×
Ad

ಸಚಿವೆಯ ಬೆಂಗಾಲು ವಾಹನ ಢಿಕ್ಕಿ ಪ್ರಕರಣ: ಗೋಗರೆದರೂ ನಿಲ್ಲದ ಸ್ಮತಿ

Update: 2016-03-07 23:56 IST

ಸಚಿವೆಯ ಅಮಾನವೀಯ ವರ್ತನೆ

ಮೃತರ ಮಕ್ಕಳ ಆರೋಪ

ಹೊಸದಿಲ್ಲಿ, ಮಾ.7: ರೋಹಿತ್ ವೇಮುಲಾ ಆತ್ಮಹತ್ಯೆ ಹಾಗೂ ಜೆಎನ್‌ಯು ಪ್ರಕರಣಗಳಲ್ಲಿ ವಿವಾದಗಳ ಸುಳಿಗೆ ಸಿಲುಕಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿಗೆ ಇದೀಗ ಮತ್ತೊಂದು ಗಂಭೀರ ಆರೋಪ ಎದುರಾಗಿದೆ. ಹೊಸದಿಲ್ಲಿಯ ಯಮುನಾ ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಸಚಿವೆಯ ಬೆಂಗಾವಲು ವಾಹನ ಢಿಕ್ಕಿ ಹೊಡೆದು ದಾರುಣವಾಗಿ ಗಾಯಗೊಂಡಿದ್ದ ತಮ್ಮ ತಂದೆಯ ನೆರವಿಗೆ ಆಕೆ ಧಾವಿಸಲಿಲ್ಲ. ಇದರ ಪರಿಣಾಮವಾಗಿ ತಂದೆಗೆ ಸೂಕ್ತ ವೈದ್ಯಕೀಯ ನೆರವು ದೊರೆಯದೆ ಅವರು ಸಾವನ್ನಪ್ಪಬೇಕಾಯಿತು ಎಂದು ಮೃತರ ಮಕ್ಕಳಿಬ್ಬರು ಆರೋಪಿಸಿದ್ದಾರೆ.

ಸಚಿವೆ ಸ್ಮತಿ ಇರಾನಿಯವರ ಬೆಂಗಾವಲು ವಾಹನದ ಢಿಕ್ಕಿಯಿಂದಾಗಿ ತನ್ನ ತಂದೆ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರೂ, ಸಚಿವೆ ಯಾವುದೇ ನೆರವಿಗೆ ಬರಲಿಲ್ಲವೆಂದು ಮೃತ ವೈದ್ಯ ರಮೇಶ್ ನಾಗರ್ ಅವರ ಪುತ್ರ ಅಭಿಷೇಕ್ ನಾಗರ್ ದೂರಿದ್ದಾರೆ.

ತಾವು ಗಾಯಾಳುಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದೆವೆಂದು ಸ್ಮತಿ ಟ್ವೀಟಿಸಿದ್ದರೆ, ಎಫ್‌ಐಆರ್ ದಾಖಲಿಸಿರುವ ಮೃತ ವೈದ್ಯನ ಪುತ್ರ ಅಭಿಷೇಕ್ ನಾಗರ್ ಅದನ್ನು ಅಲ್ಲಗಳೆದಿದ್ದಾರೆ.

