥವಾ ಸಿಟ್ಟು,ಪ್ರತೀಕಾರ,ಬಂಡಾಯ ಮತ್ತು ಪ್ರತಿಕ್ರಿಯೆಗಳನ್ನು ಎದುರಿಸಲು ಸಿದ್ಧರಿರಬೇಕು’ ಎಂದು ಬಿಜೆಪಿಯ ಪರಿಶಿಷ್ಟ ಜಾತಿಗಳ ಮೋರ್ಚಾದ ಮಾಜಿ ಮುಖ್ಯಸ್ಥರೂ ಆಗಿರುವ ಪಾಸ್ವಾನ್ ಮಂಗಳವಾರ ಟ್ವೀಟಿಸಿದ್ದರು.

ಅವರು ಮುಂಬರುವ ಕೇರಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳನ್ನು ಗಮನಿಸಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿರಬಹುದು ಎನ್ನುವುದು ರಾಜಕೀಯ ಪಂಡಿತರ ಅಂಬೋಣ. ಇವೆರಡೂ ರಾಜ್ಯಗಳು ಗಣನೀಯ ಪ್ರಮಾಣದಲ್ಲಿ ದಲಿತ ಜನಸಂಖ್ಯೆಯನ್ನು ಹೊಂದಿದ್ದು, ದಲಿತರನ್ನು ಓಲೈಸುವ ಬಿಜೆಪಿಯ ಯೋಜನೆಗಳನ್ನು ವಿಫಲಗೊಳಿಸಲು ವಿರೋಧ ಪಕ್ಷಗಳು ಪ್ರಸಕ್ತ ಬಿಕ್ಕಟ್ಟನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ದಲಿತರನ್ನು ಓಲೈಸುವ ಬಿಜೆಪಿಯ ಕಸರತ್ತಿನ ಮೇಲೆ ಈ ಘಟನೆಯು ಬೀರಬಹುದಾದ ಪರಿಣಾಮದ ಬಗ್ಗೆ ಪಕ್ಷದ ನಾಯಕರು ಚಿಂತಿತರಾಗಿದ್ದಾರೆ.
ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ್‌ನಂತಹ ರಾಜ್ಯಗಳಲ್ಲಿ ದಲಿತರ ಮತಗಳು ಮಹತ್ವಪೂರ್ಣವಾಗಿವೆ.


ಈ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳ ಮತಗಳಿಗಾಗಿ ಬಿಜೆಪಿಯೊಂದಿಗೆ ಪೈಪೋಟಿಯಲ್ಲಿರುವ ಕಾಂಗ್ರೆಸ್ ಮತ್ತು ಬಿಎಸ್‌ಪಿಯಂತಹ ನಮ್ಮ ವಿರೋಧ ಪಕ್ಷಗಳಿಗೆ ಇಂತಹ ವಿವಾದಗಳು ಹೆಚ್ಚಿನ ಬಲವನ್ನು ನೀಡುತ್ತವೆ. ಈ ವಿವಾದವನ್ನು ಹೈದರಾಬಾದ್ ವಿವಿಯ ಗಡಿಯ ಹೊರಗೆ ಹರಡುವ ಅವುಗಳ ಪ್ರಚಾರ ತಂತ್ರವನ್ನು ನಾವು ಎದುರಿಸಬೇಕಾದ ಅಗತ್ಯವಿದೆ ಎಂದು ಬಿಜೆಪಿ ನಾಯಕರೋರ್ವರು ಹೇಳಿದರು.


 ಕೇಂದ್ರ ಸಚಿವರಾದ ಸ್ಮತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಅವರು ನೀಡಿದ್ದಾರೆನ್ನಲಾದ ಕುಮ್ಮಕ್ಕಿನ ಮೇರೆಗೆ ವಿವಿಯು ವಿದ್ಯಾರ್ಥಿ ರಾಜಕಾರಣದಲ್ಲಿ ಪಾಲ್ಗೊಂಡಿದ್ದಕ್ಕಾಗಿ ವೇಮುಲಾ ಮತ್ತು ಅವರ ಕೆಲವು ಸಹಪಾಠಿಗಳ ವಿರುದ್ಧ ಶಿಸ್ತುಕ್ರಮಗಳನ್ನು ಆರಂಭಿಸಿದ ಬಳಿಕ ಎರಡನೆ ವರ್ಷದ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ವೇಮುಲಾ ಅವರು ಜ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.


ರಾಜಕೀಯದಲ್ಲಿ ತನ್ನ ಅಸ್ತಿತ್ವಕ್ಕಾಗಿ ದಲಿತ ಮತಗಳನ್ನೇ ನೆಚ್ಚಿಕೊಂಡಿರುವ ರಾಂ ವಿಲಾಸ್ ಪಾಸ್ವಾನ್‌ರ ಲೋಕ ಜನಶಕ್ತಿ ಪಾರ್ಟಿಯಂತಹ ಬಿಜೆಪಿಯ ಮಿತ್ರಪಕ್ಷಗಳನ್ನೂ ಈ ವಿವಾದವು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಭುಗಿಲೆದ್ದಿರುವ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿ ಪಾಸ್ವಾನ್ ಅವರು ಪ್ರಕರಣದ ಕುರಿತು ‘ಉನ್ನತ ಮಟ್ಟದ ತನಿಖೆ ’ಗೆ ಆಗ್ರಹಿಸಿರುವ ಜೊತೆಗೆ ತನ್ನ ಸಂಸದ ಸೋದರ ರಾಮಚಂದ್ರ ಪಾಸ್ವಾನ್ ನೇತೃತ್ವದಲ್ಲಿ ಸತ್ಯಶೋಧನಾ ತಂಡವೊಂದನ್ನು ಹೈದರಾಬಾದ ವಿವಿಗೆ ಕಳುಹಿಸಿದ್ದಾರೆ.

♦♦♦

ಕೇಂದ್ರ ಸಚಿವರೇ ನೇರ ಹೊಣೆ: ಸಿದ್ದರಾಮಯ್ಯ


ಬೆಂಗಳೂರು, ಜ.20: ಹೈದರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಸಂಬಂಧ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಹಾಗೂ ಸ್ಮತಿ ಇರಾನಿ ನೈತಿಕ ಹೊಣೆ ಹೊರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ಬುಧವಾರ ವಿಧಾನ ಸೌಧದಲ್ಲಿನ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನೈತಿಕ ಹೊಣೆ ಹೊರಬೇಕು ಎಂದರೆ ಅವರಿಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಅರ್ಥ. ಆ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.


ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಕೇಂದ್ರ ಮಾನವ ಸಂಪನ್ಮೂಲ ಸಚಿವೆಗೆ ಪತ್ರವೊಂದನ್ನು ಬರೆದು ಒತ್ತಡ ಹೇರಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಸೇರಿ ದಲಿತ ವಿದ್ಯಾರ್ಥಿಗಳನ್ನು ವಿವಿಯಿಂದ ಅಮಾನತು ಮಾಡಿರುವುದು ಖಂಡನೀಯ ಎಂದು ಸಿದ್ಧರಾಮಯ್ಯ ಟೀಕಿಸಿದರು. ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದ ಸಿದ್ದರಾಮಯ್ಯ, ರಾಜ್ಯದ ಯಾವುದೇ ವಿಶ್ವ ವಿದ್ಯಾನಿಲಯಗಳಲ್ಲಿ ಕಿರುಕುಳ ನೀಡುತ್ತಿರುವ ಪ್ರಕರಣಗಳ ಕುರಿತು ಮಾಹಿತಿಯಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News