ಮಂಗಳೂರು : ಮರಳು ಪರ್ಮಿಟ್: 15 ದಿನಗಳೊಳಗೆ ಕ್ರಮ- ಸಚಿವ ರೈ

Update: 2016-03-03 13:56 GMT

ಮಂಗಳೂರು,ಮಾ.3:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಪರ್ಮಿಟ್‌ಗಳನ್ನು ನೀಡುವ ಸಂಬಂಧ ಮುಂದಿನ 15 ದಿನಗಳೊಳಗೆ ಸೂಕ್ತ ಕ್ರಮ ಕೈಗೊಂಡು ಮರಳು ಪೂರೈಕೆಗೆ ಪರ್ಮಿಟ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅರಣ್ಯ ಹಾಗೂ ಪರಿಸರ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

 ಅವರು ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ದ.ಕ. ಜಿಲ್ಲಾ ಮರಳು ಪೂರೈಕೆದಾರರ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರೊಂದಿಗೆ ಪರಿಸರ ಇಲಾಖೆಯ ಕಾರ್ಯದರ್ಶಿ ರಾಮಚಂದ್ರ ಅವರು ಉಪಸ್ಥಿತರಿದ್ದರು. ದ.ಕ. ಜಿಲ್ಲೆಯಲ್ಲಿ ಮರಳು ಸಾಗಾಟಕ್ಕೆ ಪರ್ಮಿಟ್ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ಮರಳು ಕೊರತೆಯಾಗದಂತೆ ಪೂರೈಸಲು ಸಿಆರ್‌ಝಡ್ ವ್ಯಾಪ್ತಿಯಿಂದ ಮರಳು ಸಂಗ್ರಹಿಸಿ, ಸಾಗಾಟಕ್ಕೆ ಪರ್ಮಿಟ್ ನೀಡಲು ಸೂಕ್ತ ಕ್ರಮ ಜರುಗಿಸಲಾಗುವುದು. ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳೊಳಗೆ ಅನುಮತಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ನಾಡದೋಣಿ ಮಾಲಕರ ಸಂಘದ ಅಧ್ಯಕ್ಷ ಜೀತೇಂದ್ರ, ಚಂದ್ರಹಾಸ, ಅಶ್ರಫ್ ಗರೋಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News