ವೇಮುಲಾ ಆತ್ಮಹತ್ಯೆ : ಸ್ಮತಿ ಇರಾನಿ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ ವಿ.ವಿ. ವೈದ್ಯಾಧಿಕಾರಿ
ನವದೆಹಲಿ : ಬುಧವಾರದಂದು ಸಂಸತ್ತಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ತನ್ನ ಆಕ್ರೋಶಭರಿತ ಹಾಗೂ ಭಾವನಾತ್ಮಕ ಭಾಷಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಮೃತದೇಹದ ಬಳಿ ಯಾವುದೇ ವೈದ್ಯರನ್ನುಮರುದಿನ ಬೆಳಿಗ್ಗೆ 6.30ರವರೆಗೆ ಬರಲು ಬಿಟ್ಟಿಲ್ಲವೆಂದು ತೆಲಂಗಣಾ ಪೊಲೀಸರು ಹೈಕೋರ್ಟಿಗೆ ತಿಳಿಸಿದ್ದರು ಎಂದು ಹೇಳಿದ್ದರು.ಆದರೆ ಅಂತರ್ಜಾಲ ಸುದ್ದಿ ತಾಣ ನ್ಯೂಸ್ ಮಿನಿಟ್ಗೆ ದೊರೆತ ದಾಖಲೆಗಳು ಸಚಿವೆಯ ಹೇಳಿಕೆಗೆ ತದ್ವಿರುದ್ಧವಾದುದನ್ನು ಹೇಳುತ್ತಿದೆ.
ಸಂಸತ್ತಿನಲ್ಲಿ ಮಾತನಾಡುತ್ತಾ ಇರಾನಿಯವರು ‘‘ಪೊಲೀಸರು ಹೀಗೆಂದು ಹೇಳಿದ್ದರು.ಮಗುವಿನ ಬಳಿ, ಆತನ ಜೀವವುಳಿಸಲು ಯಾರನ್ನೂ ಹೋಗಗೊಡಲಿಲ್ಲ. ಬದಲಾಗಿ ಆತನ ದೇಹವನ್ನು ರಾಜಕೀಯ ಅಸ್ತ್ರವನ್ನಾಗಿಸಲಾಯಿತು.’’
ಜನವರಿ 17ರಂದು ರೋಹಿತ್ ಮೃತ ದೇಹ ನ್ಯೂ ರಿಸರ್ಚ್ ಸ್ಕಾಲರ್ಸ್ ಹಾಸ್ಟೆಲ್ನ ಕೊಠಡಿ ಸಂಖ್ಯೆ 207ರಲ್ಲಿ ಸಂಜೆ 6.30ರಿಂದ 7ರ ನಡುವೆ ಪತ್ತೆಯಾಗಿತ್ತ್ತು. ರೋಹಿತ್ ಗೆಳೆಯ ಉಮಾ ಮಹೇಶ್ವರ್ಗೆ ಸೇರಿದ ಕೊಠಡಿ ಅದಾಗಿತ್ತು. ಸುರಕ್ಷಾ ಸಿಬಬಂದಿಗಳು ರೋಹಿತ್ ದೇಹ ಸೀಲಿಂಗ್ ಫ್ಯಾನ್ನಿಂದ ನೇತಾಡುತ್ತಿರುವುದನ್ನು ನೋಡಿ ಕರ್ತವ್ಯದಲ್ಲಿದ್ದ ಮುಖ್ಯ ವೈದ್ಯಾಧಿಕಾರಿ ಎಂ ರಾಜ್ಶ್ರೀಯವರಿಗೆ ಸುದ್ದಿ ಮುಟ್ಟಿಸಿದರು.
‘‘ನನಗೆ ಸುಮಾರು 7.20ರ ಹೊತ್ತಿಗೆ ಕರೆ ಬಂತು, ನಾನು ದೇಹವನ್ನು ಪರೀಕ್ಷಿಸಲು ಹಾಸ್ಟೆಲ್ಗೆ ಧಾವಿಸಿದೆ. ನಾನು ಅಲ್ಲಿ ತಲುಪಬೇಕಾದರೆ, ದೇಹವನ್ನು ಕೆಳಗಿಳಿಸಲಾಗಿತ್ತು.ಹತ್ತು ನಿಮಿಷಗಳೊಳಗಾಗಿ ನಾವು ಆತ ಮೃತಪಟ್ಟಿದ್ದಾನೆಂದು ಘೋಷಿಸಿದೆವು. ನಾನು ವಿಸಿಯವರಿಗೆ ಕೂಡಲೇ ಮಾಹಿತಿ ನೀಡಿದೆ. ಆತನನ್ನು ಬದುಕಿಸುವ ಸಾಧ್ಯತೆಗಳಿವೆಯೇ ಎಂದು ಅವರು ಕೇಳಿದರು. ಆ ದಿನ ನಾನಲ್ಲಿ ಬೆಳಿಗ್ಗೆ 3 ಗಂಟೆ ತನಕ ಇದ್ದೆ,’’ಎಂದು ಡಾ. ರಾಜ್ಶ್ರೀ ನ್ಯೂಸ್ಮಿನಿಟ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿಶ್ವವಿದ್ಯಾನಿಲಯದ ಹೆಲ್ತ್ ಬುಕ್ನಲ್ಲಿಯೂ ಆಕೆದಾಖಲಿಸಿದ್ದು. ಅದರಲ್ಲಿ ಅವರುಜನವರಿ 17ರಂದು ರೋಹಿತ್ ಮೃತಪಟ್ಟ ಸಮಯ ಸುಮಾರು 7.30ರ ಹೊತ್ತಿಗೆ ಎಂದು ಬರೆದಿದ್ದಾರೆ.’’ ‘‘ದೇಹ ತಣ್ಣಗಾಗಿತ್ತು, ಹೊಟ್ಟೆಯ ಭಾಗ ರಕ್ತಸಿಕ್ತವಾಗಿದ್ದು, ನಾಲಗೆ ಹೊರಕ್ಕೆ ಚಾಚಿತ್ತು ಹಾಗೂ ಬಾಯಲ್ಲಿ ನೊರೆ ಕಾರಿತ್ತು. ಉಸಿರಾಟ ಹಾಗೂ ಎದೆ ಬಡಿತವಿರಲಿಲ್ಲ. ವಿಸಿ, ಡಿಎಸ್ಡಬ್ಲ್ಯು, ರಿಜಿಸ್ಟ್ರಾರ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ,’’ ಎಂದು ಬರೆದು ಡಾ ರಾಜ್ಶ್ರೀ ಸಹಿ ಹಾಕಿದ್ದಾರೆ.