ಇರಾನಿ, ಸಂತ್ರಸ್ತರನ್ನು ನಿರ್ಲಕ್ಷಿಸಿ ಸ್ಥಳದಿಂದ ತೆರಳಿದ್ದಾರೆ. ಆಮೇಲೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರೆಂದು ಅವರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ವೇಗವಾಗಿ ಬರುತ್ತಿದ್ದ ಎಚ್‌ಆರ್‌ಡಿ ಸ್ಮತಿ ಇರಾನಿಯವರ ಬೆಂಗಾವಲು ಪಡೆಗೆ ಸೇರಿದ್ದ ಡಿಎಲ್ 3ಸಿ ಬಿಎ 5315 ನೋಂದಣಿ ಸಂಖ್ಯೆಯ ಕಾರು, ಡಾ. ರಮೇಶ್ ನಾಗರ್ ಹಾಗೂ ಇಬ್ಬರು ಮಕ್ಕಳು ವಿವಾಹ ಕಾರ್ಯಕ್ರಮವೊಂದಕ್ಕೆ ಪ್ರಯಾಣಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆಯಿತೆಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ನಾಗರ್‌ರ ಸೋದರ ಸಂಬಂಧಿ 8ರ ಹರೆಯದ ಪಂಕಜ್ ಎಂಬಾತನಿಗೆ ಮಥುರಾ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿಲ್ಲ. ಆತನನ್ನು ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜ್‌ಗೆ ಸ್ಥಳಾಂತರಿಸುವ ಮೊದಲು ಪಂಕಜ್ ನೋವಿನಿಂದ ನರಳುತ್ತ 7 ತಾಸು ಕಾಯಬೇಕಾಯಿತು. ಅಲ್ಲಿ ವೈದ್ಯರು ಆತನ ಮುರಿದ ತೋಳಿಗೆ ಪ್ಲಾಸ್ಟರ್ ಹಾಕಿದರು ಹಾಗೂ ಸಿಟಿ ಸ್ಕಾನ್ ನಡೆಸಿದರು. ಪಂಕಜ್ ಇನ್ನೂ ಪ್ರಜ್ಞಾಹೀನನಾಗಿಯೇ ಇದ್ದಾನೆ.

ರವಿವಾರ ನಸುಕಿನ 4 ಗಂಟೆಯ ಸುಮಾರಿಗೆ ಮಕ್ಕಳನ್ನು ಆ್ಯಂಬುಲೆನ್ಸ್‌ನಲ್ಲಿ ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ಒಯ್ದೆವು. ಅಲ್ಲಿ ವೈದ್ಯರು, ಮೃತನ ಪುತ್ರಿ ಸಂಧಾಲಿಯ ಸಿಟಿ ಸ್ಕಾನ್ ನಡೆಸಿ, ಮುರಿದ ಕೈಗೆ ಪ್ಲಾಸ್ಟರ್ ಹಾಕಿ ಗಾಯಗಳಿಗೆ ಬ್ಯಾಂಡೇಜ್ ಮಾಡಿದರೆಂದು ಸಂಬಂಧಿಕರೊಬ್ಬರು ತಿಳಿಸಿದರು.

ಆದರೆ, ಮಥುರಾ ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಕೀಯ ಅಧೀಕ್ಷಕ ಡಾ. ಕಮಲಾಪ್ರಸಾದ್ ಗರ್ಗ್ ಆರೋಪವನ್ನು ನಿರಾಕರಿಸಿದ್ದು, ತಾವು ಮಕ್ಕಳಿಗೆ ಆ್ಯಂಟಿ ಬಯೋಟಿಕ್ ಮಾತ್ರೆಗಳು, ನೋವು ನಿವಾರಕಗಳನ್ನು ನೀಡಿದ್ದು, ಡ್ರಿಪ್ ಅಳವಡಿಸಿದ್ದೆವು. ತಾನು ಮೂಳೆ ತಜ್ಞ ಹಾಗೂ ಶಸ್ತ್ರ ಚಿಕಿತ್ಸಕರನ್ನು ಸಂಪರ್ಕಿಸಿದೆನಾದರೂ ಅವರು ರಾತ್ರಿ ಬರಲಿಲ್ಲವೆಂದು ಹೇಳಿದ್ದಾರೆ.

.........

ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ನೆರವಾಗಲು ಯತ್ನಿಸಿದ್ದೆ. ಅಪಘಾತದಿಂದಾಗಿ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳು ಕಿಕ್ಕಿರಿದಿದ್ದವು. ದುರದೃಷ್ಟವಶಾತ್ ನನ್ನ ಕಾರು ಹಾಗೂ ಮುಂದಿದ್ದ ಪೊಲೀಸ್ ಕಾರು ಕೂಡಾ ಅಪಘಾತಕ್ಕೀಡಾಯಿತು..
(ಕೇಂದ್ರ ಸಚಿವೆ ಸ್ಮತಿ ಇರಾನಿ ಟ್ವಿಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News