ಆದರೆ ಸಚಿವೆ ಸ್ಮತಿ ಇರಾನಿ ತೆಲಂಗಣಾ ಪೊಲೀಸರ ವರದಿಯನ್ನು ಉಲ್ಲೇಖಿಸುತ್ತಾ ಸಂಸತ್ತಿನಲ್ಲಿ ಹೀಗೆ ಹೇಳಿದ್ದರು -‘‘ ತೆಲಂಗಣಾ ಹೈಕೋರ್ಟಿಗೆ ಸಲ್ಲಿಸಲಾದ ವರದಿಯೊಂದರ ಪ್ರಕಾರ, ಪೊಲೀಸರು ರೋಹಿತ್ನ ಹಾಸ್ಟೆಲ್ಗೆ ಸಂಜೆ7.20ಕ್ಕೆ ತಲುಪಿದಾಗ ಅವರು ಮೃತ ದೇಹವನ್ನು ಕಂಡರು. ಅಲ್ಲಿ ಕೊಠಡಿ ತೆರೆದಿತ್ತು ಹಾಗೂ ಮೃತ ದೇಹ ಮೇಜಿನ ಮೇಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೈಬರಹದ ಡೆತ್ ನೋಟ್ ಪತ್ತೆಯಾಗಿತ್ತು.ಅದು ಯಾರನ್ನೂ ದೂರಿಲ್ಲ. ಇದು ನನ್ನ ಹೇಳಿಕೆಯಲ್ಲ. ಪೊಲೀಸರು ಹೀಗೆಂದು ಹೇಳಿದ್ದಾರೆ.’’
ಅದೇ ದಾಖಲೆಯನ್ನು ಉಲ್ಲೇಖಿಸುತ್ತಾ ವೇಮುಲ ದೇಹದ ಬಳಿ ಯಾರೂ ಯಾವುದೇ ವೈದ್ಯರನ್ನು ಬಿಟ್ಟಿಲ್ಲವೆಂದು ಸ್ಮತಿ ಹೇಳಿದರೆ,ತಾನು ದೇಹವನ್ನು ಪರೀಕ್ಷಿಸಿದಾಗ ಪೊಲೀಸರಿದ್ದರು ಎಂದು ಡಾ. ರಾಜ್ಶ್ರೀ ಹೇಳಿದ್ದಾರೆ. ಇನ್ನೊಬ್ಬ ಮುಖ್ಯ ವೈದ್ಯಾಧಿಕಾರಿ ರವೀಂದ್ರ ಕುಮಾರ್ ಕೂಡ ಡ್ಯೂಟಿ ಡಾಕ್ಟರ್ ರಾಜ್ಶ್ರೀಯವರು ರೋಹಿತ್ ದೇಹವನ್ನು ಪರೀಕ್ಷಿಸಿದ್ದರೆಂದು ಹೇಳಿದ್ದಾರೆ. ‘‘ರೋಹಿತ್ ಮೃತಪಟ್ಟಿದ್ದಾನೆಂದು ದೃಢಪಟ್ಟಾಗ ನಾನು ವಿಸಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ’’ ಎಂದು ಕುಮಾರ್ ಹೇಳಿದರು.
ರೋಹಿತ್ ಸ್ನೇಹಿತ ಹಾಗೂ ವಜಾಗೊಂಡ ನಾಲ್ವರು ವಿದ್ಯಾರ್ಥಿಗಳಲ್ಲೊಬ್ಬನಾದ ಡೋಂತಾ ಪ್ರಶಾಂತ್ ಕೂಡ ಸಚಿವೆಯ ಹೇಳಿಕೆಯನ್ನು ಖಂಡಿಸಿದ್ದು ರೋಹಿತ್ ಮೃತ ದೇಹ ಪತ್ತೆಯಾದಾಗ ತಾವೆಲ್ಲರೂ ಹಾಸ್ಟೆಲ್ನಲ್ಲಿದ್ದು ಡಾ ರೋಹಿಣಿಯವರು ರೋಹಿತ್ ದೇಹದ ತಪಾಸಣೆ ನಡೆಸಿದ್ದರೆಂದು ಹೇಳಿದ್ದಾನೆ.